ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತೀವ್ರತೆ ಹೆಚ್ಚಾದ ಕಾರಣ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಒಟ್ಟಾರೆ ಎಲ್ಲಾ ವಿದ್ಯಾರ್ಥಿಥಿಗಳನ್ನು ಪಾಸ್ ಮಾಡಲಾಗುವುದು. ಇದರ ಜತೆಗೆ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ತೆಗೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನು ಜುಲೈ ಎರಡನೇ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಫಲಿತಾಂಶದಿಂದ ಅಸಾಮಾಧಾನಗೊಂಡ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವರ್ಗಾವಣೆ ಪ್ರಕ್ರಿಯೆ ಆರಂಭ
ಸ್ಥಗಿತಗೊಂಡಿದ್ದ 2020–21ನೇ ಸಾಲಿನ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಗೆ ಹೊಸ ಅಧಿಸೂಚನೆ ಬುಧವಾರ (ಜೂನ್ 30) ಪ್ರಕಟವಾಗಲಿದ್ದು, ಅಂದೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಈ ಬಾರಿ ವಲಯ, ಹೆಚ್ಚುವರಿ ವರ್ಗಾವಣೆ ಇರುವುದಿಲ್ಲ. ಈಗಾಗಲೇ 75 ಸಾವಿರ ಅರ್ಜಿ ಸ್ವೀಕಾರ ಆಗಿದೆ. ಅವರಿಗೆ ಮೊದಲು ಕೌನ್ಸೆಲಿಂಗ್ ಪ್ರಕಿಯೆ ಆರಂಭವಾಗಲಿದೆ. ಹೊಸತಾಗಿ ಅರ್ಜಿ ಸಲ್ಲಿಸಿದವರಿಗೆ ಎರಡನೇ ಹಂತದಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಜು.1ರಿಂದ ಶಾಲೆಗಳಲ್ಲಿ ಆನ್ಲೈನ್ ತರಗತಿ
ಶಾಲಾ ಆರಂಭ ಕುರಿತು ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಈ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಜು.1ರಿಂದ ಶಾಲೆಗಳಲ್ಲಿ ಆನ್ಲೈನ್ ತರಗತಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಈ ಉದ್ದೇಶದಿಂದ ವಿಷಯ ಪರಿಣತರು, ತಾಂತ್ರಿಕ ಸಲಹೆ ಸಮಿತಿಯ ಸದಸ್ಯರು, ಮಕ್ಕಳ ತಜ್ಞರನ್ನು ಒಳಗೊಂಡ ಟಾಸ್ಕ್ ಫೋರ್ಸ್ (ಕಾರ್ಯಪಡೆ) ರಚಿಸಲಾಗುವುದ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದೂ ಹೇಳಿದರು.