ಕೋಲಾರ: ಕುಡಿಯುವ ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಬಂದಿದ್ದು, ಈ ಸಮಸ್ಯೆಗಳನ್ನು 2-3 ದಿನಗಳಲ್ಲಿ ಪರಿಹರಿಸಲಾಗವುದು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು.
ಇಂದು ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಕೋವಿಡ್-19 ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 118 ಕರೆಗಳು ಬಂದಿದ್ದು, ಇದರಲ್ಲಿ ಶೇಕಡ 70 ರಷ್ಟು ಕರೆಗಳು ಕುಡಿಯುವ ನೀರಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಶೇ.20 ರಷ್ಟು ಕರೆಗಳು ಕೋವಿಡ್-19 ಕುರಿತಂತೆ ಉಳಿದ 10 ರಷ್ಟು ಇತರೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಂದಿವೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಭಾಗದಲ್ಲಿ ಸ್ಪ್ರೇಗಳನ್ನು ಪಂಚಾಯಿತಿಗಳ ವತಿಯಿಂದ ಮಾಡಲಾಗುತ್ತಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಎಲ್ಲರೂ ಮಾಸ್ಕ್ ಧರಿಸುವ ಅಗತ್ಯ ಇಲ್ಲ. ವೈದ್ಯಕೀಯ ಸಿಬ್ಬಂದಿಗಳು ಹಾಗೂ ಕರೋನಾ ಲಕ್ಷಣಗಳು ಇರುವವರು ಮಾಸ್ಕ್ ಧರಿಸಬೇಕು. ಮಾನ್ಯ ಪ್ರಧಾನ ಮಂತ್ರಿಗಳು ಏಪ್ರಿಲ್ 05 ರಂದು ರಾತ್ರಿ 9.00 ಮನೆಯ ಲೈಟ್ಗಳನ್ನು ಆಫ್ ಗಂಟೆಗೆ 9 ನಿಮಿಷಗಳ ಕಾಲ ಮನೆಯಿಂದ ಹೊರಬಂದು ಮೊಂಬತ್ತಿ, ದೀಪ ಅಥವಾ ಟಾರ್ಚ್ನ್ನು ಬೆಳಗಿಸುವಂತೆ ಕರೆ ನೀಡಿದ್ದು, ಎಲ್ಲರು ಒಗ್ಗಟ್ಟಾಗಿ ಇದನ್ನು ಪಾಲಿಸೋಣ ಎಂದು ತಿಳಿಸಿದರು.
ಫೋನ್ ಇನ್ನಲ್ಲಿ ಅಹವಾಲು ಸ್ವೀಕಾರ-ಪರಿಹಾರ
- ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಪರಿಹರಿಸಿ
ಸಿಇಒ: ಖಾಸಗಿ ಬೋರ್ವೆಲ್ ಅಥವಾ ಟ್ಯಾಂಕರ್ ಮೂಲಕ ನೀರಿನ ಸೌಲಭ್ಯ ಕಲ್ಪಿಸಲಾಗುವುದು.
- ಮೈಸೂರಿನಿಂದ ಕೋಲಾರಕ್ಕೆ ಮೊಟ್ಟೆಗಳು ಬರುತ್ತಿದ್ದು, ಇದರಿಂದ ಕರೋನಾ ಹರಡುವುದೇ
ಡಿ.ಸಿ. : ಮೊಟ್ಟೆಗಳಿಂದ ಕರೋನಾ ಹರಡುವುದಿಲ್ಲ ಇದರ ಬಗ್ಗೆ ಆತಂಕ ಬೇಡ.
- ಕರೋನಾ ಸೋಂಕು ತಡೆಯಲು ಎಲ್ಲರೂ ಮಾಸ್ಕ್ ಧರಿಸಬೇಕೇ?
ಡಿ.ಸಿ. : ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಮನೆಯಿಂದ ಹೊರ ಬರದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.
- ಜಿಲ್ಲೆಯಲ್ಲಿ ಕರೋನಾ ಸೋಂಕಿತರು ಇದ್ದಾರೆ ಎಂದು ಹೇಳುತ್ತಿದ್ದಾರೆ ನಿಜವೇ?
ಡಿ.ಸಿ. : ಇಲ್ಲ, ತಪ್ಪು ಮಾಹಿತಿ. ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕರೋನಾ ಸೋಂಕಿತರು ಇಲ್ಲ. ಜನರು ಆತಂಕ ಪಡಬೇಕಿಲ್ಲ.
- ಇ.ಟಿ.ಸಿ.ಎಂ. ಆಸ್ಪತ್ರೆಯ ಮುಂಭಾಗದ ಹಾಸ್ಟೆಲ್ನಲ್ಲಿ ಕರೋನಾ ಶಂಕಿತರನ್ನು ಕ್ವಾರಂಟೈನ್ ಇಡುತ್ತಿದ್ದು, ಸಾರ್ವಜನಿಕರಲ್ಲಿ ಭಯ ಇದೆ.
ಡಿ.ಸಿ. : ವದಂತಿಗಳಿಗೆ ಕಿವಿಗೊಡಬೇಡಿ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಿಮ್ಮ ಮನೆಗಳಲ್ಲಿ ಇರಿ.
- ಪಡಿತರ ವಿತರಣೆಗೆ ಥಂಬ್ ನೀಡಬೇಕೆ?
ಫುಡ್ ಡಿ.ಡಿ.: ಥಂಬ್ ನೀಡುವ ಅಗತ್ಯವಿಲ್ಲ. ಮೊಬೈಲ್ಗೆ ಬರುವ ಓ.ಟಿ.ಪಿ. ನೀಡಿದರೆ ಸಾಕು.
- ಮೊಬೈಲ್ ಸಂಖ್ಯೆಗಳು ಬದಲಾವಣೆ ಆಗಿರುವವರಿಗೆ ಓ.ಟಿ.ಪಿ. ಬರುವುದಿಲ್ಲ. ಪಡಿತರವನ್ನು ಹೇಗೆ ಪಡೆಯಬೇಕು?
ಸಿ.ಇ.ಒ : ಮೊಬೈಲ್ ಸಂಖ್ಯೆ ಬದಲಾವಣೆ ಆಗಿದ್ದು, ಓ.ಟಿ.ಪಿ ಬರದವರಿಗೂ ಪಡಿತರ ವಿತರಣೆ ಮಾಡಲಾಗುವುದು.
- ಲಾಕ್ಡೌನ್ನಿಂದ ಯಾವುದೇ ಆಟೋ ಸಂಚಾರ ಇಲ್ಲ. ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಮಹಿಳೆ ಕರೆ.
ಡಿ.ಸಿ. : ಮಹಿಳೆಯ ವಿಳಾಸವನ್ನು ಪಡೆದು 108 ಆಂಬ್ಯೂಲೆನ್ಸ್ನ್ನು ತಕ್ಷಣ ಕಳುಹಿಸುವಂತೆ ಸ್ಥಳದಲ್ಲಿಯೇ ಡಿಎಚ್ಒಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ. ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಕೆ.ಜಿ.ಎಪ್. ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸಜೀತಾ. ಅಪರ ಜಿಲ್ಲಾಧಿಕಾ ಶಿವಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ವಿಜಯ್ಕುಮಾರ್, ನಗರಸಭೆ ಯೋಜನಾ ನಿರ್ದೇಶಕ ರಂಗಸ್ವಾಮಿ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ನಾಗರಾಜ್ ಕೆಳಗಿನಮನಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)