ಹಾಸನ: ಜಿಲ್ಲೆಯಲ್ಲಿ ಕೋವಿಡ್-19 ಲಾಕ್ ಡೌನ್ ನಿಂದ ರೈತರಿಗೆ ಆಗಿರುವ ಸಮಸ್ಯೆಗಳನ್ನು ಬಗೆಹರಿಸಿ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಮಾರುಕಟ್ಟೆಗಳನ್ನು ಕಲ್ಪಿಸುವಂತೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸೂಚನೆ ನೀಡಿದ್ದಾರೆ.
ಹಾಸನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿನ ಮಾರುಕಟ್ಟೆಗೆ ಭೇಟಿ ನೀಡಿ ನಡೆಯುತ್ತಿರುವ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ಪರಿಶೀಲಿಸಿ, ರೈತರು ಹಾಗೂ ವರ್ತಕರೊಂದಿಗೆ ಮಾತಾನಾಡಿ ಅಭಿಪ್ರಾಯ ಆಲಿಸಿದ ಸಚಿವರು ನಂತರ ಎ.ಪಿ.ಎಂ.ಸಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಹಲವು ನಿರ್ದೇಶ ನೀಡಿದರು.
ಹಾಸನದಲ್ಲಿ ಹೆಚ್ಚುವರಿಯಾಗಿ ಬೆಳೆಯುತ್ತಿರುವ ಮೆಣಸಿನಕಾಯಿ, ಕೋಸು, ಸಿಹಿ ಕುಂಬಳ ಮತ್ತಿತರ ತರಕಾರಿಗಳಿಗೆ ಬೇರೆ ಸ್ಥಳಗಳಲ್ಲಿ ಇರುವ ಬೇಡಿಕೆ ಗುರುತಿಸಿ ರೈತರಿಸಿ ಸಂಪರ್ಕ ಒದಗಿಸಿ ಮಾರಾಟಕ್ಕೆ ಸಹಕಾರ ಒದಗಿಸಿ ಎಂದು ಸಚಿವರು ಎ.ಪಿ.ಎಂ.ಸಿ ಹಾಗೂ ತೋಟಗಾರಿಕಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಹಕಾರಿ ಬ್ಯಾಂಕ್ಗಳಲ್ಲಿ ರೈತರಿಗೆ ಸಾಲಸೌಲಭ್ಯಕ್ಕೆ ಯಾವುದೇ ತೊಂದರೆಯಾಗದಂತೆ ಗಮನ ಹರಿಸಿ ಪಹಣಿಗಳು ಸುಲಭವಾಗಿ ಲಭ್ಯವಾಗುವಂತೆ ಸೌಲಭ್ಯ ಕಲ್ಪಿಸಿ ಎಂದು ತಿಳಿಸಿದರು.
ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ ಶೈತ್ಯಾಗಾರದ ಕೊರತೆ ಹಾಗೂ ಮಾರುಕಟ್ಟೆ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಅದಷ್ಟುಬೇಗ ಜಿಲ್ಲೆಗೆ ಅಗತ್ಯವಿರುವ ಶೈಥ್ಯಾಗಾರ ಹಾಗೂ ಗೋದಾಮು ವ್ಯವಸ್ಥೆಗಳಿಗೆ ನೆರವು ಒದಗಿಸಲಾಗುವುದು ಎಂದು ಸಚಿವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ ಚಾಮುಂಡಿ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿರುವುದರಿಂದ ಕಬ್ಬು ಖರೀದಿ ಸಮಸ್ಯೆ ತಲೆದೂರಿದ್ದು, ಶೀಘ್ರವೇ ದುರಸ್ಥಿ ಕಾರ್ಯ ಪೂರ್ಣಗೊಳಿಸಿ ರೈತರಿಂದ ಕಬ್ಬು ಖರೀದಿ ಮಾಡುವಂತೆ ನಿರ್ದೇಶನ ನೀಡುವಂತೆ ಸಚಿವರನ್ನು ಕೋರಿದರಲ್ಲದೆ, ಕೊಬ್ಬರಿ ಹಾಗೂ ರಾಗಿ ಖರೀದಿ ಸಮಸ್ಯೆಗಳ ಬಗ್ಗೆ ಗಮನ ಸಳೆದರು.
ಜಿಲ್ಲಾಧಿಕಾರಿ ಆರ್ ಗಿರೀಶ್ ಜಿಲ್ಲೆಯಲ್ಲಿ ಲಾಕ್ಡೌನ್ ಸಂದರ್ಭ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿನ ಸೌಲಭ್ಯ ವ್ಯವಸ್ಥೆ, ರೈತರಿಗೆ ಕಲ್ಪಿಸಿರುವ ಅನುಕೂಲ, ಸಾರಿಗೆ ವಾಹನಗಳ ಸಂಚಾರ, ಕೃಷಿ, ತೋಟಗಾರಿಕೆ, ಎ.ಪಿ.ಎಂ.ಸಿ ಮಾರುಕಟ್ಟೆ ಅಧಿಕಾರಿಗಳ ನಡುವಿನ ಸಮನ್ವಯಗಳ ಬಗ್ಗೆ ವಿವರಿಸಿದರು.
ಚಾಮುಂಡಿ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿರುವುದರಿಂದ ಕಬ್ಬು ಖರೀದಿ ಸಮಸ್ಯೆ ತಲೆದೂರಿದ್ದು ಶೀಘ್ರವೇ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಮಾತನಾಡಿ 2019-2020ನೇ ಸಾಲಿಗೆ ಜಿಲ್ಲೆಯಲ್ಲಿ 580 ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ವಿತರಣೆಯ ಗುರಿ ನಿಗದಿ ಪಡಿಸಲಾಗಿತ್ತು ಆದರೆ ಜಿಲ್ಲೆಯಲ್ಲಿ 639 ಕೋಟಿ ರೂ. ಸಾಲ ನೀಡಲಾಗಿದೆ ಎಂದರಲ್ಲದೆ ಮುಂದೆಯೂ ಸಾಲ ವಿತರಣೆಗೆ ಯಾವುದೇ ಸಮಸ್ಯೆ ಎದುರಾಗದಂತೆ ಗಮನ ಹರಿಸಲಾಗುವುದು ಎಂದರು.
ಎ.ಪಿ.ಎಂ.ಸಿ ಉಪನಿರ್ದೇಶಕರಾದ ಶ್ರೀಹರಿ ಅವರು ಜಿಲ್ಲೆಯಲ್ಲಿ 7 ಎ.ಪಿ.ಎಂ.ಸಿಗಳಿದ್ದು ಎಲ್ಲಾ ಕಡೆಗಳಲ್ಲಿ ತರಕಾರಿ ಮಾರಾಟ ಹಾಗೂ ರಾಗಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಸಾಗಾಟ, ಬೇಡಿಕೆ ಹಾಗೂ ಸಗಟು ಖರೀದಿದಾರರ ಸಮಸ್ಯೆಯಿಂದ ಕೆಲವು ದಿನಗಳ ಕಾಲ ತರಕಾರಿ ಬೆಳೆಯಲ್ಲಿ ಕುಸಿತ ಕಂಡಿತ್ತು ಇದೀಗ ಮಹಾರಾಷ್ಟ್ರ, ತಮಿಳನಾಡು ಸೇರಿದಂತೆ ಹಲವು ರಾಜ್ಯಗಳಿಗೆ ಲಾರಿಗಳು ಸಂಚರಿಸುತ್ತಿದ್ದು ಬೇಡಿಕೆ ಹಾಗೂ ಬೆಲೆಯಲ್ಲಿ ಏರಿಕೆ ಕಂಡಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಉಪ ವಿಭಾಗಾಧಿಕಾರಿ ಡಾ.ನವೀನ್ ಭಟ್, ಎ.ಪಿ.ಎಂ.ಸಿ. ಅಧ್ಯಕ್ಷ ಕಣದಹಳ್ಳಿ ಮಂಜೇಗೌಡ, ಜಂಟಿ ಕೃಷಿ ನಿರ್ದೇಶಕ ಡಾ. ಮಧುಸೂದನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್ ವಿವಿಧ ಎ.ಪಿ.ಎಂ.ಸಿ ಕಾರ್ಯದರ್ಶಿಗಳು ಸಭೆಯಲ್ಲಿ ಇದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)