NEWSದೇಶ-ವಿದೇಶರಾಜಕೀಯ

ಮತ್ತೊಬ್ಬ ಪುನೀತ್‌ ಹೇಗೆ ಸಾಧ್ಯವಿಲ್ಲವೋ, ಮತ್ತೊಂದು ಎಎಪಿಯೂ ಅಸಾಧ್ಯ: ಆತಿಶಿ ಮಾರ್ಲೇನಾ

ಆಮ್‌ ಆದ್ಮಿ ಪಾರ್ಟಿ ಯೋಜನೆಗಳನ್ನು ಕಾಪಿ ಹೊಡೆಯುತ್ತಿರುವುದಕ್ಕೆ ಬಿಜೆಪಿ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹೇಗೆ ಪುನೀತ್‌ ರಾಜ್‌ಕುಮಾರ್‌ರವರಂತೆ ಬದುಕಲು ಮತ್ತೊಬ್ಬರಿಗೆ ಸಾಧ್ಯವಿಲ್ಲವೋ, ಅದೇ ರೀತಿ ಮತ್ತೊಂದು ಪಕ್ಷವು ಆಮ್‌ ಆದ್ಮಿ ಪಾರ್ಟಿ ಆಗಲೂ ಸಾಧ್ಯವಿಲ್ಲ. ಬೇರೆ ಪಕ್ಷಗಳು ಎಎಪಿ ಯೋಜನೆಗಳನ್ನು ಆಶ್ವಾಸನೆ ನೀಡಬಹುದೇ ಹೊರತು, ಎಎಪಿಯಂತೆ ವ್ಯವಸ್ಥಿತವಾಗಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ದೆಹಲಿ ಶಾಸಕಿ, ಶಿಕ್ಷಣ ತಜ್ಞೆ ಆತಿಶಿ ಮಾರ್ಲೇನಾ ಹೇಳಿದ್ದಾರೆ.

ಬೆಂಗಳೂರಿನಲ್ಲಿರುವ ಎಎಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅತಿಶಿ ಮಾರ್ಲೇನಾ, “ಕರ್ನಾಟಕದ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿವೆ. ಮಕ್ಕಳ ವಿದ್ಯಾಭ್ಯಾಸವೇ ಎಲ್ಲಕ್ಕಿಂತ ಮುಖ್ಯ ಎಂಬುದನ್ನು ಜನತೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಜನರು ಹಳ್ಳಿಯಿಂದ ನಗರಗಳಿಗೆ, ನಗರಗಳಿಂದ ಮಹಾನಗರಗಳಿಗೆ ವಲಸೆ ಹೋಗುವ ಮುಖ್ಯ ಉದ್ದೇಶವೇ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದಾಗಿರುತ್ತದೆ ಎಂದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದಕ್ಕಾಗಿ ಪೋಷಕರು ದಿನವಿಡೀ ದುಡಿಯುತ್ತಾರೆ. ಪೋಷಕರು ಸರಾಸರಿ ನಾಲ್ಕನೇ ಒಂದರಷ್ಟು ಆದಾಯವನ್ನು ಖಾಸಗಿ ಶಾಲೆಗಳ ಶುಲ್ಕ ಪಾವತಿಸಲು ಖರ್ಚು ಮಾಡುತ್ತಿದ್ದಾರೆ. ಏಕೆಂದರೆ ಎಲ್ಲ ಪೋಷಕರಿಗೂ ಮಕ್ಕಳ ಶಿಕ್ಷಣವೇ ಆದ್ಯತೆ. ನಮ್ಮ ಮತ ಪಡೆಯುವ ಪಕ್ಷಕ್ಕೂ ಕೂಡ ಶಿಕ್ಷಣ ಕ್ಷೇತ್ರವು ಆದ್ಯತೆಯಾಗಿದೆಯೇ ಎಂದು ಮತದಾನ ಮಾಡುವಾಗ ಕರ್ನಾಟಕದ ಜನತೆ ಯೋಚಿಸಬೇಕು. ಸರ್ಕಾರಿ ಶಾಲೆಗಳ ಶಿಕ್ಷಣಕ್ಕೆ ಆದ್ಯತೆ ನೀಡಲು ಬದ್ಧವಾಗಿರುವ ಹಾಗೂ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತೆ ಅಭಿವೃದ್ಧಿ ಪಡಿಸಿರುವ ಪಕ್ಷಕ್ಕೆ ಮತ ನೀಡಬೇಕು ಎಂದು ಹೇಳಿದರು.

ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ನಾನು ಕರ್ನಾಟಕ ಸರ್ಕಾರವನ್ನು ಆಗ್ರಹಿಸುತ್ತೇನೆ. ಕಳೆದ ಮೂರು ವರ್ಷಗಳಲ್ಲಿ, ದೆಹಲಿ ಖಾಸಗಿ ಶಾಲೆಗಳ ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ವರ್ಗವಾಗಿದ್ದಾರೆ. ದೇಶದ ಬೇರೆ ಯಾವುದೇ ರಾಜ್ಯದಲ್ಲೂ ಹೀಗಾಗಿಲ್ಲ. ಕರ್ನಾಟಕದಲ್ಲೂ ಇಂತಹ ಬದಲಾವಣೆಯನ್ನು ತರಬೇಕಿದೆ ಎಂದು ಆತಿಶಿ ಮಾರ್ಲೇನಾ ತಿಳಿಸಿದರು.

ಪ್ರಸ್ತುತ ಎರಡು ಮಾದರಿಗಳನ್ನು ನೋಡುತ್ತಿದ್ದೇವೆ. ಒಂದು, ಶಿಕ್ಷಣಕ್ಕೆ 25% ಅನುದಾನ ಮೀಸಲಿಟ್ಟ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಾರ್ಟಿ ಸರ್ಕಾರದ ಮಾದರಿ. ಮತ್ತೊಂದು, ಕೇವಲ 12% ಮೀಸಲಿಡುವ ಕರ್ನಾಟಕದ ಬಿಜೆಪಿ ಸರ್ಕಾರದ ಮಾದರಿ. ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹಣ ಖರ್ಚು ಮಾಡಲು ಸಿದ್ಧವಿಲ್ಲದಿರುವಾಗ ಶಾಲೆಗಳಲ್ಲಿ ಮೂಲ ಸೌಕರ್ಯ ಹಾಗೂ ಬೋಧನೆಯ ಗುಣಮಟ್ಟ ಸುಧಾರಣೆಯಾಗುತ್ತದೆ ಎಂದು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಇಂದು ಕರ್ನಾಟಕದಲ್ಲಿ 18,000 ಕಾಲೇಜು ಉಪನ್ಯಾಸಕರ ಪೈಕಿ 11,000 ಉಪನ್ಯಾಸಕರು ಅತಿಥಿ ಉಪನ್ಯಾಸಕರು. ಇವರನ್ನು ಸರ್ಕಾರ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಇವರನ್ನು ಕರ್ನಾಟಕ ಸರ್ಕಾರ ಏಕೆ ಖಾಯಂಗೊಳಿಸುತ್ತಿಲ್ಲ? ಆಮ್‌ ಆದ್ಮಿ ಪಾರ್ಟಿಯ ಪಂಜಾಬ್‌ ಸರ್ಕಾರವು ಈಗಾಗಲೇ 8,000 ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿದ್ದು, ಎಲ್ಲರನ್ನೂ ಖಾಯಂಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಆತಿಶಿ ಆಮರ್ಲೇನಾ ಹೇಳಿದರು.

ಕರ್ನಾಟಕದ ಸರ್ಕಾರಿ ಶಾಲೆಗಳು ಶೋಚನೀಯ ಸ್ಥಿತಿಯಲ್ಲಿವೆ. ತರಗತಿ ಕೊಠಡಿಗಳು, ಶೌಚಾಲಯಗಳು, ಕುಡಿಯುವ ನೀರು, ಮೇಲ್ಚಾವಣಿ ಮುಂತಾದ ಸೌಕರ್ಯಗಳು ದುಸ್ಥಿತಿಯಲ್ಲಿವೆ. ದೆಹಲಿಯಲ್ಲಿ ಇವೆಲ್ಲವೂ ಉತ್ತಮ ಗುಣಮಟ್ಟದಿಂದ ಕೂಡಿವೆ. ಆ್ಯನುವಲ್‌ ಸ್ಟೇಟಸ್‌ ಆಫ್‌ ಎಜುಕೇಷನ್‌ ರಿಪೋರ್ಟ್‌ (ಎಎಸ್‌ಇಆರ್‌) ವರದಿ ಪ್ರಕಾರ, ಕರ್ನಾಟಕದಲ್ಲಿ ಒಂದನೇ ತರಗತಿಯಲ್ಲಿರುವ 40% ವಿದ್ಯಾರ್ಥಿಗಳಿಗೆ ಅಕ್ಷರಗಳನ್ನು ಓದಲೂ ಬರುವುದಿಲ್ಲ ಎಂದರು.

ಇನ್ನು ಮೂರನೇ ತರಗತಿಯಲ್ಲಿರುವ 10.5% ಮಕ್ಕಳಿಗೆ ಅಕ್ಷರಗಳನ್ನು ಓದಲು ಬರುವುದಿಲ್ಲ. ಆದರೆ ದೆಹಲಿಯಲ್ಲಿ ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಐಐಟಿ, ನೀಟ್‌ ಪರೀಕ್ಷೆಗಳನ್ನು ಪಾಸ್‌ ಮಾಡಿ, ದೇಶದ ಅತ್ಯುತ್ತಮ ಇಂಜಿನಿಯರಿಂಗ್‌, ಮೆಡಿಕಲ್‌ ಕಾಲೇಜುಗಳಲ್ಲಿ ಸೀಟು ಪಡೆಯುತ್ತಿದ್ದಾರೆ ಎಂದು ಆತಿಶಿ ಮಾರ್ಲೇನಾ ಹೇಳಿದರು.

“ಆಮ್‌ ಆದ್ಮಿ ಪಾರ್ಟಿಯು ಚುನಾವಣೆಗೆ ಸ್ಪರ್ಧಿಸುವುದಕ್ಕೂ ಮುನ್ನವೇ ಕರ್ನಾಟಕದಲ್ಲಿ ಪ್ರಭಾವವನ್ನು ತೋರಿಸಿದೆ. ಹೇಗೆಂದರೆ, ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಾರ್ಟಿಯು ಜಾರಿಗೆ ತಂದಿರುವ ಯೋಜನೆಗಳನ್ನು ಕರ್ನಾಟಕದಲ್ಲಿ ಬೇರೆ ಪಕ್ಷಗಳು ಆಶ್ವಾಸನೆ ನೀಡುತ್ತಿವೆ. ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ʻಕಾಪಿ ಕ್ಯಾಟ್‌ʼ ಆಗಿವೆ. ಅಧಿಕಾರಾವಧಿ ಮುಗಿಯುವ ಹೊತ್ತಿಗೆ ಬಿಜೆಪಿ ಸರ್ಕಾರವು ʻನಮ್ಮ ಕ್ಲಿನಿಕ್‌ʼ ತೆರೆಯಲು ಹೊರಟಿದೆ.

ದೆಹಲಿ ಎಂಬ ಸಣ್ಣ ರಾಜ್ಯದಲ್ಲಿ ಆಮ್‌ ಆದ್ಮಿ ಪಾರ್ಟಿಯು 500ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆದಿವೆ. ಕರ್ನಾಟಕವೆಂಬ ದೊಡ್ಡ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಕೇವಲ 430 ಕ್ಲಿನಿಕ್‌ಗಳನ್ನು ತೆರೆಯಲು ಹೊರಟಿದೆ. ದೆಹಲಿಯ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ 400 ಪರೀಕ್ಷೆಗಳು ಉಚಿತವಾಗಿದೆ. ಕರ್ನಾಟಕದಲ್ಲಿ ಕೇವಲ 15 ಪರೀಕ್ಷೆಗಳು ಲಭ್ಯವಿದೆ” ಎಂದು ಆತಿಶಿ ಮಾರ್ಲೇನಾ ಹೇಳಿದರು.

“ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ 24,000 ಶಾಲಾ ಕೊಠಡಿಗಳನ್ನು ನಿರ್ಮಿಸುವುದಾಗಿ ಆಡಳಿತ ಪಕ್ಷ ಬಿಜೆಪಿ ಹೇಳುತ್ತಿದೆ. ಇಷ್ಟು ವರ್ಷ ಅಧಿಕಾರದಲ್ಲಿದ್ದಾಗ ಏಕೆ ಬಿಜೆಪಿ ಈ ಕೆಲಸವನ್ನು ಮಾಡಿಲ್ಲ? ಕಾಂಗ್ರೆಸ್‌ ಪಕ್ಷವು 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಹೇಳುತ್ತಿದೆ. ಛತ್ತೀಸ್‌ಗಡ, ರಾಜಸ್ತಾನ, ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದು, ಅಲ್ಲೆಲ್ಲ ಎಷ್ಟು ಯೂನಿಟ್‌ ವಿದ್ಯುತ್ತನ್ನು ಉಚಿತವಾಗಿ ನೀಡುತ್ತಿದೆ ಎಂದು ಪ್ರಶ್ನಿಸಿದರು.

ಅಲ್ಲೆಲ್ಲೂ ಉಚಿತ ವಿದ್ಯುತ್‌ ನೀಡದಿರುವುದನ್ನು ಗಮನಿಸಿದರೆ, ಕಾಂಗ್ರೆಸ್‌ಗೆ ಇದರಲ್ಲಿ ಬದ್ಧತೆಯಿಲ್ಲ ಎಂಬುದು ತಿಳಿಯುತ್ತದೆ. ನಾನು ಕಾಂಗ್ರೆಸ್‌ಗೆ ಸವಾಲು ಹಾಕುತ್ತಿದ್ದೇನೆ, ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಉಚಿತ ವಿದ್ಯುತ್‌ ಯೋಜನೆಗಳನ್ನು ಅದು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾರಿಗೆ ತರಲಿ. ನಂತರವಷ್ಟೇ ಕರ್ನಾಟಕದಲ್ಲಿ ಈ ಆಶ್ವಾಸನೆ ನೀಡಿ ಎಂದು ಆತಿಶಿ ಮಾರ್ಲೇನಾ ಸವಾಲು ಹಾಕಿದರು.

ಭ್ರಷ್ಟ ಸರ್ಕಾರಗಳನ್ನು ನೋಡಿ ಕರ್ನಾಟಕದ ಜನರು ಬೇಸತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ. ಇಲ್ಲಿ ಸರ್ಕಾರಗಳು, ಮುಖ್ಯಮಂತ್ರಿಗಳು ಬದಲಾದರೂ ಆಡಳಿತದಲ್ಲಿ ಬದಲಾವಣೆ ಆಗುತ್ತಿಲ್ಲ. ಆಡಳಿತ ಪಕ್ಷದವರು ತೆಗೆದುಕೊಳ್ಳುವ ಕಮಿಷನ್‌ ಪರ್ಸೆಂಟೇಜ್‌ ಮಾತ್ರ ಬದಲಾಗುತ್ತಿದೆ. ಗುತ್ತಿಗೆದಾರರು ಮಾತ್ರವಲ್ಲದೇ, ಧಾರ್ಮಿಕ ಸಂಸ್ಥೆಗಳು ಕೂಡ ತಮ್ಮ ಅನುದಾನ ಪಡೆಯಲು ಕಮಿಷನ್‌ ನೀಡಬೇಕಾಗಿದೆ ಎಂದು ದೂರುತ್ತಿವೆ. ಇವೆಲ್ಲವನ್ನು ನೋಡುತ್ತಿರುವ ಜನರು ಆಮ್‌ ಆದ್ಮಿ ಪಾರ್ಟಿ ಪಾರ್ಟಿಯಿಂದ ಮಾತ್ರ ಆಡಳಿತದಲ್ಲಿ ಉತ್ತಮ ಬದಲಾವಣೆ ಸಾಧ್ಯ ಎಂಬುದನ್ನು ಅರಿತಿದಿದ್ದಾರೆ ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, “ಕರ್ನಾಟಕ ಸರ್ಕಾರವು ಪಠ್ಯಪುಸ್ತಕ ಪರಿಷ್ಕರಣೆ, ಶಾಲೆಗಳ ಗೋಡೆಗೆ ಬಣ್ಣ ಬಳಿಯುವುದು, ವಿದ್ಯಾರ್ಥಿಗಳ ಸಾಂಪ್ರದಾಯಿಕ ಉಡುಪು – ಹೀಗೆ ಎಲ್ಲ ವಿಷಯಗಳಲ್ಲೂ ಕೋಮುವಾದವನ್ನು ತುರುಕಿ ಅನಗತ್ಯ ವಿವಾದ ಸೃಷ್ಟಿಸಿದೆ ಎಂದರು.

ಇನ್ನು ಇಂತಹ ಘಟನೆಗಳು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿನ ಹಲವು ಹುಳುಕುಗಳ ಕಡೆ ಜನರ ಗಮನ ಹೋಗಬಾರದೆಂದೇ ಇಂತಹ ವಿವಾದಗಳನ್ನು ಸೃಷ್ಟಿಸಲಾಗಿದೆ ಎಂದು ಭಾಸವಾಗುತ್ತಿದೆ ಎಂದು ಹೇಳಿದರು.

ಕರ್ನಾಟಕದ ಅಂಗನವಾಡಿಗಳ ಕಾರ್ಯಕರ್ತೆಯರು, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರು, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರು ಪದೇಪದೇ ಪ್ರತಿಭಟನೆಗಳನ್ನು ನಡೆಸುತ್ತಲೇ ಇರುತ್ತಾರೆ. ಅವರ ಬೇಡಿಕೆಗಳು ನ್ಯಾಯಯುವಾಗಿದ್ದರೂ ಇಲ್ಲಿನ ಸರ್ಕಾರವು ಅವುಗಳನ್ನು ಈಡೇರಿಸಲು ಮುಂದಾಗಿಲ್ಲ. ಬದಲಾಗಿ, ಪ್ರತಿಭಟನೆಯನ್ನು ಹತ್ತಿಕ್ಕಲು ಎಲ್ಲ ರೀತಿಯ ಕುತಂತ್ರಗಳನ್ನು ಅನುಸರಿಸುತ್ತಿದೆ. ತರಗತಿಯಲ್ಲಿ ಇರಬೇಕಾದ ಶಿಕ್ಷಕರು ಬೀದಿಯಲ್ಲಿ ಅಥವಾ ಫ್ರೀಡಂ ಪಾರ್ಕ್‌ನಂತ ಮೈದಾನಗಳಲ್ಲಿ ಇದ್ದರೆ, ವಿದ್ಯಾರ್ಥಿಗಳ ಕಥೆ ಏನು ಎಂಬ ಚಿಂತೆಯೇ ಈ ಸರ್ಕಾರಕ್ಕಿಲ್ಲ ಎಂದು ಪೃಥ್ವಿ ರೆಡ್ಡಿ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಪ್ರಚಾರ ಹಾಗೂ ಜನಸಂಪರ್ಕ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಭಾಸ್ಕರ್‌ ರಾವ್‌, ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ ಮತ್ತಿತರ ನಾಯಕರು ಭಾಗವಹಿಸಿದ್ದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ