ಪಾಂಡವಪುರ: ವಿಶ್ವಮಾರಿ ಕೊರೊನಾದಿಂದ ಇಡೀ ಜಗತ್ತೆ ಒಂದು ರೀತಿ ಕತ್ತಲೆಯಕೋಣೆಯಲ್ಲಿ ವಾಸಮಾಡುಂತೆ ಆಗಿದೆ. ಈ ಹಿನ್ನೆಲೆಯಲ್ಲಿ ಜೀವ ಉಳಿಸಿಕೊಳ್ಳಿ ಎಂದು ಸರ್ಕಾರ ತನ್ನ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರು. ಜನ ಮಾತ್ರ ರೋಗದ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಇಂದು ಮುಂಜಾನೆ ಮಂಡ್ಯ ಜಿಲ್ಲೆಯ ಪಾಂಡವಪುರದ ಮುಖ್ಯ ರಸ್ತೆಗಳಲ್ಲೇ ತರಕಾರಿ ಸೇರಿ ಇತರೆ ಧಾನ್ಯಗಳನ್ನು ಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನ ಮುಗಿಬಿದ್ದಿದ್ದರು. ಅದನ್ನು ಕಂಡ ಪೊಲೀಸರು ಲಾಠಿ ಬೀಸಿ ಚದುರಿಸಿದ್ದಾರೆ. ಇತ್ತ ಎಲ್ಲಿ ಕೊರೊನಾ ವೈರಸ್ ಬಂದು ಎಲ್ಲರ ಜೀವವನ್ನು ಎಲ್ಲಿ ಅಪಹರಿಸುವುದೋ ಎಂಬ ಆತಂಕದಲ್ಲಿ ಸರ್ಕಾರ ಹಲವು ಸೌಲಭ್ಯಗಳನ್ನು ಘೋಷಿಸಿದೆ. ಅದರ ಅರಿವೇ ಇಲ್ಲದಂತೆ ಈ ಜನ ನಡೆದುಕೊಳ್ಳುತ್ತಿರುವುದು ಎಷ್ಟು ಸರಿ.
ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ. ಸ್ಯಾನಿಟೈಸರ್ ಅಂದರೆ ಏನು ಅಂತ ಇನ್ನೂ ಹಲವು ಮಂದಿಗೆ ತಿಳಿದೇ ಇಲ್ಲ. ಈ ರೀತಿಯಾದರೆ ರೋಗ ನಿವಾರಿಸುವುದು ಹೇಗೆ ಸಾಧ್ಯ. ಈ ಜನ ಇನ್ನಾದರೂ ಇಂಥ ಕೆಟ್ಟ ಸಾಹಸವನ್ನು ಮಾಡದೆ. ಮನೆಯಲ್ಲೇ ಇದ್ದು, ಅವಶ್ಯವಿದ್ದಾಗ ಹೊರಗಡೆ ಹೋಗಿ ಬರುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕಿದೆ.
ಇನ್ನು ಪಾಂಡವಪುರ ಅಷ್ಟೇ ಅಲ್ಲ ರಾಜ್ಯದ ಬಹುತೇಕ ಕಡೆಗಳಲ್ಲಿ ನಿತ್ಯ ಇಂಥ ದೃಶ್ಯಗಳನ್ನು ನೋಡುವುದು ಸಾಮಾನ್ಯವಾಗಿ ಬಿಟ್ಟಿದೆ. ರಾಜ್ಯದಲ್ಲಿ ಕೊರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆ ಮತ್ತು ಒಳಗಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೂ ಈರೀತಿ ನಡೆದುಕೊಂಡು ಬೀದಿಲಿ ಹೋಗೋ ಮಾರಿನ ಮನೆಗೆ ಕರೆದುಕೊಂಡಂತೆ ಮಾಡುತ್ತಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ಕೆಲಸವಲ್ಲದೇ ಮತ್ತೇನು?
ಇನ್ನಾದರೂ ದೇಶದ ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿಮ್ಮ ಆರೋಗ್ಯ ಮತ್ತು ಜೀವನ ಕಾಪಾಡಲು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನೀವು ಆರೋಗ್ಯವಾಗಿ ಬದುಕಿ ದೇಶವನ್ನು ಉಳಿಸುವ ಕೆಲಸದಲ್ಲಿ ನಿರತರಾಗಿ.
![](https://vijayapatha.in/wp-content/uploads/2024/02/QR-Code-VP-1-1-300x62.png)