ಕೊಪ್ಪಳ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಹಿಂದೆ ಸೇದಿ ಬಿಸಾಕಿದ ಬೀಡಿ. ಆ ಬೀಡಿಯನ್ನೇ ಇಂದು ಎತ್ತಿಕೊಂಡು ಸೇದಲು ಹೊರಟಿದ್ದಾರೆ ಎಂದರೆ ರಾಜ್ಯದಲ್ಲಿ ಬಿಜೆಪಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಜಾತ್ಯತೀತ ಜನತಾ ದಳದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಜಿಲ್ಲೆ ಕಾರಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಸಂಸದೀಯ ಮಂಡಳಿಯಲ್ಲಿ ಬಿಎಸ್ವೈ ಅವರಿಗೆ ಸ್ಥಾನ ನೀಡಿರುವುದು ಯಾವ ಪುರುಷಾರ್ಥಕ್ಕೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ಯಡಿಯೂರಪ್ಪ ಅವರಿಗೆ ಏನು ಮರ್ಯಾದೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಯಾದಾಗ ಸರಿಯಾಗಿ ಕೆಲಸ ಮಾಡಲು ಬಿಡದೆ ತೆಗೆದು ಹೊರಗೆ ಎಸೆದಿದ್ರು. ಈಗ ಮತ್ತೆ ಅವರನ್ನೇ ಬೇಕು ಬೇಕು ಎನ್ನುತ್ತಿದೆ ಎಂದರೆ ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದು ನಾವು ಬೇರೆ ಹೇಳಬೇಕೆ ಎಂದರು.
ಇನ್ನು ಭವಿಷ್ಯದ ದಿನಗಳಲ್ಲಿ ಜೆಡಿಎಸ್ ಪ್ರಬಲವಾಗಲಿದೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು, ಮುಸ್ಲಿಮರು, ದಕ್ಷಿಣ ಕರ್ನಾಟಕದಲ್ಲಿ ಮುಸ್ಲಿಂ, ಒಕ್ಕಲಿಗರು ಒಂದಾಗಿದ್ದಾರೆ. ನವೆಂಬರ್ ನಂತರ ನೋಡಿ ಜೆಡಿಎಸ್ ಏನು ಎಂಬುವುದು ಗೊತ್ತಾಗಲಿದೆ. ಕೊಪ್ಪಳ ಜಿಲ್ಲೆಯಲ್ಲಿಯೂ ನಮ್ಮ ಪಕ್ಷ ಗೆಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎರಡು ರಾಷ್ಟೀಯ ಪಕ್ಷಗಳ ಮಧ್ಯೆ ಮೂರನೆಯ ಕಣ್ಣಾಗಿ ಜಾತ್ಯತೀತ ಜನತಾ ದಳ (JDS) ಬೆಳೆಯುತ್ತಿದೆ. 1994ರಲ್ಲಿ ಇದ್ದಂತೆ 2023ಕ್ಕೆ ಜೆಡಿಎಸ್ಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಅದನ್ನಿ ಈಗಲೇ ಕಾಣುತ್ತಿದ್ದೇವೆ. ಹೀಗಾಗಿ 2023 ಕ್ಕೆ ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ. ಸಾಬರು ಕ್ಯಾರೆ ಕಾಮ ಎಂದರೆ ಹೂವಾ ಸಾಬ ಎನ್ನುತ್ತಾರೆ. ನಾವು ಹೇಳಿದ ನಂತರ ಇದು ಸಾಧ್ಯ ಎಂದು ಇಬ್ರಾಹಿಂ ವಿಶ್ವಾಸದ ನುಡಿಗಳನ್ನಾಡಿದರು.