ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ರಕ್ಷಿಸಲು ಸರ್ಕಾರ ಎಲ್ಲಾ ರೀತಿಯಿಂದಲೂ ಪ್ರಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಗಳ ವಯಸ್ಸಿನ ಹೆಣ್ಣು ಮಗಳ ಜೀವನ ಮತ್ತು ಆಕೆಯ ನೋವಿನ ಬಗ್ಗೆ ಸರ್ಕಾರ, ಎಸ್ಐಟಿ ಚರ್ಚೆ ಮಾಡುತ್ತಿಲ್ಲ. ಸರ್ಕಾರ ಆರೋಪಿಗಳ ರಕ್ಷಣೆಗೆ ನಿಂತಿದೆ. ಇದನ್ನು ನೋಡಿದರೆ ಇದರ ಹಿಂದೆ ದೊಡ್ಡ ಷಡ್ಯಂತ್ರ ಇರುವುದು ಸ್ಪಷ್ಟವಾಗುತ್ತದೆ ಎಂದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರವಾಗಿ ಸರ್ಕಾರ ಎಲ್ಲವನ್ನೂ ಎಸ್ಐಟಿಯಿಂದ ತನಿಖೆ ನಡೆಸುತ್ತೇವೆಂದು ಹೇಳಿ ದಿಕ್ಕು ತಪ್ಪಿಸುವ ನಡೆಯುತ್ತಿದೆ. ಹೀಗಾಗಿ ಆರೋಪಿಯನ್ನು ರಕ್ಷಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಸರ್ಕಾರದಲ್ಲಿ ಮುಖ್ಯಮಂತ್ರಿಗಳು ಇಲ್ಲ, ಗೃಹ ಸಚಿವರೂ ಇಲ್ಲ. ಸರ್ಕಾರ ತಂದವರು ಇವರೇ, ಸರ್ಕಾರ ಬೀಳಿಸೋದು ಇವರೇ ಅಲ್ಲವೇ?… ಇವರಿಂದ ಇಡೀ ಬಿಜೆಪಿಗೆ ಆತಂಕ ಎದುರಾಗಿದೆ. ಬಹುಶಃ ಇದೊಂದು ಹಾಸ್ಯಾಸ್ಪದ ಎನಿಸುತ್ತದೆ. ಜನರಿಗೆ ಸರ್ಕಾರದ ಕಡೆಯಿಂದ ಒಂದು ಸಂದೇಶ ಹೋಗಬೇಕಾಗಿತ್ತು. ಅದು ಏನೆಂದರೆ ಇನ್ನು ಮುಂದೆ ಮಹಿಳೆಯರ ರಕ್ಷಣೆಗೆ ಸರ್ಕಾರ ಇಲ್ಲ ಎಂಬುವುದು ಅದು ಸಾಬೀತಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಇದು ಸಿಡಿಗಳ ಸರ್ಕಾರ. ಸಿಡಿಗಳ ಸರ್ಕಾರಕ್ಕೆ ಹಿಂದೆ-ಮುಂದೆ ಏನು ಇಲ್ಲ ಎನಿಸುತ್ತದೆ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅವರ ಶಾಸಕರು, ಸಚಿವರು ಕಿತ್ತಾಡಿದನ್ನು ನೋಡಿದೆವು. ಕೆಲವರು ತಮ್ಮ ವಿಡಿಯೋವನ್ನು ಪ್ರಸಾರ ಮಾಡಬಾರದು ಎಂದು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಮಾನ ಉಳಿಸಿಕೊಳ್ಳಲು ನ್ಯಾಯಲಯದ ಮೊರೆ ಹೋಗಿ ಇದೀಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಹೋರಟಿದ್ದಾರೆ ಎಂದು ಕಿಡಿಕಾರಿದರು.
ಅಕ್ರಮ ಚಟುವಟಿಕೆಗಳನ್ನು ಮುಚ್ಚಿಕೊಂಡು ಕೃತಯ ಎಸಗಿದವರ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಇನ್ನು ಸಂತ್ರಸ್ತ ಯುವತಿಯನ್ನು ಡಿ.ಕೆ.ಶಿವಕುಮಾರ್ ನಿಯಂತ್ರಣ ಮಾಡುತ್ತಿದಾರೋ ಅಥವಾ ಎಸ್ಐಟಿ ರಕ್ಷಣೆ ಮಾಡುತ್ತಿದೆಯೋ ನನಗೆ ಗೊತ್ತಿಲ್ಲ ಎಂದರು.
ಈ ನಡುವೆ ಎಸ್ಐಟಿ ಫ್ರೇಮ್ ವರ್ಕ್ ಏನು? ಯುವತಿಯ ಹೇಳಿಕೆ ಮೇಲೆ ಇದುವರೆಗೆ ವಿಚಾರಣೆಯೇ ನಡೆಯಲಿಲ್ಲ. ಸರ್ಕಾರ ಇಡೀ ಪ್ರಕರಣ ಮುಚ್ಚಿಹಾಕಲು ಡಿಕೆಶಿ ವಿರುದ್ಧ ಆರೋಪ ಮಾಡುತ್ತಿದೆ. ಹೀಗಾಗಿ ನಾವೂ ಕೂಡ ಯುವತಿಯ ರಕ್ಷಣೆ ಮಾಡಲು ನಿಲ್ಲಬೇಕಾಗುತ್ತದೆ ಎಂದು ತಿಳಿಸಿದರು.
ಇನ್ನು ರಾಜ್ಯದಲ್ಲಿ ಸಿಡಿ ಶಬ್ಧ ಜೋರಾಗುತ್ತಿದೆ. ಇದು ರಾಷ್ಟ್ರ ಮಟ್ಟದಲ್ಲೂ ಭಾರಿ ಸದ್ದು ಮಾಡುತ್ತಿದೆ. ಇದನ್ನು ನಿಯಂತ್ರಿಸಿ ಒಂದು ತಾರ್ಕಿಕ ಅಂತ್ಯ ಮಾಡಬೇಕಿರುವ ಸರ್ಕಾರ ಮತ್ತು ಗೃಹ ಇಲಾಖೆ ಇನು ಇನಷ್ಟು ಹೆಚ್ಚಾಗುವಂತೆ ಮಾಡುತ್ತಿದೆ. ಇದರ ಹಿಂದಿನ ಅರ್ಥವೇನು ಎಂದು ಪ್ರಶ್ನಿಸಿದರು.