- ಕಾರ್ಮಿಕರ ಅಂತರಾಳದ ಕೂಗು ಅಧಿಕಾರಿಗಳು ಅನುಸರಿಸಿದ ವಾಮ ಮಾರ್ಗ ಎಂಬ ಸುಳ್ಳಿನ ಸುಳಿಯಲ್ಲಿ ಸಿಲುಕಿ ನಲುಗುತ್ತಿದೆ
- ಇಂದು ಭ್ರಷ್ಟ ಅಧಿಕಾರಿಗಳು ತೆಗೆದುಕೊಂಡ ಕಾನೂನು ಬಾಹಿರವಾದ ಕ್ರಮವೇ ಈಗ ಕಾನೂನಾಗಿ ನೌಕರರ ಕಾಡುತ್ತಿರುವುದು ಮಾತ್ರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆಯೇ ಸರಿ….. !?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ನೌಕರರ ಹೋರಾಟದ ಶಕ್ತಿಯನ್ನು ದಮನ ಮಾಡುವ ನಿಟ್ಟಿನಲ್ಲಿ ಕೆಲ ಅಧಿಕಾರಿಗಳು ನಿರಂತವಾಗಿ ಕಿರುಕುಳ ನೀಡುತ್ತಿದ್ದು, ಇದರಿಂದ ಕುಗ್ಗಿ ಹೋಗುತ್ತಿರುವ ನೌಕರರು ಹೋರಾಟದ ಹಾದಿ ತುಳಿಯುವುದಕ್ಕೆ ಹಿಂದೆ ಸರಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ, ಇನ್ನೊಂದು ಕೂಗು ಅಧಿಕಾರಿಗಳು ಎಷ್ಟೇ ಕಿರುಕುಳ ನೀಡಿದರು ನಾವು ಜಗ್ಗುವುದಿಲ್ಲ. ಆದರೆ ನಮಗೆ ಧೈರ್ಯ ತುಂಬುವ ಒಂದು ಕೈ ಬೇಕಿದೆ. ಆ ಕೈ ಗಾಗಿ ನಾವು ಹುಡುಕಾಡುತ್ತಿದ್ದೇವೆ. ಆದರೆ ಅದು ಈ ವರೆಗೂ ನಮಗೆ ಸಿಕ್ಕಿಲ್ಲ.
ಆ ಕೈ ಹುಡುಕಾಡುವ ವೇಳೆ ಕೆಲ ಕೈಗಳು ನಾ ಮುಂದು ತಾ ಮುಂದು ಎಂದು ಬರುತ್ತಿವೆ. ಆದರೆ, ಅವು ಹೆಚ್ಚುಹೊತ್ತು ಮೇಲೆತ್ತಿ ನಿಲ್ಲಲು ಆಗದೆ ಹಿಂದೆ ಸರಿಯುತ್ತಿವೆ.
ಹೀಗಾಗಿ ನಮಗೆ ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳ ಮಾದರಿಯಲ್ಲಿ ಹೋರಾಟ ರೂಪಿಸುವ ಒಂದೇ ಒಂದು ಕೈ ಸಿಕ್ಕರೆ ಸಾಕು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಎಂದು ಎದುರು ನೋಡುತ್ತಿದ್ದಾರೆ ಸಾರಿಗೆ ನೌಕರರು.
ನೌಕರರನ್ನು ಅನೇಕ ಸಮಸ್ಯೆಗಳಿಗೆ ದೂಡಿ ಕಾಲ್ಕೀಳುತ್ತಿದ್ದಾರೆ: ಈ ನಡುವೆ ನೌಕರರ ಪರ ನಿಲ್ಲುತ್ತೇವೆ ಅವರನ್ನು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ಹೇಳಿಕೊಂಡು ಬರುವವರ ಸಂಖ್ಯೆಗೇನು ಕಡಿಮೆ ಇಲ್ಲ. ಆದರೆ ಬಂದವರು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ ನಂತರ ನೌಕರರನ್ನು ಅನೇಕ ಸಮಸ್ಯೆಗಳಿಗೆ ದೂಡಿ ಕಾಲ್ಕೀಳುತ್ತಿದ್ದಾರೆ.
ಹೀಗಾಗಿ ಈವರೆಗೂ ತಮ್ಮ ಸಮಸ್ಯೆ ನೀಗಿಸಲು ಹೋರಾಡುವಂತ ನಿಷ್ಠಾವಂತ ವ್ಯಕ್ತಿ ಇನ್ನೂ ನಮಗೆ ಸಿಕ್ಕಿಲ್ಲ ಇದರಿಂದ ಈ ಹಿಂದೆ ಸಚಿವರು, ಮುಖ್ಯಮಂತ್ರಿಗಳು ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಹೇಳುತ್ತಿದ್ದಾರೆ ನೌಕರರು.
ಎಲ್ಲ ನೌಕರರಿಗೂ ಯಾವುದೇ ತೊಂದರೆ ಆಗದಂತೆ ವಾಪಸ್ ಕರೆಸಿಕೊಳ್ಳುತ್ತೇವೆ ಎಂದೂ ಈಗಲೂ ಹೇಳುತ್ತಿರುವ ಸಚಿವರು ತಮ್ಮ ಜವಾಬ್ದಾರಿಯನ್ನು ಮತ್ತೊಬ್ಬರ ಹೆಗಲಿಗೆ ಹಾಕಿ ಸುಮ್ಮನಾಗುತ್ತಿದ್ದಾರೆ.
ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳುವ ಸಲುವಾಗಿ ಹೊಸ ಅಸ್ತ್ರ ಪ್ರಯೋಗ: ಆದರೆ, ಅಧಿಕಾರಿಗಳು ಮತ್ತೆ ಹಳೇ ಚಾಳಿ ಮುಂದುವರಿಸಿದ್ದು ಆ ವ್ಯಕ್ತಿಗೂ ದಾರಿ ತಪ್ಪಿಸುವ ಮೂಲಕ ತಾವು ಮಾಡಿರುವ ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳುವ ಸಲುವಾಗಿ ಹೊಸ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.
ಇಲ್ಲಿ ಪ್ರಮುಖವಾಗಿ ನೌಕರರ ಬಗ್ಗೆ ಕಾಳಜಿ ಹೊಂದಬೇಕಾಗಿದ್ದ ನೌಕರರ ಸಂಘಟನೆಗಳು ಏನು ಕಾಣದಂತೆ, ನೌಕರರ ಹಂಗಿನಲ್ಲಿದ್ದರೂ ಅವರ ಪರವಾಗಿ ನಿಲ್ಲದೆ ಮೂಲೆ ಸೇರಿಕೊಂಡಿವೆ. ಇದರಿಂದ ನೌಕರರು ದಾರಿ ಕಾಣದೆ ಹಲವು ಸಮಸ್ಯೆಗೆ ದೂಡಿ ಕಿರುಕುಳ ನೀಡುತ್ತಿದ್ದರೂ ತಟಸ್ಥರಾಗಿ ಹಲ್ಲುಕಚ್ಚಿಕೊಂಡು ದಿನ ದೂಡುವಂತಾಗಿದೆ.
ಸತ್ಯ ಸತ್ತಿದ್ದು, ಸುಳ್ಳು ವಿಜೃಂಭಿಸುತ್ತಿದೆ: ಇನ್ನು ನಾವು ಏನೋ ಮಾಡೇ ಬಿಡುತ್ತೇವೆ ಎಂದು ನೌಕರರ ಪರವಾಗಿ ಮುಂದೆ ಬಂದ ಸಂಘಟನೆಯೊಂದು ಅಧಿಕಾರಿಗಳು ಬೀಸಿದ ಬಲಿಯಲ್ಲಿ ಸಿಲುಕಿ ಈಗ ವಿಲವಿಲನೆ ಒದ್ದಾಡುತ್ತಿದ್ದು, ಆ ಬಲೆಯಿಂದ ಬಿಡಿಸಿಕೊಂಡು ಹೊರಬಂದರೆ ಸಾಕು ಎಂಬ ಹೀನಾಯ ಸ್ಥಿತಿಗೆ ತಲುಪಿದೆ.
ಇದರಿಂದ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಯುತವಾಗಿ ಹೋರಾಡಿದ ಕಾರ್ಮಿಕರ ಅಂತರಾಳದ ಕೂಗು ಅಧಿಕಾರಿಗಳು ಅನುಸರಿಸಿದ ವಾಮ ಮಾರ್ಗ ಎಂಬ ಸುಳ್ಳಿನ ಸುಳಿಯಲ್ಲಿ ಸಿಲುಕಿ ನಲುಗುತ್ತಿದೆ. ಇದರಿಂದ ಸತ್ಯ ಸಮಾಧಿಯಾಗಿ ಮಿಥ್ಯ ಗೆದ್ದು ಕೇಕೆ ಹಾಕುತ್ತಿದೆ.
ಇಲ್ಲಿ ಸತ್ಯ ಸತ್ತಿದ್ದು, ಸುಳ್ಳು ವಿಜೃಂಭಿಸುತ್ತಿದೆ. ಈ ಮೂಲಕ ನೌಕರರು ಏನು ಮಾಡದ ಸ್ಥಿತಿಗೆ ತಲುಪಿದ್ದಾರೆ. ಇನ್ನು ನ್ಯಾಯಾಂಗ ತನ್ನ ಕಣ್ಣಿಗೆಕಟ್ಟಿಕೊಂಡಿರುವ ಕಪ್ಪುಪಟ್ಟಿಯೂ ಇನ್ನಷ್ಟು ಬಿಗಿಯಾಗಿ ಸತ್ಯಯಾವುದು ಸುಳ್ಳುಯಾವುದು ಎಂದು ತಿಳಿಯದ ಸ್ಥಿತಿಗೆ ತಲುಪಿರುವುದು ಸಾರಿಗೆ ನೌಕರರ ದುರ್ದೈವ ಎಂದೇ ಹೇಳ ಬಹುದೇನೋ .. ಗೊತ್ತಿಲ್ಲ.
ಒಟ್ಟಾರೆ, ನೌಕರರ ಹಂಗಿನಲ್ಲೇ ಇರುವ ಸಂಘಟನೆಗಳು ನೌಕರರಿಗೆ ಮಾಡಿದ ಮಾಡುತ್ತಿರುವ ದ್ರೋಹದಿಂದ ಇಂದು ಭ್ರಷ್ಟ ಅಧಿಕಾರಿಗಳು ತೆಗೆದುಕೊಂಡ ಕಾನೂನು ಬಾಹಿರವಾದ ಕ್ರಮವೇ ಈಗ ಕಾನೂನಾಗಿ ನೌಕರರ ಕಾಡುತ್ತಿರುವುದು ಮಾತ್ರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆಯೇ ಸರಿ….. !?
ಎಂಜಲು ಕಾಸಿಗೆ ಬಾಯಿ ಬಿಡುವ ಸಂಘಟನೆಗಳು: ಎಂಜಲು ಕಾಸಿಗೆ ಬಾಯಿ ಬಿಡುವ ಕೆಲ ಸಾರಿಗೆ ಸಂಘಟನೆಗಳನ್ನು ನಂಬಿ ನೌಕರರು ಅವುಗಳನ್ನು ಸಾಕುವುದಕ್ಕೆ ತಾವು ಕಷ್ಟಪಟ್ಟು ಬೆವರು ಹರಿಸಿ ದುಡಿದ ಹಣವನ್ನು ಕೊಡುವುದರ ಬದಲಿಗೆ ಆ ಹಣವನ್ನು ಭಿಕ್ಷುಕರಿಗಾದರೂ ದಾನವಾಗಿ ನೀಡಿದರೆ ಪುಣ್ಯವಾದರೂ ಬರುತ್ತದೆ. ಇನ್ನಾದರೂ ಈ ಬಗ್ಗೆ ನೌಕರರ ಯೋಚಿಸಬೇಕಿದೆ.
ನೌಕರರ ಹಂಗು, ಮರ್ಜಿಗೆ ಒಳಗಾಗಿರುವ ಸಂಘಟನೆಗಳು ಈ ಬಗ್ಗೆ ಇನ್ನಾದರೂ ತಮ್ಮ ತಪ್ಪನ್ನು ಅರಿತುಕೊಂಡು ನೌಕರರ ಕೂಗಿಗೆ ಧ್ವನಿಯಾಗುವ ಮೂಲಕ ಅವರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಟೊಂಕಟ್ಟಿ ನಿಲ್ಲಬೇಕಿದೆ.