Breaking NewsNEWSದೇಶ-ವಿದೇಶ

ಸರ್ಕಾರದ ನಿರ್ಲಕ್ಷ್ಯದಿಂದ ಸಾವಿರಾರು ಜನರ ಪ್ರಾಣ ಹೋಯಿತು: ಸಿದ್ದರಾಮಯ್ಯ ಕಿಡಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಎರಡನೇ ಅಲೆಯ ಭೀಕರತೆ ಮತ್ತು ಸಿದ್ಧತೆ ಕುರಿತು ರಾಜ್ಯದ ತಜ್ಞರ ಸಮಿತಿ 2020 ನವೆಂಬರ್ 30 ರಂದೇ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳದಿರುವುದೇ ಇಷ್ಟೆಲ್ಲಾ ಸಾವು, ನೋವು, ಸಂಕಟ, ಕಣ್ಣೀರಿಗೆ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಜನವರಿ ಬಳಿಕ ಎರಡನೇ ಅಲೆ ಬರಲಿದೆ ಎಂದು ಗೊತ್ತಿದ್ದರೂ ಐದು ರಾಜ್ಯಗಳ ಚುನಾವಣೆ ಘೋಷಿಸಲಾಯಿತು, ಕುಂಭಮೇಳ ನಡೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿತು. ಬೇರೆ ದೇಶಗಳಲ್ಲಿ ಎರಡನೇ ಅಲೆ ಸಂದರ್ಭದಲ್ಲಿ ಉಂಟಾದ ಸ್ಥಿತಿ ಗೊತ್ತಿದ್ದೂ ಕೇಂದ್ರ ಸರ್ಕಾರ ಸಂಪೂರ್ಣ ಮೈಮರೆಯಿತು ಎಂದು ಸರಣಿ ಟ್ವೀಟ್‌ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

2020ರ ಡಿಸೆಂಬರ್, 2021ರ ಜನವರಿಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ದೇಶದ ಕೋಟ್ಯಂತರ ಜನರು ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿ ಛೀಮಾರಿ ಹಾಕಿದ ಬಳಿಕ ಕೇಂದ್ರ ಸರ್ಕಾರ ಏಪ್ರಿಲ್ ತಿಂಗಳಲ್ಲಿ ತೆಗೆದುಕೊಳ್ಳಲು ಮುಂದಾಗಿದೆ. ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು.

ಪ್ರತೀ ದಿನ ದೇಶದಲ್ಲಿ 3.5 ಲಕ್ಷದಷ್ಟು ಸೋಂಕಿತರು ಪತ್ತೆ ಆಗುತ್ತಿದ್ದಾರೆ. ತಜ್ಞ ವೈದ್ಯ ಡಾ.ದೇವಿಪ್ರಸಾದ್ ಶೆಟ್ಟಿ ಅವರ ಪ್ರಕಾರ ಸೋಂಕಿತರ ಪ್ರಮಾಣ ಇನ್ನೂ ಐದು ಪಟ್ಟು ಹೆಚ್ಚಿದೆ. ಕೋವಿಡ್ ಪರೀಕ್ಷೆಗಳು ಕಡಿಮೆ ನಡೆಯುತ್ತಿರುವುದರಿಂದ ಪಾಸಿಟಿವ್ ಪ್ರಕರಣಗಳ ಪ್ರಮಾಣ ಕೂಡ ಕಡಿಮೆ ಇದೆ ಎಂದರು.

ಸರ್ಕಾರ ಪಾರದರ್ಶಕವಾಗಿಲ್ಲ ಎಲ್ಲದರಲ್ಲೂ ಸುಳ್ಳು ಹೇಳುತ್ತಿದೆ. ಸಾವಿನ ಸಂಖ್ಯೆಯನ್ನೂ ಮುಚ್ಚಿಡುತ್ತಿದೆ. ಸರ್ಕಾರದ ಲೆಕ್ಕಕ್ಕೂ, ಬಿಬಿಎಂಪಿ ನೀಡುವ ಲೆಕ್ಕಕ್ಕೂ ಅಂಕಿ-ಸಂಖ್ಯೆ ಇಲಾಖೆಯ ಲೆಕ್ಕಕ್ಕೂ ಭಾರೀ ವ್ಯತ್ಯಾಸವಿದೆ. ಈ ರೀತಿ ಸುಳ್ಳು ಲೆಕ್ಕ ಮತ್ತು ಪಾರದರ್ಶಕತೆ ಇಲ್ಲದೆ ಸರ್ಕಾರ ತನ್ನ ಲೋಪಗಳಿಗೆ ತೇಪೆ ಹಾಕಿಕೊಳ್ಳಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಆಕ್ಸಿಜನ್, ವೆಂಟಿಲೇಟರ್, ಬೆಡ್‌ಗಳು, ಆಸ್ಪತ್ರೆಗಳು, ಔಷಧಗಳು, ಲಸಿಕೆ, ರೆಮ್ಡಿಸಿವರ್ ಚುಚ್ಚುಮದ್ದು ಇಲ್ಲದೆ ದೇಶದ ಜನ ಸಾಯುತ್ತಿರುವ ಹೊತ್ತಲ್ಲೂ ಮುಖ್ಯಮಂತ್ರಿಗಳು, ಪ್ರಧಾನಿಗಳು, ಕೇಂದ್ರ ಸಚಿವರು ನೀಡುತ್ತಿರುವ ಅನಾಗರೀಕ, ಅಮಾನವೀಯ ಹೇಳಿಕೆಗಳಿಗೆ ಜನ ಅವರನ್ನು ಕ್ಷಮಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಭಾರತ ವೈದ್ಯಕೀಯ ಸವಲತ್ತುಗಳಿಲ್ಲದೆ ಕೊರೊನಾದಿಂದಾಗಿ ವಿಶ್ವದಲ್ಲೇ ಅತೀ ಹೆಚ್ಚು ನರಳುತ್ತಿರುವ ದೇಶವಾಗಿರುವ ಸಂದರ್ಭದಲ್ಲಿಯೇ ಪ್ರಧಾನಿ ಮೋದಿ ಅವರು ಇಡೀ ವಿಶ್ವವನ್ನು ಕೊರೊನಾ ವಿಪತ್ತಿನಿಂದ ಭಾರತ ರಕ್ಷಿಸಿಬಿಟ್ಟಿತು ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಕೊರೊನಾ ಸೋಂಕು ವಿಕೋಪಕ್ಕೆ ಹೋಗಿದ್ದ ಸಂದರ್ಭದಲ್ಲಿ ಪ್ರಧಾನಿ “ಮಹಾಕುಂಬಕ್ಕೆ ಬರುತ್ತಿರುವವರಿಗೆ ಸ್ವಾಗತ” ಎಂದು ಟ್ವೀಟ್ ಮಾಡುತ್ತಾರೆ, ಹತ್ತಾರು ಚುನಾವಣಾ ರ‍್ಯಾಲಿ ನಡೆಸಿದರು. ಸಾಲದ್ದಕ್ಕೆ “ಇಷ್ಟೊಂದು ದೊಡ್ಡ ಸಂಖ್ಯೆಯ ಜನರನ್ನು ನಾನು ನೋಡಿಯೇ ಇಲ್ಲ” ಎನ್ನುತ್ತಾರೆ. ಇವೆಲ್ಲ ದೇಶದ ಪ್ರಧಾನಿ ವರ್ತಿಸುವ ರೀತಿಯಾ ಎಂದು ಪ್ರಶ್ನಿಸಿದ್ದಾರೆ.

ಕೋವಿಡ್ ಎರಡನೇ ಅಲೆ 2021ರ ಆರಂಭದಲ್ಲೇ ಅಪ್ಪಳಿಸುತ್ತದೆ ಎನ್ನುವುದೂ ಗೊತ್ತಿದ್ದರೂ ಲಸಿಕೆ ತಯಾರಿಕೆಯನ್ನು ನಿರ್ಲಕ್ಷಿಸಲಾಯಿತು. 2020ರ ಅಕ್ಟೋಬರ್‌ನಲ್ಲೇ ಲಸಿಕೆ ಸಿದ್ದಪಡಿಸಲು ಗುತ್ತಿಗೆ ಕರೆಯಲಾಗಿತ್ತು. ಆದರೆ ಆರು ತಿಂಗಳು ಮುಗಿದರೂ ಇಲ್ಲಿಯವರೆಗೂ ಅಗತ್ಯವಿರುವ ಜನಕ್ಕೆ ಲಸಿಕೆ ಸಿಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನವನ್ನು ಮುಚ್ಚಿಡಲು ಲಾಕ್ ಡೌನ್ ಘೋಷಿಸಿ ದುಡಿಯುವ ವರ್ಗ ಮತ್ತು ಸಮುದಾಯಗಳನ್ನು ಹಸಿವಿಗೆ ದೂಡಿವೆ ಎಂದು ಹೇಳಿದ್ದಾರೆ.

ಲಾಕ್‌ಡೌನ್ ಜೊತೆಗೆ ಕೇಂದ್ರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರಮಿಕರಿಗೆ, ದುಡಿಯುವ ವರ್ಗಕ್ಕೆ ಪ್ಯಾಕೇಜ್ ಘೋಷಿಸಬೇಕಾಗಿತ್ತು. ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿದ್ದ ಪ್ಯಾಕೇಜ್ ಕೂಡ ಅಗತ್ಯವಿದ್ದವರಿಗೆ ಸಮರ್ಪಕವಾಗಿ ತಲುಪಿಲ್ಲ. ನಾನು ಹಿಂದೆಯೇ ಒತ್ತಾಯಿಸಿರುವಂತೆ ಬಡ ಕುಟುಂಬಗಳಿಗೆ 10 ಕೆಜಿ ಅಕ್ಕಿ ಜೊತೆಗೆ ಅವರ ಕೈಗೆ 10 ಸಾವಿರ ರೂಪಾಯಿ ಹಣ ಕೊಡಬೇಕು ಮತ್ತು ಕಾರ್ಮಿಕರು, ಟ್ಯಾಕ್ಸಿ-ಆಟೋ ಚಾಲಕರು ಸೇರಿದಂತೆ ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು ಎಂದರು.

ಚುನಾವಣೆ ಇರುವ ರಾಜ್ಯಗಳಲ್ಲಿ, “ಪಕ್ಷ ಅಧಿಕಾರಕ್ಕೆ ಬಂದರೆ ಕೊರೊನಾ ಲಸಿಕೆ ಉಚಿತ” ಎಂದು ಭಾಷಣ ಮಾಡುತ್ತಿರುವ ಪ್ರಧಾನಿ ಅವರು ಈಗಾಗಲೇ ಬಿಜೆಪಿಯೇ ಅಧಿಕಾರದಲ್ಲಿರುವ ರಾಜ್ಯಗಳ ಜನರಿಗೆ ಏಕೆ ಉಚಿತ ಲಸಿಕೆ ಕೊಡುತ್ತಿಲ್ಲ? ರಾಜ್ಯದ ಜನ ಏನು ತಪ್ಪು ಮಾಡಿದ್ದಾರೆ? ನಿಮನ್ನು ಗೆಲ್ಲಿಸಿದ್ದೇ ತಪ್ಪಾಯಿತಾ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಸ್ಥಿತಿ ನಿಭಾಯಿಸಲಾಗದೆ ಕೈಚೆಲ್ಲಿರುವ ಹೊತ್ತಲ್ಲಿ ಕಾಂಗ್ರೆಸ್ ಪಕ್ಷ ಜನರನ್ನು ಕೋವಿಡ್‌ನಿಂದ ರಕ್ಷಿಸಲು ಮುಂದಾಗಿದೆ. ಈ ಕುರಿತು ಇಂದು ಮತ್ತೊಂದು ಸುತ್ತಿನ ಸಭೆಯನ್ನು ಕಾಂಗ್ರೆಸ್ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಜತೆ ನಡೆಸಲಾಯಿತು. ಕಾಂಗ್ರೆಸ್‌ನ ಹಾಲಿ-ಮಾಜಿ ಶಾಸಕರು, ಸಂಸದರು ಮತ್ತು ಇತರ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಹಲವು ರೀತಿಯ ಆರೋಗ್ಯ ನೆರವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರಾಜ್ಯ ಮತ್ತು‌ ಜಿಲ್ಲಾ ಮಟ್ಟದಲ್ಲಿ‌ ಸಹಾಯವಾಣಿ ಪ್ರಾರಂಭಿಸಲಾಗುವುದು ಎಂದರು.

ಸೋಂಕಿತರಿಗೆ ನೆರವಾಗಲು ವೈದ್ಯರ ಪಟ್ಟಿ ಸಿದ್ಧಪಡಿಸುತ್ತಿದ್ದೇವೆ. ಚಿಕಿತ್ಸಾ ಕೇಂದ್ರ ಮತ್ತು ಕೊರೊನಾ ಪರೀಕ್ಷೆ ಕೇಂದ್ರಗಳನ್ನು ತೆರೆಯುವುದು ಸೇರಿದಂತೆ ಹಲವು ರೀತಿಯ ಕಾರ್ಯಗಳನ್ನು ಶೀಘ್ರವಾಗಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
4ನಿಗಮಗಳ ಅಧಿಕಾರಿಗಳು-ನೌಕರರಿಗೂ ಸರಿಸಮಾನ ವೇತನ ಕೊಡಿ: ಸಾರಿಗೆ ಸಚಿವರು, ಅಧಿಕಾರಿಗಳಿಗೆ KSRTC ಸಿಬ್ಬಂದಿ, ಲೆಕ್ಕ ಪತ್... ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ “ಮೀಡಿಯಾ ಕಿಟ್” ವಿತರಣೆಗೆ ಅರ್ಜಿ ಆಹ್ವಾನ ಅ.28ರಂದು ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ: BMTC ‍& KSRTC ಸಂಘದ ಕಾರ್ಯಾಧ್ಯಕ್ಷ ನಂಜುಂಡೇಗೌಡ BMTC ಕಂಡಕ್ಟರ್‌ಗೆ ಕಲ್ಲಿನಿಂದ ಹೊಡೆದ ಕಿರಾತಕ: ಆತಂಕದಲ್ಲೇ ಡ್ಯೂಟಿ, ಚಾಲನಾ ಸಿಬ್ಬಂದಿಗಳಿಗಿಲ್ಲ ಜೀವ ರಕ್ಷಣೆ KKRTC ಬಸ್‌ ಪಲ್ಟಿ ಮಹಿಳೆ ಸಾವು- ಒಬ್ಬರ ಸ್ಥಿತಿ ಗಂಭೀರ, 20ಕ್ಕೂ ಹೆಚ್ಚು ಮಂದಿಗೆ ಗಾಯ ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ