ಕರ್ನಾಟಕ ರಾಜ್ಯದ ವಿತ್ತ ಖಾತೆಯನ್ನು ತಮ್ಮಬಳಿಯೇ ಉಳಿಸಿಕೊಂಡಿರುವ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನಾಳೆ (ಫೆ.17)ರಂದು ರಾಜ್ಯ ಬಜೆಟ್ (State Budget) ಮಂಡಿಸಲಿದ್ದಾರೆ.
ಈ ಬಜೆಟ್ ಗಾತ್ರ 3 ಲಕ್ಷ ಕೋಟಿ ರೂ.ಗಳದ್ದಾಗಿರಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಮಂಡಿಸಲಿರುವ ಬಜೆಟ್ನಲ್ಲಿ ರಾಜ್ಯ ಸಾರಿಗೆಯ ನಾಲ್ಕೂ ನಿಗಮಗಳಿಗೂ ತಲಾ 2-3 ಸಾವಿರ ಕೋಟಿ ರೂ.ಗಳಂತೆ ಕನಿಷ್ಠ 8 ರಿಂದ 12 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಬೇಕು ಎಂದು ನಿಗಮಗಳ ಅಧಿಕಾರಿಗಳು ಮತ್ತು ನೌಕರರು ಮನವಿ ಮಾಡಿದ್ದಾರೆ.
ಕಾರಣ ಈ ನಾಲ್ಕೂ ಸಂಸ್ಥೆಗಳು ಜನರ ಸೇವೆಗಾಗಿ ಇರುವುದು ಹೀಗಾಗಿ ಇವುಗಳಲ್ಲಿ ಆದಾಯ ನಿರೀಕ್ಷೆ ಮಾಡುವ ಬದಲಿಗೆ ಸೇವೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅಂದು ಮೈಸೂರು ಮಹಾರಾಜರು ಆರಂಭಿಸಿದ ಸೇವೆ ಇಂದು ಏಷ್ಯಾ ಖಂಡದಲ್ಲೇ ಹೆಮ್ಮೆರವಾಗಿ ಬೆಳೆದು ನಿಂತಿದೆ ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸೇವಾ ಮನೋಭಾವನೆಯಿಂದ ಆರಂಭವಾಗಿರುವ ಈ ನಿಗಮಗಳ ಮೇಲೆ ಸರ್ಕಾರ ಸರಿಯಾದ ಗಮನ ಹರಿಸುತ್ತಿಲ್ಲ. ಆದರೆ ಹಿರಿಯ ನಾಗರಿಕರು, ಅಂಗವಿಕಲರು, ವಿದ್ಯಾರ್ಥಿಗಳು, ಕಟ್ಟಡ ಕೂಲಿ ಕಾರ್ಮಿಕರು ಹೀಗೆ ಹಲವಾರು ವಿಧದಲ್ಲಿ ರಿಯಾಯಿತಿ ಮತ್ತು ಉಚಿತ ಸೇವೆಯನ್ನು ನೀಡಲಾಗುತ್ತಿದೆ.
ಈ ಉಚಿತ ಸೇವೆ ನೀಡುವುದನ್ನು ಸರ್ಕಾರವೇ ಘೋಷಣೆ ಮಾಡುತ್ತಿದೆ. ಇದು ನಾಡಿನ ಜನತೆಗೆ ಸಂತಸದ ವಿಷಯ. ಆದರೆ, ಈ ಉಚಿತ ಮತ್ತು ರಿಯಾಯಿತಿ ಘೋಷಣೆ ಮಾಡಿರುವುದಕ್ಕೆ ತಕ್ಕಂತೆ ನಿಗಮಗಳಲ್ಲಿ ಹೊಸ ಬಸ್ ಖರೀದಿಸಲು, ಹಳೇ ಬಸ್ಗಳ ರಿಪೇರಿ ಮಾಡಲು ಬಿಡಿಭಾಗಗಳನ್ನು ಕೊಳ್ಳುವುದಕ್ಕೆ ಹಾಗೂ ಪ್ರಮುಖವಾಗಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಾಹಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರಿಗೆ ವೇತನ ನೀಡುವುದಕ್ಕೆ ಕಷ್ಟ ಸಾಧ್ಯವಾಗುತ್ತಿದೆ.
ಹೀಗಾಗಿ ಕಳೆದ 1-2 ದಶಕದಿಂದಲೂ ಸಾರಿಗೆ ನಿಗಮಗಳು ಅಧಿಕಾರಿಗಳು ಮತ್ತು ನೌಕರರಿಗೆ ವೇತನ ಕೊಡಲಾರದಷ್ಟು ಕೆಟ್ಟ ಸ್ಥಿತಿಯನ್ನು ಎದುರಿಸುತ್ತಿವೆ. ಈ ಎಲ್ಲವನ್ನು ಗಮನಿಸಿರುವ ತಾವು ನಾಳೆ ಮಂಡಿಸುತ್ತಿರುವ ರಾಜ್ಯ ಬಜೆಟ್ನಲ್ಲಿ ಸಾರಿಗೆ ನಿಗಮಗಳಿಗೆ 8ರಿಂದ 12 ಕೋಟಿ ರೂ.ಗಳನ್ನು ಮೀಸಲಿಡುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿಹಾಡಬೇಕು ಎಂದು ತಮ್ಮಲ್ಲಿ ಬೇಡಿಕೊಳ್ಳುತ್ತಿದ್ದೇವೆ.
ಇನ್ನು ವೇತನ ಸಂಬಂಧ ನೌಕರರು ಹಲವಾರು ವರ್ಷಗಳಿಂದ ಅನುಭವಿಸುಕೊಂಡು ಬರುತ್ತಿರುವ ತಾರತಮ್ಯತೆಯನ್ನು ಹೋಗಲಾಡಿಸಲು ಬಜೆಟ್ನಲ್ಲೇ ವೇತನ ಹೆಚ್ಚಳ ಸಂಬಂಧ ನೀವೆ ಗೃಹ ಸಚಿವರಾಗಿದ್ದಾಗ ನೀಡಿದ ಭರವಸೆಯಂತೆ ವೇತನ ಆಯೋಗ ಮಾದರಿಯಲ್ಲಿ ವೇತನ ನೀಡುತ್ತೇವೆ ಎಂದು ಘೋಷಣೆ ಮಾಡುವಂತೆ ಸಮಸ್ತ ನೌಕರರು ಮತ್ತು ನಿಗಮದ ಅಧಿಕಾರಿಗಳು ಮನವಿ ಮಾಡುತ್ತಿದ್ದೇವೆ.