ಬೆಂಗಳೂರು: ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾನ್ ಎಸಿ ಸ್ಲೀಪರ್ ಬಸ್ನಲ್ಲಿ ಪ್ರಯಾಣಿಕನೊಬ್ಬ ಸೀಟಿನಲ್ಲಿ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ತನಿಖೆ ಕೈಗೊಂಡಿರುವ ಸಂಸ್ಥೆಯ ಅಧಿಕಾರಿಗಳು ಕೊನೆಗೂ ಆರೋಪಿಯನ್ನು ಪತ್ತೆಹಚ್ಚಿದ್ದು, ಮುಜುಗರಕ್ಕೆ ಒಳಗಾಗಿದ್ದಾರೆ. ಕಾರಣ ಆತ ಬೇರಾರೂ ಅಲ್ಲ ಸಂಸ್ಥೆಯ ಸಿಬ್ಬಂದಿ ಎಂದು ತಿಳಿದು ಬಂದಿದೆ.
ಕಂಠಮಟ್ಟ ಕುಡಿದು ಬಂದಿದ್ದ ಆತ ಯುವತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿಲ್ಲ, ಖಾಲಿ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ, ಆತನನ್ನು ಬೈದು ಅಲ್ಲಿಯೇ ಇಳಿಸಿ ಪ್ರಯಾಣ ಮುಂದುವರಿಸಲಾಗಿತ್ತು ಎಂದು ಕೆಎಸ್ಆರ್ಟಿಸಿ ನಿನ್ನೆಯಷ್ಟೇ (ಫೆ.23) ಸ್ಪಷ್ಟನೆ ನೀಡಿತ್ತು.
ಆ ಬಳಿಕ ತೀವ್ರವಾಗಿ ತನಿಖೆ ಕೈಗೊಂಡ ಅಧಿಕಾರಿಗಳಿಗೆ ಆತ ಸಂಸ್ಥೆಯ ಮೆಕ್ಯಾನಿಕ್ ಎಂದು ತಿಳಿದು ಬಂದಿದೆ. ಇದರಿಂದ ತೀವ್ರ ಮುಜುಗರಕ್ಕೆ ಗುರಿಯಾಗಿರುವ ಕೆಎಸ್ಆರ್ಟಿಸಿ ತಾಂತ್ರಿಕ ಸಿಬ್ಬಂದಿ ಅಂದು ಎಸಗಿದ ಪ್ರಮಾದಕ್ಕೆ ಆ ಬಸ್ನಲ್ಲಿ ಅಂದು ಕರ್ತವ್ಯ ನಿರ್ವಹಿಸಿದ ಚಾಲಕ, ನಿರ್ವಾಹಕರನ್ನು ಅಮಾನತುಗೊಳಿಸಲು ಚಿಂತನೆ ನಡೆಸಿದೆ ಎಂದು ಸಂಸ್ಥೆಯ ಮೂಲಗಳಿಂದ ತಿಳಿದು ಬಂದಿದೆ.
ಆರೋಪಿ ಕೆಎಸ್ಆರ್ಟಿಸಿ ತಾಂತ್ರಿಕ ಸಿಬ್ಬಂದಿ ಅಂದು ಮುಂಗಡ ಆಸನ ಕಾಯ್ದಿರಿಸಿರಲಿಲ್ಲ. ಮಾತ್ರವಲ್ಲ ಕೆಎಸ್ಆರ್ಟಿಸಿ ಸಿಬ್ಬಂದಿ ವರ್ಗದವರು ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಆದರೆ ಸ್ಲೀಪರ್ ಬಸ್ನಲ್ಲಿ ಪ್ರಯಾಣಿಸುಲು ಅವಕಾಶವಿಲ್ಲ. (ಅಂದರೆ ಟಿಐ ಸೇರಿದಂತೆ ಮೇಲಧಿಕಾರಿಗಳು ಮಾತ್ರ ಇಂಥ ಬಸ್ಗಳಲ್ಲಿ ಪ್ರಯಾಣಿಸಲು ಅವಕಾಶವಿದೆ.) ಆದರೂ ಈ ತಾಂತ್ರಿಕ ಸಿಬ್ಬಂದಿ ಆ ಬಸ್ನಲ್ಲಿ ಬಂದಿದ್ದಾರೆ. ಹೀಗಾಗಿ ತಮ್ಮದೇ ಸಂಸ್ಥೆಯ ಸಿಬ್ಬಂದಿಯಾಗಿದ್ದರಿಂದ ಕಂಡಕ್ಟರ್ ಅವರಿಗೆ ಟಿಕೆಟ್ ಕೊಟ್ಟಿಲ್ಲ.
ಆದರೆ, ಮದ್ಯ ಸೇವಿಸಿ ಬಂದು ತಾಂತ್ರಿಕ ಸಿಬ್ಬಂದಿ ತೋರಿದ ದುರ್ವರ್ತನೆಯಿಂದ ಅಂದು ಬಸ್ನಲ್ಲಿ ಕರ್ತವ್ಯ ನಿರ್ವಹಿಸಿದ ನಿರ್ವಾಹಕ ಮತ್ತು ಚಾಲಕರಿಗೆ ಈಗ ಸಂಕಷ್ಟ ಎದುರಾಗಿದೆ.
ಮೂತ್ರ ವಿಸರ್ಜನೆ ಮಾಡಿದ ಆತ, ಆಸನ ಸಂಖ್ಯೆ 29ರಲ್ಲಿ ಕುಳಿತಿದ್ದರೆ, ಯುವತಿಯು ಆಸನ ಸಂಖ್ಯೆ 3ರಲ್ಲಿದ್ದರು. ಬಸ್ಸನ್ನು ಚಾಲಕ ಹುಬ್ಬಳ್ಳಿಯ ಕಿರೇಸೂರು ಹೋಟೇಲ್ ಬಳಿ ಅಂದು ರಾತ್ರಿ 10:30ಕ್ಕೆ ಊಟ, ತಿಂಡಿ ಮತ್ತು ನೈಸರ್ಗಿಕ ಕರೆಗಾಗಿ ನಿಲ್ಲಿಸಿದ್ದರು. ಪ್ರಯಾಣಿಕರೆಲ್ಲ ಬಸ್ಸಿನಿಂದಿಳಿದು ಊಟಕ್ಕೆ ಹೋಗಿದ್ದರು. ಆಸನ ಸಂಖ್ಯೆ 29ರಲ್ಲಿದ್ದ ಪಾನಮತ್ತನು ಚಾಲಕನ ಹಿಂದಿನ ಸೀಟಿನ (ಆಸನ ಸಂಖ್ಯೆ 3) ಬಳಿ ಬಂದು ಅದರ ಮೇಲೆ ಮೂತ್ರ ವಿಸರ್ಜಿಸಿದ್ದಾನೆ.
ಅದೇ ಸಮಯಕ್ಕೆ ಊಟ ಮುಗಿಸಿ ಮಹಿಳಾ ಪ್ರಯಾಣಿಕರು ಬಸ್ ಏರಲು ಮುಂದಾಗ, ಘಟನೆಯನ್ನು ಕಂಡು ತಕ್ಷಣವೇ ಚಾಲಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ಚಾಲಕರ, ನಿರ್ವಾಹಕರು ಮತ್ತು ಇತರೆ ಪ್ರಯಾಣಿಕರು, ಆತನನ್ನು ಬಸ್ನಿಂದ ಕೆಳಗಿಳಿಸಿ ಬೈದು ತರಾಟೆಗೆ ತೆಗೆದುಕೊಂಡಿದ್ದು, ನಂತರ ಆಸನವನ್ನು ಶುಚಿಗೊಳಿಸಿದ ಬಸ್ ಸಿಬ್ಬಂದಿ ಪ್ರಯಾಣ ಮುಂದುವರಿಸಿದ್ದಾರೆ.
ಆ ಬಳಿಕ ಯುವತಿಯು ಆಸನ ಸಂಖ್ಯೆ 9ರಲ್ಲಿ ಕುಳಿತು ಪ್ರಯಾಣ ಮುಂದುವರಿಸಿ ಇತರ ಆರು ಮಂದಿ ಪ್ರಯಾಣಿಕರ ಜತೆ ಹುಬ್ಬಳ್ಳಿಯಲ್ಲಿ ಇಳಿದಿದ್ದಾರೆ. ಈ ವೇಳೆ ಯಾವುದೇ ದೂರು ಕೊಡಲು ಆ ಯುವತಿ ಒಪ್ಪಿಲ್ಲ. ಆದರೂ ಸಂಸ್ಥೆಯ ಅಧಿಕಾರಿಗಳು ತಮ್ಮ ವಾಹನದಲ್ಲಿ ಆಗಿರುವ ಪ್ರಮಾದವನ್ನು ಬಯಲಿಗೆಳೆಯಲು ತನಿಖೆ ಮುಂದುವರಿಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.