ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸರ್ಕಾರದ ಹಠಮಾರಿ ಧೋರಣೆಯಿಂದ ಬೇಸತ್ತಿರುವ ಸಾರಿಗೆ ನೌಕರರು ಎರಡನೇ ದಿನವೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದ್ದು, ಜನರು ಪರದಾಡುವಂತಾಗಿದೆ.
ಸಾರಿಗೆ ನೌಕರರು ಆರನೇ ವೇತನ ಆಯೋಗ ನಮಗೂ ಜಾರಿ ಮಾಡಿ ಎಂಬ ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಆದರೆ ಈ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ್ದ ಸರ್ಕಾರ ಮತ್ತು ಸಾರಿಗೆ ಸಚಿವರು ಇದು ಸಾಧ್ಯವಿಲ್ಲ ಎಂದು ಖಡಕ್ ಹೇಳಿಕೆ ನೀಡುವ ಮೂಲಕ ಮಾತು ತಪ್ಪಿದ್ದರಿಂದ ಆಕ್ರೋಶಗೊಂಡಿರುವ ನೌಕರರ ತಮ್ಮ ಮುಷ್ಕರವನ್ನು ಮುಂದುವರಿಸಿಸದ್ದಾರೆ.
ಇತ್ತ ಸಿಎಂ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದು ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ನೌಕರರ ಬೇಡಿಕೆ ಈಡೇರಿಸುವ ಸಂಬಂಧ ಮಾತುಕತೆಗೆ ಕರೆದು ಮುಷ್ಕರ ಕೈ ಬಿಡುವಂತೆ ಮನವೊಲಿಸುವ ಕೆಲಸ ಮಾಡುತ್ತಿಲ್ಲ. ಇದರಿಂದ ಜನರು ಸಿಎಂ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಇನ್ನು ಮುಷ್ಕರ ಹತ್ತಿಕ್ಕುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಾರಿಗೆ ಸಚಿವರು ಖಾಸಗಿ ವಾಹನಗಳನ್ನು ಓಡಿಸುವ ಸಹಾಸಕ್ಕೆ ಕೈಹಾಕಿದ್ದಾರೆ. ಆದರೆ ಇದರಿಂದ ಕೆಲ ಖಾಸಗಿ ಬಸ್ಗಳು ಜನರ ಸುಲಿಗೆಗೆ ಇಳಿದಿವೆ ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿದೆ.
ಇನ್ನು ರಾಯಚೂರಿನಲ್ಲಿ ಖಾಸಗಿ ಬಸ್ಗಳು ರಸ್ತೆಗಿಳಿದಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಮುಂಜಾನೆಯಿಂದ ಜನರು ಕಚೇರಿ ಮತ್ತು ತಮ್ಮ ತಮ್ಮ ಕೆಲಸಗಳ ಸ್ಥಳಗಳಿಗೆ ತೆರಳಲು ಪರದಾಡುವಂತ್ತಾಗಿದೆ.
ಸಾರ್ವಜನಿಕರು ಸರ್ಕಾರಕ್ಕೆ ಬಸ್ ಬಂದ್ ಮಾಡಿರುವ ನೌಕರರ ಬೇಡಿಕೆ ಈಡೇರಿಸಿದೆ ಈ ರೀತಿ ತೊಂದರೆ ಕೊಡುವುದು ಎಷ್ಡು ಸರಿ ಎಂದು ಹಿಡಿ ಶಾಪಹಾಕುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಜನರಿಗೆ ತೊಂದರೆ ಆದರೂ ಸರಿ ನಾವು ಈಗೊ ಬಿಟ್ಟುಕೊಡುವುದಿಲ್ಲ ಎಂಬ ಧೋರಣೆ ಅನುಸರಿಸುತ್ತಿದ್ದಾರೆ.
ಒಟ್ಟಾರೆ ನಿನ್ನೆಯಿಂದ ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ. ಅದು ಎಷ್ಟು ದಿನಗಳಾದರೂ ಸರಿಯೇ ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು 1.30 ಲಕ್ಷ ಸಾರಿಗೆ ನೌಕರರು ಒಗ್ಗಟ್ಟಿನಿಂದ ಮುಷ್ಕರ ನಡೆಸುತ್ತಿದ್ದು ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.