ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಸರ್ಕಾರ ಅವರ ಜತೆ ಮಾತುಕತೆ ಮಾಡಲು ಮುಂದಾಗದಿರುವುದು ಜನರಿಗೆ ದಿನದಿಂದ ದಿನಕ್ಕೆ ಹೆಚ್ಚಾಗಿ ಸಮಸ್ಯೆ ಉಂಟಾಗುವಂತೆ ಮಾಡಿದೆ.
ಸಾಲು ಸಾಲು ರಜೆಗಳು ಬಂದಿರುವುದರಿಂದ ತಮ್ಮ ತಮ್ಮ ಊರುಗಳಿಗೆ ಯುಗಾದಿ ಹಬ್ಬಕ್ಕೆ ತೆರಳಲು ಪ್ರಯಾಣಿಕರು ಪರದಾಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಓಡಾಟಕ್ಕೆ ಖಾಸಗಿ ಬಸ್ಗಳು ಸಿಗುತ್ತಿಲ್ಲ ಎಂದು ಜನರು ಸರ್ಕಾರಕ್ಕೆ ಶಾಪಹಾಕುತ್ತಿದ್ದಾರೆ.
ಇನ್ನು ಹಬ್ಬ ಹರಿದಿನಗಳು ಬಂದರೆ ಸಾಕು ಗಿಜುಗಿಡುತ್ತಿದ್ದ ಕೆ.ಆರ್. ಮಾರುಕಟ್ಟೆ, ಮೆಜೆಸ್ಟಿಕ್ ಇಂದು ಖಾಲಿ ಖಾಲಿಯಾಗಿ ಬಣಗುಡುತ್ತಿದೆ. ಇದರಿಂದ ಇಲ್ಲಿ ನಿಂತಿರುವ ಹತ್ತಾರು ಖಾಸಗಿ ಬಸ್ಗಳು ಪ್ರಯಾಣಿಕರಿಲ್ಲದೆ ಪರಿತಪ್ಪಿಸುತ್ತಿವೆ.
ಈ ನಡುವೆ ಸಾರಿಗೆ ನೌಕರರ ಮುಷ್ಕರ ಮುಂದುವರಿಯುತ್ತಿರುವುದಕ್ಕೆ ನಕಶಿಖಾಂತ ಉರಿದುಕೊಳ್ಳುತ್ತಿರುವ ಸರ್ಕಾರ ಅಧಿಕಾರಿಗಳ ಮೂಲಕ ನೌಕರರ ವರ್ಗಾವಣೆ ಮಾಡಿಸಿ ತನ್ನ ಉರಿಯನ್ನು ಶಮನ ಮಾಡಿಕೊಳ್ಳಲು ಹೊರಟಿದೆ.
ಅದರಲ್ಲಿ ಮಂಗಳೂರು, ದಾವಣಗೆರೆ, ಮಂಡ್ಯ, ಮೈಸೂರು ಘಟಕಗಳಿಂದ ನೌಕರರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿ ವರ್ಗಾವಣೆ ಮಾಡಲಾಗಿದೆ.
ಚಿತ್ರದುರ್ಗದಲ್ಲಿ ಅಧಿಕಾರಿಗಳು ಸಾರಿಗೆ ಸಿಬ್ಬಂದಿಯ ಮನವೊಲಿಸಿ ಎರಡು ಕೆಎಸ್ ಆರ್ ಟಿಸಿ ಬಸ್ಗಳನ್ನು ರಸ್ತೆಗಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಮುಷ್ಕರ ನಿರತ ನೌಕರರು ಹೇಳುವುದೇ ಬೇರೆ. ಬಸ್ ಓಡಿಸುತ್ತಿರುವವರು ನಮ್ಮ ನೌಕರರಲ್ಲ ಅವರು ಯಾರು ಎಂಬುದಕ್ಕೆ ಬಸ್ ಓಡಿಸಲು ಅನುಮತಿಸಿರುವ ಅಧಿಕಾರಿಗಳೇ ತಿಳಿಸಬೇಕು ಎಂದು ಕಿಡಿಕಾರಿದ್ದಾರೆ.
ಈ ಮಧ್ಯೆ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನನುಕೂಲವಾಗುವುದನ್ನು ತಪ್ಪಿಸಲು ನೈರುತ್ಯ ರೈಲ್ವೆ ಮೆಮು ರೈಲುಗಳ ಸಂಚಾರ ವಿಸ್ತರಿಸಿದೆ. ಇನ್ನೊಂದೆಡೆ ಕೊರೊನಾ ಎರಡನೇ ಅಲೆ ತೀವ್ರವಾಗಿರುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯದ 8 ನಗರಗಳಲ್ಲಿ ಇಂದು ರಾತ್ರಿಯಿಂದ 10 ದಿನಗಳು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂವನ್ನು ಸರ್ಕಾರ ವಿಧಿಸಿದೆ.