ವಿಜಯಪಥ ಸಮಗ್ರ ಸುದ್ದಿ
ಬೀದರ್: ಸಾಲ ಮನ್ನಾ ಹೇಳಿಕೆ ಎಲ್ಲಿ ಹೋಯ್ತು ಯಡಿಯೂರಪ್ಪ? ಕೇವಲ ಹಸಿರು ಶಾಲು ಹಾಕಿದಾಕ್ಷಣ ರೈತರ ಮಗನಾಗ್ತೀರಾ? ರೈತರ ಬಗ್ಗೆ ನಿಯತ್ತು ಮತ್ತು ಬದ್ಧತೆ ಬೇಕು. ಈಗ ಹಸಿರು ಶಾಲು ಹಾಕಲು ನಾಚಿಕೆಯಾಗಲ್ವಾ? ಜನರಿಗೆ ಹೇಗೆ ಮುಖ ತೋರಿಸುತ್ತೀರಿ, ಮತ ಕೇಳುತ್ತೀರಿ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಪರ ಮತಯಾಚಿಸಿ ಮಾತನಾಡಿದರು. ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರ ಸಾಲ ಮನ್ನಾ ಮಾಡದ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ,ಹಸಿರು ಶಾಲು ಹಾಕಿ, ರೈತರಿಗೆ ಟೋಪಿ ಹಾಕುವ ಕೆಲಸ ಮಾಡಿದ್ದೀರಿ ಎಂದು ಕಿರಿಕಾರಿದರು.
ಮಿಸ್ಟರ್ ಯಡಿಯೂರಪ್ಪ ನೀವು 2018ರ ಚುನಾವಣೆಯ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರ 1 ಲಕ್ಷರೂ. ವರೆಗಿನ ಸಾಲವನ್ನು ಯಾಕೆ ಮನ್ನಾ ಮಾಡಲಿಲ್ಲ? ರಾಜ್ಯದ ರೈತರಿಗೆ ಯಾಕೆ ಸುಳ್ಳು ಹೇಳಿದಿರಿ? ಹೆಗಲ ಮೇಲೆ ಹಸಿರು ಶಾಲು ಹಾಕಿ, ರೈತರಿಗೆ ಟೋಪಿ ಹಾಕುವ ಕೆಲಸ ಯಾಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಯಾದವರಿಗೆ ಕೇವಲ ಜಾತಿಯೇ ಮುಖ್ಯವಲ್ಲ; ಕೆಲಸವನ್ನೂ ಮಾಡಬೇಕು. ನಾನು ಮುಖ್ಯಮಂತ್ರಿಯಾಗುವ ಮುಂಚೆ ಯಾವುದೇ ಭರವಸೆ ನೀಡದೆಯೇ ರೈತರ 50 ಸಾವಿರ ರೂಪಾಯಿವರೆಗಿನ ಸಾಲ ಮನ್ನಾ ಮಾಡಿದೆ. ಎಲ್ಲ ಜಾತಿ, ಧರ್ಮೀಯ ಬಡವರಿಗೆ ತಲಾ 7 ಕೆಜಿ ಅಕ್ಕಿ ನೀಡಿದ್ದೇನೆ. ಆದರೆ, ಈ ಅಕ್ಕಿಯನ್ನು ಕೊರೊನಾ ನೆಪವೊಡ್ಡಿ 5 ಕೆಜಿಗೆ ಇಳಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ಎಲ್ಲೂ ಅಚ್ಛೇ ದಿನ್ ಬಂದಿಲ್ಲ. ತೈಲ, ಗ್ಯಾಸ್ ಎಲ್ಲ ಬೆಲೆ ಏರಿಕೆಯಾಗಿದ್ದೇ ಸರಕಾರಗಳ ಸಾಧನೆಯಾಗಿದೆ. ಪ್ರಧಾನಿಗಳು ನಾ ಖಾವುಂಗಾ, ಖಾನೆದುಂಗಾ ಅಂತಾರೆ. ಆದರೆ, ವಿಜಯೇಂದ್ರ ಆರ್ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾನೆ. ಇದು 30 ಪರ್ಸೆಂಟ್ ಸರ್ಕಾರ ಎಂದು ದೂರಿದರು.
ನಿಮಗೆ ಆಡಳಿತ ನಡೆಸಲು ಆಗದೇ ಇದ್ದರೆ ಕುರ್ಚಿ ಬಿಟ್ಟು ಹೋಗಿ, ನಾವು ಬರುತ್ತೇವೆ. ಎಲ್ಲವನ್ನೂ ಸರಿ ಮಾಡುತ್ತೇವೆ. 2023ಕ್ಕೆ ಮತ್ತೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಬಡವರಿಗೆ ತಲಾ 10 ಕೆಜಿ ಅಕ್ಕಿ ನೀಡುತ್ತೇವೆ. ನಿರುದ್ಯೋಗಿ ಯುವಕರಿಗೆ ಮಾಸಿಕ 6 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡುತ್ತೇವೆ. ನಾನೇನು ನನ್ನ ಮನೆಯಿಂದ ಅಕ್ಕಿ ನೀಡಿಲ್ಲ. ನೀವೂ ಅಷ್ಟೇ. ಕೆರೆಯ ನೀರನ್ನು, ಕೆರೆಗೆ ಚೆಲ್ಲಲು ಹೊಟ್ಟೆ ಉರಿನಾ? ಎಂದು ಸಿಎಂಗೆ ಪ್ರಶ್ನಿಸಿದರು.
ಎಲ್ಲರೂ ಸೇರಿ ಉತ್ಪಾದನೆ ಮಾಡುವುದು, ಅದನ್ನು ಹಂಚಿ ತಿನ್ನುವುದೇ ಕಾಯಕ ಮತ್ತು ದಾಸೋಹದ ಪರಿಕಲ್ಪನೆ. ಇದಕ್ಕೆ ಕಾಂಗ್ರೆಸ್ ಬದ್ಧವಾಗಿದೆ ಎಂದರು.