ತಿ.ನರಸೀಪುರ: ತಾಲೂಕಿನಲ್ಲಿ ಲಾಕ್ ಡೌನ್ ಉಲ್ಲಂಘನೆಯಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಸಿರುವ ಶಾಸಕ ಎಂ.ಅಶ್ವಿನ್ ಕುಮಾರ್ ನಾಳೆಯಿಂದ ಸಂಪೂರ್ಣವಾಗಿ ಲಾಕ್ ಡೌನ್ ಮಾಡುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೈಗೊಳ್ಳಬಹುದಾದ ಪೂರ್ವ ಸಿದ್ಧತೆಗಳ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತಾಲೂಕು ಕಚೇರಿ ಯಲ್ಲಿ ಸಭೆ ನಡೆಸಿದ ಶಾಸಕ ಲಾಕ್ ಡೌನ್ ಆದೇಶದ ನಡುವೆಯೂ ಜನತೆ ಕೊರೊನಾದಿಂದ ಆಗಬಹುದಾದ ದುಷ್ಪರಿಣಾಮಗಳ ಅರಿವಿಲ್ಲದೇ ಸಾಮಾನ್ಯ ದಿನಗಳಲ್ಲಿ ಓಡಾಡುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರ ಈ ನಡೆಯಿಂದ ಲಾಕ್ ಡೌನ್ ಉದ್ದೇಶ ಸಫಲವಾಗುವುದಿಲ್ಲ. ತಾಲೂಕಿನಲ್ಲಿ ಲಾಕ್ ಡೌನ್ ಮಾಡಲು ಅಧಿಕಾರಿಗಳು ಹೆಚ್ಚಿನ ಶ್ರಮ ಹಾಕಬೇಕು ಎಂದರು.
ಕೊರೋನಾ ಜನರ ಮನಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಿದ್ದು ಜನರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಇನ್ನು 15 ದಿನಗಳ ಕಾಲ ಯಾರೊಬ್ಬರೂ ಮನೆಯಿಂದ ಹೊರಬರದಂತೆ ಮನವಿ ಮಾಡಿದರು.
ಅಧಿಕಾರಿ ವರ್ಗದವರು ಸಾರ್ವಜನಿಕರಲ್ಲಿ ಕೊರೋನಾ ಮಹಾಮಾರಿಯ ಬಗ್ಗೆ ಇನ್ನು ಹೆಚ್ಚಿನ ಅರಿವು ಮೂಡಿಸಬೇಕು.ಆ ಮೂಲಕ ಮುಖ್ಯ ಮಂತ್ರಿಗಳ ಆದೇಶ ಪಾಲನೆ ಮಾಡಬೇಕೆಂದರು.ಅಗತ್ಯ ಬಿದ್ದಲ್ಲಿ ಪಡಿತರ ಪದಾರ್ಥಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದ ಶಾಸಕರು ತರಕಾರಿ ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡುವಂತೆ ಸೂಚಿಸಿದರು.
ಕ್ವಾರೆಂಟೈನ್ ನಲ್ಲಿದ್ದವರಿಗೆ ಸೋಂಕಿಲ್ಲ
ತಾಲೂಕಿನಲ್ಲಿ ಹೊರ ದೇಶ ಹಾಗೂ ರಾಜ್ಯಗಳಿಂದ ಬಂದಿದ್ದ 15 ವ್ಯಕ್ತಿ ಗಳನ್ನು ಗುರುತಿಸಿ ಹೋಂ ಕ್ವಾರಂಟೈನ್ ನಲ್ಲಿಡಲಾಗಿತ್ತು ಆ ಪೈಕಿ 14 ಮಂದಿಗೆ ಯಾವುದೇ ಸೋಂಕಿಲ್ಲದಿರುವುದು ಕಂಡು ಬಂದಿದೆ ಎಂದು ತಾಲೂಕು ಆಡಳಿತಾಧಿಕಾರಿ ಡಾ.ರವಿಕುಮಾರ್ ಮಾಹಿತಿ ನೀಡಿದರು. ಮತ್ತೊಬ್ಬ ವ್ಯಕ್ತಿಯ ಕ್ವಾರಂಟೈನ್ ಅವಧಿ ಮುಗಿಯಲು ಇನ್ನು ಮೂರು ದಿನ ಬಾಕಿ ಇದೆ ಎಂದರು.
ಬೆನಕನಹಳ್ಳಿ ಯಲ್ಲಿ ಜುಬಿಲಿಯಂಟ್ ನೌಕರರು
ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆಯ ಇಬ್ಬರು ನೌಕರರು ತಮ್ಮ ಹುಟ್ಟೂರಾದ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದು ಆತಂಕ ಮೂಡಿಸಿದೆ.
ಯುಗಾದಿ ಹಬ್ಬಕ್ಕೆ ಬಂದವರು ಮತ್ತೆ ತೆರಳದೆ ಇರುವುದರಿಂದ ಸಮಸ್ಯೆ ಎದುರಾಗಿದೆ. ಇಬ್ಬರಿಗೂ ಮನೆ ಬಿಟ್ಟು ಹೊರ ಹೋಗದಂತೆ ಕಟ್ಟು ನಿಟ್ಟಿನ ಆದೇಶ ನೀಡಲಾಗಿದ್ದು ಆದೇಶ ಉಲ್ಲಂಘಿಸಿದರೆ ಪೊಲೀಸರಿಗೆ ಮಾಹಿತಿ ನೀಡಿ ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಅಲ್ಲದೇ ಜುಬಿಲಿಯಂಟ್ ಕಾರ್ಖಾನೆಯಲ್ಲಿ ನೌಕರನಾಗಿದ್ದ ಚಿದರಹಳ್ಳಿ ಗ್ರಾಮದ ವ್ಯಕ್ತಿ ಯೊಬ್ಬರೂ ಸಹ ಪತ್ನಿ ಹಾಗೂ ಪುತ್ರನನ್ನು ಬಿಟ್ಟು ನಾಪತ್ತೆಯಾಗಿದ್ದು ಆತನಿಗೆ ಸೋಂಕಿದೆಯೇ ಎಂಬುದನ್ನು ಅರಿಯಬೇಕಿದೆ ಎಂದು ಡಾ.ರವಿಕುಮಾರ್ ತಿಳಿಸಿದರು.
ಪೆಟ್ರೋಲ್ ಇಲ್ಲ
ಕೊರೊನಾ ಹರಡುವಿಕೆ ತಡೆಗಟ್ಟುವ ಸಲುವಾಗಿ ಕಠಿಣ ನಿರ್ಧಾರ ಕೈಗೊಂಡಿರುವ ಪೊಲೀಸ್ ಇಲಾಖೆ ಇಂದಿನಿಂದಲೇ ಪೆಟ್ರೋಲ್ ಬಂಕ್ ನಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಇನ್ನಿತರೆ ವಾಹನಗಳಿಗೆ ಪೆಟ್ರೋಲ್ ಹಾಕದಂತೆ ಪೆಟ್ರೋಲ್ ಬಂಕ್ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಅಗತ್ಯ ಸೇವೆ ಸರಕು ಸಾಗಾಣಿಕೆ ವಾಹನಗಳಿಗೆ ಮಾತ್ರ ಪೆಟ್ರೋಲ್ ಹಾಕುವಂತೆ ತಿಳಿಸಿದ್ದು ಇನ್ನಿತರೆ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಹಾಕದಂತೆ ಸೂಚನೆ ನೀಡಿದೆ.
ತಹಸೀಲ್ದಾರ್ ಡಿ.ನಾಗೇಶ್, ಸಿಪಿಐ ಎಂ.ಆರ್.ಲವ, ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಜೆರಾಲ್ಡ್ ರಾಜೇಶ್, ಪುರಸಭಾ ಮುಖ್ಯಾಧಿಕಾರಿ ಆರ್ .ಅಶೋಕ್ ಹಾಗೂ ಹೇಮಂತ್ ಕುಮಾರ್, ಶಿರಸ್ತೇದಾರ್ ಪ್ರಭುರಾಜ್, ಆಡಳಿತ ವೈದ್ಯಾಧಿಕಾರಿ ಜಗನ್ನಾಥ್, ಶಾಯಿ ಎಕ್ಸ್ ಪೋರ್ಟ್ ನ ಅನಿಲ್, ತಾ.ಪಂ.ಸದಸ್ಯ ರತ್ನರಾಜ್, ಮುಖಂಡರಾದ ಬೇವಿನಹಳ್ಳಿ ಸತೀಶ್, ರಮೇಶ್, ಮೂಗೂರು ಕುಮಾರಸ್ವಾಮಿ, ಸಮಾಜ ಸೇವಕ ಮಾದೇಶ್ ಮತ್ತಿತರರಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)