ವಿಜಯಪಥ ಸಮಗ್ರ ಸುದ್ದಿ
ರಾಮನಗರ: ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರಾದ ಪೃಥ್ವಿರೆಡ್ಡಿ ಹಾಗೂ ರಾಜ್ಯ ಉಸ್ತುವಾರಿ ರೋಮಿ ಭಾಟಿ ಅವರು ಬುಧವಾರ ರಾಮನಗರ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದರು.
ಈ ವೇಳೆ ಇತ್ತೀಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೆಟ್ರೋಲ್ ಸುರಿದುಕೊಂಡು ಕಾರಿನಲ್ಲೇ ಮೃತಪಟ್ಟ ಕ್ಯಾಬ್ ಚಾಲಕ ಪ್ರತಾಪ್ ಸ್ವಗ್ರಾಮ ರಾಮನಗರ ಜಿಲ್ಲೆಯ ಚುಂಚೇನಹಳ್ಳಿ ಮನೆಗೆ ಇಂದು ಬೆಳಗ್ಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಸಹಾಯಧನ ವಿತರಿಸಿದರು.
ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗಿ ತನ್ನ ಕಾರಿನ ಸಮೇತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ಚಾಲಕ ಪ್ರತಾಪ್. ಅವರನ್ನು ಮತ್ತೆ ಕೊಡುವ ಶಕ್ತಿ ನಮಗಿಲ್ಲದಿದ್ದರೂ ಅವರ ಕುಟುಂಬಕ್ಕೆ ನಮ್ಮಿಂದ ಆಗುವ ಸಹಾಯವನ್ನು ಮಾಡಬಹುದು. ಅದನ್ನು ನಾವು ಇಂದು ಮಾಡುತ್ತಿದ್ಧೇವೆ ಎಂದು ನೊಂದ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.
ಈ ವೇಳೆ 25,000 ರೂ. ಗಳ ಸಹಾಯಧನದ ಚೆಕ್ ಅನ್ನು ಮೃತ ಪ್ರತಾಪ್ ಪಾಲಕರಿಗೆ ವಿತರಿಸಿದರು. ನಂತರ ಜಿಲ್ಲೆಯ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಪಕ್ಷದ ಕಚೇರಿಯಲ್ಲಿ ನಡೆಸಿದರು.
ನಾಳೆ ಕೊಡಗಿಗೆ ಭೇಟಿ ನೀಡಲಿರುವ ನಾಯಕರು ಅಂದು ಬೆಳಗ್ಗೆ 11.30 ಕ್ಕೆ ಮಡಿಕೇರಿಯ ಮಾಧ್ಯಮ ಭವನದಲ್ಲಿ ಪತ್ರಕರ್ತರನ್ನುದ್ದೇಶಿಸಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಂತರ ಮಡಿಕೇರಿಯ ಪಕ್ಷದ ಕಚೇರಿಯಲ್ಲಿ ಮಧ್ಯಾಹ್ನ 12.30 ಕ್ಕೆ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ತಿಳಿಸಿದ್ದಾರೆ.