CRIMENEWSದೇಶ-ವಿದೇಶ

30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಕಂದಕಕ್ಕೆ ಉರುಳಿ 4 ಮಂದಿ ಸಾವು, 14ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ವಿಜಯಪಥ ಸಮಗ್ರ ಸುದ್ದಿ

ಡೆಹ್ರಾಡೂನ್: 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಿಮಾಚಲ ರಸ್ತೆ ಸಾರಿಗೆ ನಿಗಮ (ಎಚ್‌ಆರ್‌ಟಿಸಿ) ಬಸ್​ವೊಂದು ಆಳವಾದ ಕಂದಕಕ್ಕೆ ಉರುಳಿಬಿದ್ದಿದ್ದು, ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನ ವಿಕಾಸನಗರ ಪ್ರದೇಶದಲ್ಲಿ ನಡೆದಿದೆ.

ಕ್ವಾನು ಪ್ರದೇಶದ ಸುಡೋಯ್ ಖಾದ್ ಬಳಿ ಬಸ್​ ಅಪಘಾತ್ಕಕೀಡಾಗಿದೆ. ಬಸ್​ ಹಿಮಾಚಲ ಪ್ರದೇಶದ ಚೌಪಾಲ್- ನೆರ್ವಾದಿಂದ ಪೌಂಟಾ ಸಾಹಿಬ್‌ಗೆ ತೆರಳುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ಅವಘಡದಿಂದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಅಸುನೀಗಿದ್ದಾರೆ. ಇನ್ನು 14ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಯಾಸ್ಮಿನ್​ ಬೇಗಂ(46), ರಿಚಾ(30), ಧನ್​ ಬಹದ್ದೂರ್​ ಮತ್ತು ಬಸ್​ ಚಾಲಕ ದಿನೇಶ್​ ಕುಮಾರ್​ (54) ಮೃತಪಟ್ಟವರು.

ಮಿನಾಸ್-ಕ್ವಾನು-ಹರಿಪುರ್ ರಸ್ತೆಯ ಸುಡೋಯ್ ಖಾಡ್ ಬಳಿ ಟ್ರಕ್‌ಗೆ ದಾರಿ ಮಾಡಿಕೊಡುವಾಗ ಬಸ್​ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಅಪಘಾತದ ನಂತರ, ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಸಹಾಯ ಮಾಡಲು ಪ್ರಾರಂಭಿಸಿದರು.

ಇನ್ನು ಇತ್ತ ಅಪಾಘತದ ವಿಷಯ ತಿಳಿಯುತ್ತಿದ್ದಂತೆ ಎಸ್​ಡಿಆರ್​ಎಫ್​ನ ದಕ್ಪಥರ್, ಚಕ್ರತ, ಮೋರಿ ಮತ್ತು ತ್ಯುನಿ ಘಟಕದ ಸಿಬ್ಬಂದಿಗಳನ್ನು ತಕ್ಷಣಕ್ಕೆ ಸ್ಥಳಕ್ಕೆ ಕಳುಹಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಸಾಗಿದೆ ಎಂದು ಎಸ್​ಡಿಆರ್​ಎಫ್​ ಕಮಾಂಡೆಂಟ್​ ಅರ್ಪನ್​ ಯದುವಂಶಿ ತಿಳಿಸಿದ್ದಾರೆ.

ಸಿಎಂ ಪುಷ್ಕರ್​ ಸಿಂಗ್​ ಧಾಮಿ ಘಟನೆ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್​ ಅವರೊಂದಿಗೆ ಮಾತನಾಡಿದ್ದು, ಅಗತ್ಯವಿರುವ ಎಲ್ಲ ಕ್ರಮ ಕೈಗೊಂಡು, ಪ್ರಯಾಣಿಕರನ್ನು ರಕ್ಷಿಸುವಂತೆ ಸೂಚನೆ ನೀಡಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಸಿಎಂ ಧಾಮಿ, ಅಪಘಾತ ಸ್ಥಳದ ಸುತ್ತಮುತ್ತಲಿನ ಪ್ರದೇಶದ ಎಲ್ಲ ವೈದ್ಯಕೀಯ ಕೇಂದ್ರಗಳಿಗೆ ಗಾಯಗೊಂಡ ಪ್ರಯಾಣಿಕರನ್ನು ಆದ್ಯತೆ ಮೇರೆಗೆ ದಾಖಲಿಸಿ, ಚಿಕಿತ್ಸೆ ನೀಡುವಂತೆ ಆದೇಶ ಮಾಡಿದ್ದಾರೆ.

ಜಿಲ್ಲಾ ಆಡಳಿತ ಮತ್ತು ಪೊಲೀಸರು ರಕ್ಷಣಾ ಮತ್ತು ಪರಿಹಾರ ಕಾರ್ಯ ಆರಂಭಿಸಿದ್ದಾರೆ. ಈ ಕುರಿತು ಸುತ್ತಮುತ್ತಲಿನ ಆಸ್ಪತ್ರೆಗಳಿಗೂ ಆಲರ್ಟ್​ ಆಗಿರುವಂತೆ ಸೂಚನೆ ನೀಡಿದ್ದು, ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಏರ್​ಲಿಫ್ಟ್​ ಮಾಡಲಾಗುವುದು. ಎಲ್ಲ ಪ್ರಯಾಣಿಕರ ಸುರಕ್ಷತೆಗೆ ಪ್ರಾರ್ಥಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!