ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಅನಗತ್ಯ ರೆಮ್ಡಿಸಿವರ್ ಔಷಧದ ಬಳಕೆಯನ್ನು ತಡೆಹಿಡಿದು ಜನತೆಯ ಗೊಂದಲವನ್ನು ಬಗೆಹರಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಮ್ ಆದ್ಮಿ ಪಕ್ಷದ ವೈದ್ಯಕೀಯ ವಿಭಾಗದ ಹಿರಿಯ ಮುಖಂಡ ಡಾ. ರಮೇಶ್ ಬೆಳ್ಳಕೊಂಡ ಆಗ್ರಹಿಸಿದ್ದಾರೆ.
ಇಂದು ನಗರದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಜನತೆ ವೈದ್ಯಕೀಯ ಸೌಲಭ್ಯಗಳಿಗಾಗಿ ಪರದಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್, ಆಮ್ಲಜನಕ, ವೆಂಟಿಲೇಟರ್, ಔಷಧ ಮೊದಲಾದವು ಇಲ್ಲದೆ ತತ್ತರಿಸಿ ಹೋಗಿದ್ದಾರೆ. ಇವೆಲ್ಲದರ ನಡುವೆ ದೇಶದಲ್ಲಿ ಔಷಧ ಮಾಫಿಯಾಗಳು ತಲೆ ಎತ್ತಿ ಜನತೆಯ ರಕ್ತ ಹೀರುತ್ತಿವೆ. ಇವುಗಳಿಗೆ ಸರಕಾರದ ನೀತಿಗಳು ಕೂಡ ಪೂರಕವಾಗಿವೆ ಎಂದು ಆರೋಪಿಸಿದರು.
ಕರ್ನಾಟಕ ಸೇರಿದಂತೆ ದೇಶದಾದ್ಯಂತ ಜನರು ರೆಮ್ಡಿಸಿವರ್ ಔಷಧದ ಬೆನ್ನು ಬಿದ್ದಿದ್ದಾರೆ. ಈ ಔಷಧದ ಬಗ್ಗೆ ವ್ಯಾಪಕ ಭಿನಾಭಿಪ್ರಯಾಗಳು ಇರುವುದರಿಂದ ಅವೆಲ್ಲವನ್ನೂ ಪರಿಗಣಿಸದೆ ಒಂದು ಡೋಸ್ ಗೆ ಐದು ಸಾವಿರ ರೂಪಾಯಿಗಳಿಗೆ ಆಸ್ಪತ್ರೆಗಳಲ್ಲಿ ಅಧಿಕೃತವಾಗಿ ನೀಡಲಾಗುತ್ತಿದೆ. ಜನತೆ ಈ ಇಂಜಕ್ಷನ್ ಸಿಗದೆ ಕಾಳ ಸಂತೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಬೆಲೆ ನೀಡಿ ಖರೀದಿಸುತ್ತಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರ ಮಾತ್ರ ರೆಮ್ಡಿಸಿವರ್ ಔಷಧ ಅಗತ್ಯತೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಜನರು ಈ ಔಷಧಕ್ಕಾಗಿ ಹಾಹಾಕಾರ ಪಡುವಂತೆ ಮಾಡಿದೆ ಕಿಡಿಕಾರಿದರು.
ನವೆಂಬರ್ 20,2021 ರಂದು ವಿಶ್ವ ಆರೋಗ್ಯ ಸಂಸ್ಥೆ 7 ಸಾವಿರ ರೋಗಿಗಳ ಮೇಲೆ ನಾಲ್ಕು ಬಾರಿ ಟ್ರಯಲ್ ನಡೆಸಿ ರೆಮ್ಡಿಸಿವರ್ ಕೊರೊನಾ ರೋಗಿಗಳ ಮೇಲೆ ಯಾವುದೇ ಧನಾತ್ಮಕ ಪರಿಣಾಮವನ್ನು ಬೀರುವುದಿಲ್ಲ ಎಂದು ವರದಿ ಮಾಡಿದೆ.
ಪಾಟ್ನಾ ಏಮ್ಸ್ (AIIMS) ನ ನಿರ್ದೇಶಕ ಡಾ. ಪ್ರಭಾತ್ ಕುಮಾರ್ ಸಿಂಗ್ ರೆಮಿಡಿಸಿವರ್ ಒಂದು ಜೀವ ಉಳಿಸುವ ಡ್ರಗ್ ಅಲ್ಲ, ಇದರಿಂದ ಏನೂ ಪ್ರಯೋಜನ ಇಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೆ ಪಾಟ್ನಾ ಏಮ್ಸ್ ಕೋವಿಡ್-19 ರೋಗಿಗಳಿಗೆ ಈ ಔಷಧವನ್ನು ನೀಡುತ್ತಿಲ್ಲ ಎಂದು ಪಾಟ್ನಾ ಹೈಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದಾರೆ.
ದೆಹಲಿ ಏಮ್ಸ್ (AIIMS) ನ ನಿರ್ದೇಶಕ ರಣದೀಪ್ ಗುಲೇರಿಯ ರೆಮಿಡಿಸಿವರ್ ಇಂಜೆಕ್ಷನ್ ಕೊರೋನ ಸೋಂಕು ಗುಣಪಡಿಸುವ ಮ್ಯಾಜಿಕ್ ಬುಲ್ಲೆಟ್ ಅಲ್ಲ, 85% ಸೋಂಕಿತರು ರೆಮಿಡಿಸಿವರ್ ನಂತಹ ಚಿಕಿತ್ಸೆಯ ಅಗತ್ಯ ಇಲ್ಲದೆ ಗುಣಮುಖವಾಗಬಲ್ಲರು ಎಂದು ಹೇಳಿಕೆ ನೀಡಿದ್ದಾರೆ.
ರೆಮ್ಡಿಸಿವರ್ ಅಗತ್ಯ ಇಲ್ಲ ಎಂದು ಅಧಿಕೃತ ಆರೋಗ್ಯ ಸಂಸ್ಥೆಗಳು ಹೇಳಿಕೆ ನೀಡಿರುವಾಗ ಕೇಂದ್ರ ಮತ್ತು ರಾಜ್ಯ ಸರಕಾರ ಈ ಔಷಧದ ಬೆನ್ನು ಬಿದ್ದಿರುವುದು ಯಾಕೆ? ಔಷಧ ಕಂಪನಿಗಳ ಜೊತೆಗೆ ಶಾಮೀಲಾಗಿರುವುದರಿಂದ ಅವಶ್ಯಕವಲ್ಲದ ಈ ಔಷಧವನ್ನು ಬಳಸುತ್ತಿದೆಯೇ ಎಂದು ಪ್ರಶ್ನಿಸಿದರು.
ಸೋಂಕನ್ನು ಗುಣಪಡಿಸದ ರೆಮಿಡಿಸಿವರ್ ಬಳಕೆಯ ಬಗ್ಗೆ ಅಧಿಕೃತ ಹೇಳಿಕೆಗಳನ್ನು ನೀಡಿ ಜನತೆಯಲ್ಲಿರುವ ಗೊಂದಲವನ್ನು ಸರಕಾರ ಬಗೆಹರಿಸಬೇಕು. ಈ ನಿಟ್ಟಿನಲ್ಲಿ ತಕ್ಷಣ ವೈದ್ಯಕೀಯ ತಜ್ಞರ ತಂಡವನ್ನು ರಚಿಸಿ ರೆಮ್ಡಿಸಿವರ್ ನ ಅಗತ್ಯದ ಬಗ್ಗೆ ಚರ್ಚೆ ನಡೆಸಿ ಅಧಿಕೃತ ಹೇಳಿಕೆಯನ್ನು ನೀಡಬೇಕು. ಅನಗತ್ಯ ಔಷಧಗಳ ಬಳಕೆಯನ್ನು ಜಾರಿಗೆ ತಂದು ಜನತೆಯನ್ನು ಗೊಂದಲಕ್ಕೆ ತಳ್ಳುವ ಬದಲು ಆಕ್ಸಿಜನ್ ಕೊರತೆ, ವೆಂಟಿಲೇಟರ್, ಬೆಡ್ ಮೊದಲಾದ ಅಗತ್ಯದ ಸೌಲಭ್ಯಗಳ ಕಡೆಗೆ ಗಮನ ನೀಡಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.