ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳದ ಬೇಡಿಕೆ ಈಡೇರಿಕೆ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಾರಿಗೆ ಸಚಿವರನ್ನು ಇಂದು ಭೇಟಿ ಮಾಡಿ ಚರ್ಚಿಸಿದೆ.

ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಬಿ.ಜಯದೇವ ಅರಸು, ಎಚ್.ಡಿ. ರೇವಪ್ಪ, ಎಚ್.ಆರ್.ಜಗದೀಶ್ ಮತ್ತಿತರರು ಇಂದು ಮಧ್ಯಾಹ್ನ ಕೋರಮಂಗಲದಲ್ಲಿ ಸಚಿವರ ಭೇಟಿಯಾಗಿ ಸುಮಾರು 50 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ 2020 ಜನವರಿ 1ರಿಂದ ಅನ್ವಯವಾಗುವಂತೆ ಬಾಕಿ ಇರುವ ಹಿಂಬಾಕಿ ನೀಡಬೇಕು. 2024ರ ಜನವರಿ 1ರಿಂದ ವೇತನ ಪರಿಷ್ಕರಣೆ ಮಾಡಬೇಕು ಎಂಬುವುದು ಸೇರಿ ಈಗಾಗಲೇ ಹಲವು ಬಾರಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದೇವೆ.
ಅದರಂತೆ ಸರ್ಕಾರ ಈಗ 26 ತಿಂಗಳ ಹಿಂಬಾಕಿ ಬಿಡುಗಡೆಗೆ ಒಪ್ಪಿದೆ. ಆದರೆ, ಉಳಿದ 12 ತಿಂಗಳ ಹಿಂಬಾಕಿಯನ್ನು ಕೊಡಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಏನು ಮಾಡುವುದು ಎಂದು ಸಚಿವರು ಚರ್ಚೆ ವೇಳೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇದಲ್ಲದೇ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡಬೇಕು ಎಂಬುದಕ್ಕೆ ಈಗಾಗಲೇ ಸರ್ಕಾರ ಕೂಡ ಇಲ್ಲ 1-4-2025ರಿಂದ ಜಾರಿ ಮಾಡುತ್ತೇವೆ ಎಂದು ಹೇಳುತ್ತಿದೆ ಈ ಬಗ್ಗೆ ಮತ್ತೊಮ್ಮೆ ಸಿಎಂ ಅವರನ್ನು ಭೇಟಿ ಮಾಡಲಾಗುವುದು ಎಂದು ಸಚಿವರು ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.
ಒಟ್ಟಾರೆ ಇತ್ತ ಈ ನಾಲ್ಕೂ ವರ್ಷಕ್ಕೊಮ್ಮೆ ನಡೆಯುವ ಈ ತಕರಾರು ಬೇಡ ಸರ್ಕಾರವೇ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸರಿ ಸಮಾನ ವೇತನ ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟ ಇಂದು ಚಿತ್ರದುರ್ಗದಿಂದ ಪಾದಯಾತ್ರೆ ಆರಂಭಿಸಿದೆ. ಈ ನಡುವೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ವೇತನ ಒಪ್ಪಂದ ಮಾಡಬೇಕು ಎಂದು ಒತ್ತಾಯಿಸಿ ಸಚಿವರನ್ನು ಭೇಟಿಮಾಡಿ ಬಂದಿದ್ದಾರೆ.
ಎಲ್ಲವನ್ನು ಗಮನಿಸಿದರೆ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದರ ಬಗ್ಗೆ ಕಾದು ನೋಡಬೇಕಿದೆ. ಒಂದು ವೇಳೆ ಪಾದಯಾತ್ರೆಗೆ ಮಣಿದು ಸರಿ ಸಮಾನ ವೇತನಕ್ಕೆ ಸರ್ಕಾರ ಒಪ್ಪಿದರೆ ನೌಕರರಿಗೆ ಬಂಪರ್ ಲಾಟರಿ ಹೊಡೆದಷ್ಟೆ ಖುಷಿಯಾಗುತ್ತದೆ. ಇಲ್ಲ ವೇತನ ಒಪ್ಪಂದ ಮಾಡಿದರೆ ಲಕ್ಷಾಂತರ ರೂಪಾಯಿ ಕಳೆದುಕೊಂಡು ಭವಿಷ್ಯದಲ್ಲಿ ಆರ್ಥಿಕವಾಗಿ ಕುಗ್ಗಬೇಕಾಗುತ್ತದೆ. ಈ ನಡುವೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ನೌಕರರ ಭವಿಷ್ಯ ಅಡಗಿದೆ ಎಂದು ಪ್ರಜ್ಞಾವಂತ ನೌಕರರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
Related










