ಬೆಂಗಳೂರು: ಲೋಕೋಪಯೋಗಿ ಇಲಾಖೆಯ 660 ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿ ಸಂದರ್ಶನದಲ್ಲಿ ಕೆಪಿಎಸ್ಸಿ ಎಸಗಿದ ಅಕ್ರಮದ ವಿರುದ್ಧ ನ್ಯಾಯಾಂಗ ತನಿಖೆಗೆ ಆಗ್ರಹಿಸಿ, ಕೆಪಿಎಸ್ಸಿ ಕಚೇರಿ ಎದುರು ಏಕಾಂಗಿಯಾಗಿ ನಿಲ್ಲುವ ಮೂಲಕ ಆಮ್ ಆದ್ಮಿ ಪಾರ್ಟಿ ರಾಜ್ಯ ಯುವ ಘಟಕದ ಅಧ್ಯಕ್ಷ ಮುಕುಂದ ಗೌಡ ಪ್ರತಿಭಟನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಕುಂದ್ ಗೌಡ, ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರವು ಅವ್ಯಾಹತವಾಗಿ ನಡೆಯುತ್ತಿದ್ದು, ಇದರಿಂದಾಗಿ ಪ್ರಾಮಾಣಿಕ ಯುವಕರಿಗೆ ಅನ್ಯಾಯವಾಗುತ್ತಿದೆ. ಲೋಕೋಪಯೋಗಿ ಇಲಾಖೆಯ 660 ಎಇ ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ನಡೆಸಿದ ಸಂದರ್ಶನದ ಅಂಕ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. 400 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಕೇವಲ 83.50 ರಿಂದ 94 ಅಂಕ ಗಳಿಸಿದ ಅಭ್ಯರ್ಥಿಗಳಿಗೆ ವ್ಯಕ್ತಿತ್ವ ಪರೀಕ್ಷೆಯಲ್ಲಿ ಒಟ್ಟು 50ಕ್ಕೆ 40 ಅಂಕಗಳನ್ನು ನೀಡಲಾಗಿದೆ.
ಲಿಖಿತ ಪರೀಕ್ಷೆಯಲ್ಲಿ 69 ಅಂಕ ಗಳಿಸಿದ ಅಭ್ಯರ್ಥಿಗೆ ಸಂದರ್ಶನದಲ್ಲಿ 39 ಅಂಕ ಕೊಡಲಾಗಿದೆ. ಆದರೆ 236 ಅಂಕ ಗಳಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಅಭ್ಯರ್ಥಿಗೆ ಸಂದರ್ಶನದಲ್ಲಿ ಕೇವಲ 13.25 ಅಂಕ ನೀಡಲಾಗಿದೆ. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಆಧಾರದಲ್ಲಿ 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ರೀತಿ ಅಂಕ ನೀಡಲಾಗಿದ್ದು, ಇದನ್ನು ಗಮನಿಸಿದರೆ ಅಕ್ರಮ ನಡೆದಿರುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಭ್ಯರ್ಥಿ ಗಳಿಸಿದ ಅಂಕವು ಸಂದರ್ಶನ ಮಂಡಳಿಯ ನಾಲ್ವರು ಸದಸ್ಯರು ನೀಡಿದ ಅಂಕಗಳ ಸರಾಸರಿ ಆಗಬೇಕು. ಹೀಗಿದ್ದರೂ ಒಟ್ಟು ಅಭ್ಯರ್ಥಿಗಳಲ್ಲಿ ಶೇ. 25ರಷ್ಟು ಮಂದಿಗೆ ನಾಲ್ವರೂ ಒಂದೇ ಸಮನಾದ, ಅದೂ 40 ಅಂಕಗಳನ್ನು ನೀಡಿರುವುದು ಹೇಗೆ? ಅವರೆಲ್ಲರಿಗೂ ಈ 497 ಅಭ್ಯರ್ಥಿಗಳೂ ಅತ್ಯಂತ ಪ್ರತಿಭಾನ್ವಿತರು ಎಂದು ಅನಿಸಿದ್ದಲ್ಲಿ, ಕೆಲವರಿಗಾದರೂ 40ಕ್ಕಿಂತ ಹೆಚ್ಚು ಅಂಕಗಳನ್ನು ನೀಡಿಬಹುದಿತ್ತಲ್ಲವೇ? ಕೆಪಿಎಸ್ಸಿ ಮಾಡಿದ ಈ ಅಕ್ರಮದ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಿ, ಒಂದುದು ತಿಂಗಳೊಳಗೆ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು ಎಂದು ಮುಕುಂದ್ ಗೌಡ ಆಗ್ರಹಿಸಿದರು.
ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್ ಹುದ್ದೆ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಯಲ್ಲಿ, ಹಣ ನೀಡಿದ ಅಭ್ಯರ್ಥಿಗಳಿಗೆ ಗರಿಷ್ಠ ಹಾಗೂ ಉಳಿದವರಿಗೆ ಕನಿಷ್ಠ ಅಂಕಗಳನ್ನು ನೀಡಿ ಅನ್ಯಾಯ ಎಸಗಲಾಗಿದೆ. 40 ಅಂಕ ಪಡೆದ ಬಹುತೇಕ ಅಭ್ಯರ್ಥಿಗಳು 30 ಲಕ್ಷದಿಂದ 50 ಲಕ್ಷ ರೂಪಾಯಿವರೆಗೆ ಹಣ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೆಪಿಎಸ್ಸಿಯಲ್ಲಿನ ಸಾಲುಸಾಲು ಅಕ್ರಮಗಳಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆಗಳು ಗಗನಕುಸುಮವಾಗಿವೆ” ಎಂದು ಮುಕುಂದ್ ಗೌಡ ಬೇಸರ ವ್ಯಕ್ತಪಡಿಸಿದರು.
![](https://vijayapatha.in/wp-content/uploads/2024/02/QR-Code-VP-1-1-300x62.png)