ಚಿಕ್ಕಮಗಳೂರು: ಕೇರಳದಿಂದ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿದ್ದ 40 ಜನರ ತಂಡದಲ್ಲಿ 16 ವರ್ಷದ ವಿದ್ಯಾರ್ಥಿನಿ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗದಲ್ಲಿ ನಡೆದಿದೆ.

ಶ್ರೀನಂದನಾ (16) ನಾಪತ್ತೆಯಾಗಿರುವ 10ನೇ ತರಗತಿ ವಿದ್ಯಾರ್ಥಿನಿ. ಕೇರಳದಿಂದ ಬಂದಿದ್ದ 40 ಜನರ ತಂಡ ಮಂಗಳವಾರ ಸಂಜೆ 6:30ರ ಸುಮಾರಿಗೆ ಚಂದ್ರದ್ರೋಣ ಸಾಲಿನಲ್ಲಿ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಕತ್ತಲಾಗಿದ್ದರಿಂದ ಶ್ರೀನಂದನ ನಾಪತ್ತೆಯಾಗಿದ್ದಾಳೆ. ಜೊತೆಗಿದ್ದವರು ಹುಡುಕಾಡಿದರೂ ಪತ್ತೆಯಾಗಿಲ್ಲ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕದ 30ಕ್ಕೂ ಹೆಚ್ಚು ಸಿಬ್ಬಂದಿ ಟಾರ್ಚ್ ಹಾಕಿಕೊಂಡು ಮಧ್ಯರಾತ್ರಿವರೆಗೂ ಹುಡುಕಾಡಿದರೂ ಬಾಲಕಿಯ ಸುಳಿವು ಸಿಗಲಿಲ್ಲ.
ಇನ್ನು ಬೆಟ್ಟಗುಡ್ಡಗಳ ಕಾಡಿನ ಪ್ರದೇಶ, ಮಂಜು ಹಾಗೂ ತುಂಬಾ ಕತ್ತಲು ಕವಿದಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿ ಎಲ್ಲರೂ ವಾಪಸ್ಸಾಗಿದ್ದರು. ಸ್ಥಳಕ್ಕೆ ಮಧ್ಯರಾತ್ರಿಯೇ ಹೆಚ್ಚುವರಿ ಪೊಲೀಸ್ವರಿಷ್ಠಾಧಿಕಾರಿ (ಎಎಸ್ಪಿ) ಜಯಕುಮಾರ್ ಕೂಡ ಭೇಟಿ ನೀಡಿದ್ದರು.
ಮತ್ತೆ ಇಂದು ಬೆಳಗ್ಗೆ 50ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್ ಮೂಲಕ ಬಾಲಕಿಯ ಪತ್ತೆಗೆ ಮುಂದಾಗಿದ್ದಾರೆ.
ಇನ್ನು ಬಾಲಕಿ ನಾಪತ್ತೆಯಾದ ಸ್ಥಳದಿಂದ ಹೋಗಿರಬಹುದಾದ ಮಾರ್ಗದ ಅಂದಾಜಿನಲ್ಲಿ ಜಿಲ್ಲಾಡಳಿತದ ವಿವಿಧ ಇಲಾಖೆಯ ಅಧಿಕಾರಿಗಳು ಕೂಡ ತಂಡಗಳಾಗಿ ಬಾಲಕಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಕೂಡ ನಾಪತ್ತೆಯಾಗಿರುವ ಬಾಲಕಿ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
Related










