ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಎರಡನೇ ಅಲೆಯ ಮಹಾನ್ ದುರಂತ ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುವ ಪಡಿತರಗಳನ್ನು ಅವರವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ರೂಪಿಸಬೇಕೆಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಉಪಾಧ್ಯಕ್ಷರಾದ ಬಿ. ಟಿ.ನಾಗಣ್ಣ ಒತ್ತಾಯಿಸಿದ್ದಾರೆ.
ನಗರದ ಪಾರ್ಟಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಅನ್ನ ಯೋಜನೆಯಲ್ಲಿ ಮೇ 10 ರಿಂದ ಉಚಿತ 10 ಕೆಜಿ ಅಕ್ಕಿ ಹಂಚಿಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ನ್ಯಾಯಬೆಲೆ ಅಂಗಡಿಗಳ ಮುಂದೆ ನೂರಾರು ಸಂಖ್ಯೆಯಲ್ಲಿ ಜನ ಜಾತ್ರೆ ಸೇರುವ ಸಾಧ್ಯತೆ ಇದೆ. ಇದರಿಂದಾಗಿ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳು ಸಹ ಕೊರೊನಾ ಪಸರಿಸುವ ಕೇಂದ್ರಗಳಾಗಿ ಮಾರ್ಪಾಡಾಗುವುದರಲ್ಲಿ ಸಂಶಯವಿಲ್ಲ. ಇದಲ್ಲದೆ ಪಡಿತರ ವಿತರಣೆಯಲ್ಲಿ ಬಯೋಮೆಟ್ರಿಕ್ ಪದ್ಧತಿಯನ್ನು ಅಳವಡಿಸಿರುವುದು ಸಹ ರೋಗವನ್ನು ಹರಡಿಸುತ್ತದೆ ಎಂದು ತಿಳಿಸಿದರು.
ಸರಕಾರದ ಈ ಅವೈಜ್ಞಾನಿಕ ನಡೆಯಿಂದಾಗಿ ಕಳೆದ ಕೊರೋನಾ ಸಮಯದಲ್ಲಿ ಪಡಿತರ ಅಂಗಡಿಗಳ 72 ಮಾಲೀಕರು ಮೃತಪಟ್ಟಿದ್ದಾರೆ. ಅಲ್ಲದೆ ಇದೇ ತಿಂಗಳ ಏಪ್ರಿಲ್ 24 ರಂದು ಒಂದೇ ದಿವಸ 6 ಮಂದಿ ಮಾಲೀಕರು ಮೃತಪಟ್ಟಿರುವುದು ವರದಿಯಾಗಿದೆ. ನ್ಯಾಯಬೆಲೆ ಕೊಳ್ಳಲು ಸರತಿ ಸಾಲಿನಲ್ಲಿ ಬಂದ ಸಾವಿರಾರು ಮಂದಿ ಸೋಂಕಿ ಗೀಡಾಗಿರುವುದು ಸಹ ತಿಳಿದುಬಂದಿದೆ. ಇದುವರೆವಿಗೂ ಸರ್ಕಾರವು ಮೃತಪಟ್ಟ ನ್ಯಾಯಬೆಲೆ ಅಂಗಡಿಗಳ ಮಾಲೀಕರುಗಳಿಗೆ 2 ಲಕ್ಷ ರೂ.ಗಳ ಸಹಾಯಧನವನ್ನು ಸಹ ಬಿಡುಗಡೆ ಮಾಡದಿರುವುದು ದೌರ್ಭಾಗ್ಯದ ಸಂಗತಿ ಎಂದು ನಾಗಣ್ಣ ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ನೀಡುವ ಪಡಿತರ ವಿತರಣೆಯಲ್ಲಿ ಕಡಿತಗೊಳಿಸಿರುವುದು ಸಹ ಜನವಿರೋಧಿ ನಡೆ ಎಂದು ನಾಗಣ್ಣ ಆರೋಪಿಸಿದರು.
ಸರ್ಕಾರವು ಓ ಟಿ ಪಿ ಪದ್ಧತಿ ಅಳವಡಿಸಿದರೂ ಸಹ ಯಾವುದೇ ಕಾರಣಕ್ಕೂ ಸೋಂಕು ಹರಡುವಿಕೆಯನ್ನು ತಪ್ಪಿಸಲು ಸಾಧ್ಯವಿಲ್ಲ. ಈ ಎಲ್ಲ ಕಾರಣಗಳಿಂದಾಗಿ ದೆಹಲಿ ರಾಜ್ಯದಲ್ಲಿ ಅನುಷ್ಠಾನದ ಹಂತದಲ್ಲಿರುವ ಮಾದರಿಯಲ್ಲಿ ಪಡಿತರವನ್ನು ಮನೆ ಮನೆ ಬಾಗಿಲಿಗೆ ತಲುಪಿಸುವ ತುರ್ತು ಅವಶ್ಯಕತೆ ಇದ್ದು ಸರ್ಕಾರವು ಸಮರೋಪಾದಿಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಬೇಕು. ಇದಕ್ಕೆ ಬೇಕಾಗಿರುವ ಎಲ್ಲ ತಾಂತ್ರಿಕ ನೆರವುಗಳನ್ನು ನೀಡಲು ಆಮ್ ಆದ್ಮಿ ಪಕ್ಷವು ಸಿದ್ಧವಿದೆ ಎಂದು ನಾಗಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಹಿಳಾ ಮುಖಂಡರಾದ ಶ್ರುತಿ ಇದ್ದರು.