ಹಾಸನ: ಹಾಸನ ಜಿಲ್ಲೆಯ ಸುತ್ತಮುತ್ತಲಿನ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದರಿಂದ ಜಿಲ್ಲೆಯ ಗಡಿಭಾಗಗಳನ್ನು ಬಂದ್ ಮಾಡಿ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿ ಎಂದು ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಅವರೊಂದಿಗೆ ಎಲ್ಲಾ ತಾಲ್ಲೂಕುಗಳ ಟಾಸ್ಕ್ ಫೋರ್ಸ್ ಸಮಿತಿಯೊಂದಿಗೆ ವೀಡಿಯೋ ಸಂವಾದ ನಡೆಸಿ ಸಚಿವರು ಈ ನಿರ್ದೇಶನ ನೀಡಿದರು.
ಸಕಲೇಶಪುರ ಆಲೂರು ಕ್ಷೇತ್ರದ ಶಾಸಕರಾದ ಹೆಚ್.ಕೆ ಕುಮಾರಸ್ವಾಮಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಜರಿದ್ದರು. ಶಾಸಕರಾದ ಹೆಚ್.ಡಿ ರೇವಣ್ಣ, ಕೆ.ಎಂ ಶಿವಲಿಗೇಗೌಡ, ಸಿ.ಎನ್ ಬಾಲಕೃಷ್ಣ ಕೆ.ಎಸ್ ಲಿಂಗೆಶ್ ಅವರು ತಾಲ್ಲೂಕು ಕೆಂದ್ರಗಳಿಂದ ವೀಡಿಯೋ ಕಾನ್ಫರೆನ್ಸ್ನಲ್ಲಿ ಪಾಲ್ಗೊಂಡು ಹಲವು ವಿಷಯಗಳ ಕುರಿತು ಚರ್ಚಿಸಿದರು.
ಕೊರೊನಾ ಸೋಂಕು ನಿರೀಕ್ಷೆ ಮೀರಿ ದೇಶವನ್ನು ವ್ಯಾಪಿಸಿದ್ದು ಈಗ ಸಾಮಾಜಿಕ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳದಿದ್ದರೆ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿದರು.
ಜಿಲ್ಲೆಯಲ್ಲಿ ಈವರೆಗೂ ಸೋಂಕಿತ ಪ್ರಕರಣಗಳು ಪತ್ತೆಯಾಗದೇ ಇರುವುದು ಸಂತೋಷದ ವಿಚಾರ. ಆದರೆ ಇದೇ ಪರಿಸ್ಥಿತಿಯನ್ನು ಮುಂದಿನ ಒಂದು ತಿಂಗಳವರೆಗೆ ಕಾಯ್ದುಕೊಳ್ಳುವ ಸವಾಲು ನಮ್ಮ ಮುಂದಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಮನೆಮನೆಗೆ ಕಳಿಸಿ ತಪಾಸಣೆ ನಡೆಸಿ, ಜ್ವರದ ಲಕ್ಷಣ ಇರುವವರನ್ನು ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆತಂದು ಇನ್ನಷ್ಟು ತಪಾಸಣೆ ನಡೆಸಿ ಗರಿಷ್ಠ ಮುಂಜಾಗ್ರತೆ ವಹಿಸಿ ಎಂದರು.
ಆರೋಗ್ಯ ಇಲಾಖೆಗೆ ಬೆಕಾದ ಮಾಸ್ಕ್ ಸ್ಯಾನಿಟೈಸರ್ಗಳ ಪೂರೈಕೆ ಹಾಗೂ ಪಿ.ಪಿ ಕಿಟ್ಗಳ ಪೂರೈಕೆ ಸರ್ಕಾರದಲ್ಲಿ ನಿರ್ಧರಿಸಲಾಗಿದೆ. ಅನುದಾನದಲ್ಲಿ ಕೊರತೆ ಇಲ್ಲ. ಎಲ್ಲಾ ಇಲಾಖೆ ಅಧಿಕಾರಿಗಳು ಗರಿಷ್ಠ ಜಾಗೃತಿ ವಹಿಸಬೇಕು, ತಾಲ್ಲೂಕು ಆಡಳಿತಗಳು ಗ್ರಾಮ ಮಟ್ಟದಲ್ಲಿ ಹೆಚ್ಚು ಅರಿವು ಹಾಗೂ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂದರು.
ಇನ್ನು ಎರಡು ಮೂರು ತಿಂಗಳಿಗೆ ಸಾಕಾಗುವಷ್ಟು ಪಡಿತರ ಆಹಾರ ಸಾಮಗ್ರಿಗಳನ್ನು ಆದಷ್ಟು ಬೇಗ ವಿತರಣೆಯಾಗಬೇಕು. ಸಾದ್ಯವಾದರೆ ಮನೆಮನೆಗೆ ಅವುಗಳನ್ನು ತಲುಪಿಸಬೇಕು. ಆಹಾರ ಇಲ್ಲದೆ ಪರದಾಡುವವರು, ನಿರ್ಗತಿಕರಿಗೆ ಜಿಲ್ಲಾಡಳಿತ ಆಹಾರ ತಯಾರಿಸಿ ಪೂರೈಕೆ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಆಸ್ಪತ್ರೆಗಳು ನಿರಂತರ ಸೇವೆ ಸಲ್ಲಿಸಬೇಕು. ಒ.ಪಿ.ಡಿಯಲ್ಲಿ ರೋಗಿಗಳ ತಪಾಸಣೆ ಮಾಡಬೇಕು. ಯಾವುದೇ ಸರ್ಕಾರಿ ವೈದ್ಯರು ರಜೆ ತೆಗೆದುಕೊಳ್ಳುವಂತಿಲ್ಲ. ಸೇವೆ ನೀಡದ ಖಾಸಗಿ ನರ್ಸಿಂಗ್ ಹೊಂಗಳು ಹಾಗೂ ವೈದ್ಯರ ಪರವಾನಗಿ ರದ್ದುಪಡಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಜೆ.ಸಿ ಮಾಧುಸ್ವಾಮಿ ಸೂಚನೆ ನೀಡಿದರು.
ಲೋಕ ಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ, ಹಣ್ಣು, ತರಕಾರಿ ಮಾರುಕಟ್ಟೆ ನಿಯಂತ್ರಣ ಹಾಗೂ ವ್ಯವಸ್ಥಿತ ವಿಲೇವಾರಿ ಬಗ್ಗೆ ಸೂಚನೆ ನೀಡಿದರು.
ಹೋಂ ಗಾರ್ಡ್ಗಳಿಗೆ ವೇತನ ಹಾಗೂ ಸಾರಿಗೆ ಸಮಸ್ಯೆ ಬಗೆಹರಿಯಬೇಕು. ಜಿಲ್ಲಾ ಗಡಿಗಳ ಬಂದ್ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ತಾಲ್ಲೂಕುಗಳಿಗೆ ಅನುದಾನ ಬಿಡುಗಡೆ ಮಾಡಿ ತುರ್ತು ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಪ್ರಜ್ವಲ್ ರೇವಣ್ಣ ಹೇಳಿದರು.
ವೈನ್ ಸ್ಟೋರ್, ಬಾರ್ ರೆಸ್ಟೋರೆಂಟ್ಗಳಲ್ಲಿ ಮಧ್ಯ ಮಾರಾಟ ನಿಷೇಧಿಸಿ ಸೀಲ್ ಮಾಡಿದ್ದರೂ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದೆ. ಸ್ಟಾಕ್ಗಳನ್ನು ಗಮನಿಸಿ ಅಕ್ರಮದಲ್ಲಿ ತೊಡಗಿದ್ದವರ ಪರವಾನಗಿ ರದ್ದು ಪಡಿಸಿ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಶಾಸಕರಾದ ಎಚ್.ಡಿ ರೇವಣ್ಣ, ಇಂತಹ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳು, ಹೂವು ಮಾರಾಟಗಾರರು ಸಹ ಸಂಕಷ್ಟದಲ್ಲಿ ಇದ್ದು ಅವರಿಗೂ ಪಡಿತರ ವಿತರಿಸಿ ಎಂದರು.
ಶಾಸಕ ಕೆ.ಎಂ ಶಿವಲಿಂಗೇಗೌಡ ಮಾತನಾಡಿ ಜಿಲ್ಲಾ ಗಡಿಗಳನ್ನು ನಿಯಂತ್ರಿಸಿ ದಿನಗಳಲ್ಲಿ ಅನಗತ್ಯ ಓಡಾಡುವವರನ್ನು ತಡೆಯಿರಿ. ಬೆಂಗಳೂರಿನಿಂದ ಆಗಮಿಸಿರುವ 20 ಸಾವಿರಕ್ಕೂ ಅಧಿಕ ಮಂದಿಯ ಆರೋಗ್ಯ ತಪಾಸಣೆ ನಡೆಸಿ ನಿರಂತರ ನಿಗಾವಹಿಸಿ, ಬಾಡಿಗೆ ವಾಹನಗಳಲ್ಲಿ ಜನ ಸಾಗಾಟವನ್ನು ಸಂಪೂರ್ಣವಾಗಿ ತಡೆಯಿರಿ ಎಂದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪ ವಿಭಾಗಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ಹಿಮ್ಸ್ ನಿರ್ದೇಶಕರಾದ ಡಾ.ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಕೃಷ್ಣಮೂರ್ತಿ, ತಹಸೀಲ್ದಾರ್ ಶಿವಶಂಕರಪ್ಪ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವಿಜಯ್ ಹಾಗೂ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)