NEWSಕೃಷಿ

ರೈತರಿಗಾಗಿ ಸಿಎಂ ಬಿಎಸ್‌ವೈ ಭೇಟಿಯಾದ ಎಚ್.ಡಿ. ರೇವಣ್ಣ

ಕೂಲಿ ಕಾರ್ಮಿಕರಿಗೆ ಒಂದು ಕಂತಿನ ಸಹಾಯಧನವಾಗಿ ಪ್ರತಿ ಕುಟುಂಬಕ್ಕೆ 5,000 ರೂ. ಬಿಡುಗಡೆಗೆ ಮನವಿ

ವಿಜಯಪಥ ಸಮಗ್ರ ಸುದ್ದಿ

ಹಾಸನ: ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಘೊಷಿಸಿರುವ ಹಿನ್ನೆಲೆಯಲ್ಲಿ  ಸಂಕಷ್ಟಕ್ಕೆ ಒಳಗಾಗಿರುವ ಜಿಲ್ಲೆಯ ಬಡವರು, ಬೀದಿ ಬದಿ ವ್ಯಾಪಾರಿಗಳು ಹಾಗೂ ರೈತರ ಸಂಕಷ್ಟ ಪರಿಹಾರಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಇಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಲಾಕ್ ಡೌನ್‍ನ್ನು ಮೇ 3 ರವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಾದ್ಯಂತ ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರಿಗೆ ಒಂದು ಕಂತಿನ ಸಹಾಯಧನವಾಗಿ ಪ್ರತಿ ಕುಟುಂಬಕ್ಕೆ 5,000 ರೂ.ಗಳನ್ನು ಬಿಡುಗಡೆ ಮಾಡುವಂತೆ  ರೇವಣ್ಣ ಮನವಿ ಮಾಡಿದರು.

ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಇನ್ನೂ ಹೆಚ್ಚಿನ ಅನುದಾನವನ್ನು ನೀಡಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರಲ್ಲದೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಒದಗಿಸಲಾದ ಟೆಸ್ಟಿಂಗ್ ಕಿಟ್ ಮತ್ತು ಪಿ.ಪಿ.ಇ ಮತ್ತು ಇತರೆ ಸಾಮಗ್ರಿಗಳನ್ನು ಹಾಸನ ಮೆಡಿಕಲ್ ಕಾಲೇಜಿಗೂ ನೀಡಬೇಕೆಂದು ಕೋರಿದ್ದಾರೆ.

ಮುಂಬೈ, ಬೆಂಗಳೂರು ಮತ್ತು ಇತರೆ ನಗರಗಳಿಂದ ಉದ್ಯೋಗ ಕಳೆದುಕೊಂಡು ತಮ್ಮ ತಮ್ಮ ಹಳ್ಳಿಗಳಿಗೆ ವಾಪಸಾಗಿರುವ ಸಾವಿರಾರು ಕಾರ್ಮಿಕರಿಗೆ ತಕ್ಷಣದಲ್ಲಿ ಪಡಿತರ ಚೀಟಿ ವಿತರಿಸಿ ಪಡಿತರ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರಲ್ಲದೆ, ಪ್ರಸ್ತುತ ಸರ್ಕಾರದಿಂದ ಪ್ರತಿ ವ್ಯಕ್ತಿಗೆ ಮಾಹೆಯಾನ ನೀಡುತ್ತಿರುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿ. ಗಳಿಗೆ ಮತ್ತು 2 ಕೆ.ಜಿ. ಗೋಧಿಯನ್ನು 4 ಕೆ.ಜಿ.ಗೆ ಹೆಚ್ಚಿಸಲು ತುರ್ತು ಆದೇಶ ನೀಡಬೇಕೆಂದು  ಕೋರಿಕೆ ಸಲ್ಲಿಸಿದರು.

ರಾಜ್ಯದಲ್ಲಿ ಆಲೂಗೆಡ್ಡೆ ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಹಾಸನ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹಾಗೂ ಹಿಂಗಾರು ಹಂಗಾಮಿನಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ.

ಆಲೂಗೆಡ್ಡೆ ಬೆಳೆಗೆ ಒಟ್ಟು ಉತ್ಪಾದನಾ ವೆಚ್ಚದಲ್ಲಿ ಬಿತ್ತನೆ ಬೀಜಕ್ಕೆ ಶೇ.30 ರಿಂದ 40 ರಷ್ಟು ವೆಚ್ಚವನ್ನು ವ್ಯಯಿಸಬೇಕಾಗಿರುತ್ತದೆ. ಆಲೂಗೆಡ್ಡೆ ಬೆಳೆಯು ಹಲವಾರು ರೋಗ ಮತ್ತು ಕೀಟಗಳಿಗೆ ತುತ್ತಾಗುವ ಬೆಳೆಯಾಗಿದ್ದು, ಅಂಗಮಾರಿ ರೋಗ, ದುಂಡಾಣು ರೋಗ, ನಂಜು ರೋಗ ಹಾಗೂ ನುಸಿ ಕೀಟ ಬಾಧೆ ಆಲೂಗೆಡ್ಡೆ ಬೆಳೆಗೆ ಹೆಚ್ಚಾಗಿ ಬಾಧಿಸುತ್ತಿವುದರಿಂದ ಬೆಳೆ ಹಾನಿಯಾಗುತ್ತಿರುವ ಕಾರಣ ಆಲೂಗೆಡ್ಡೆ ಬೆಳೆಗಾರರು ನಷ್ಟವನ್ನು ಅನುಭವಿಸುತ್ತಿರುತ್ತಾರೆ.

ಬೆಳೆನಷ್ಟದ ಜೊತೆಗೆ 2019-20ನೇ ಮುಂಗಾರು ಹಂಗಾಮಿನಲ್ಲಿ ಬಿದ್ದ ಅತಿಯಾದ ಮಳೆಯಿಂದಾಗಿ ಆಲೂಗೆಡ್ಡೆ ಬೆಳೆಯು ಹಾನಿಗೊಳಗಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಅಲ್ಲದೇ ಈ ಬೇಸಿಗೆ ಹಂಗಾಮಿನಲ್ಲಿ ರೈತರು ಬೆಳೆದ ತರಕಾರಿ ಬೆಳೆಗಳನ್ನು ಕೋವಿಡ್-19 ವೈರಸ್ ಸೋಂಕಿನಿಂದಾಗಿ ಇಡೀ ದೇಶವನ್ನೇ ಬಂದ್ ಮಾಡಲಾಗಿರುವುದರಿಂದ ಸರಿಯಾಗಿ ಮಾರುಕಟ್ಟೆ ಲಭ್ಯವಿಲ್ಲದೆ ಹಾಗೂ ಸಾಗಾಣಿಕೆ ತೊಂದರೆಗಳಿಂದಾಗಿ ಪ್ರಸಕ್ತ ವರ್ಷದಲ್ಲಿ ರೈತರು ತೀವ್ರತರವಾದ ನಷ್ಟ ಅನುಭವಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆಲೂಗೆಡ್ಡೆ ಬೆಳೆಗಾರರ ಮೇಲೆ ಬೀಳುವ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ರಾಜಾದ್ಯಂತ ಆಲೂಗೆಡ್ಡೆ ಬೆಳೆ ಬೇಸಾಯದಲ್ಲಿ ತೊಡಗಿರುವ ರೈತರಿಗೆ ಶೇ. 50 ರಂತೆ ಬಿತ್ತನೇ ಬೀಜ ಮತ್ತು ಸಸ್ಯ ಸಂರಕ್ಷಣಾ ಔಷಧಿಗಳ ಖರೀದಿಗಾಗಿ ಸಹಾಯಧನ ಸೌಲಭ್ಯವನ್ನು ಒದಗಿಸುವಂತೆ ಕೇಳಿಕೊಂಡರು.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ರಸವತ್ತಾದ ಕಬ್ಬನ್ನು ಹಿಂಡಿ ಕಬ್ಬಿನ ಹಾಲನ್ನು ತಯಾರಿಸುವ ಕಬ್ಬನ್ನು ಸುಮಾರು 3,600 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದು, ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಈ ಕಬ್ಬನ್ನು ಕಟ್ಟಾವು ಮಾಡದೆ ಬಲಿತ್ತು ಒಣಗಿ ಹೋಗಿ ರೈತರು ಈ ಬೆಳೆಗೆ ಬೆಂಕಿ ಹೆಚ್ಚುವ ಪರಿಸ್ಥಿತಿ ಎದುರಾಗಿದೆ. ಕಬ್ಬು ಬೆಳೆಗೆ ಸರ್ಕಾರದಿಂದ ಪ್ರತಿ ಎಕರೆಗೆ ಕನಿಷ್ಠ 50,000 ರೂ.ಗಳನ್ನು ಪರಿಹಾರ ಘೋಷಿಸುವಂತೆ  ಮನವಿ ಮಾಡಿದರು.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ