ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳೊಂದಿಗೆ ನಿನ್ನೆ (ಶುಕ್ರವಾರ) ಮಧ್ಯಾಹ್ನ 12.30ರಿಂದ 3 ಗಂಟೆಯವರೆಗೂ ಸಂಸ್ಥೆ ಎಂಡಿ ಗೌಪ್ಯ ಸಭೆ ನಡೆಸಿದ್ದು ಹಳೆಯದಾಯಿತು. ಆದರೆ ಮತ್ತೆ ಇಂದು (ಶನಿವಾರ ಮಾ.18) ಗೌಪ್ಯ ಸಭೆ ನಡೆಸುವ ಮೂಲಕ ನೌಕರರಿಗೆ ಸಿಹಿ ಬದಲು ಕಹಿ ಸುದ್ದಿ ನೀಡುವುದಕ್ಕೆ ಮುಂದಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಈ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳನ್ನು ಶಾಂತಿನಗರದಲ್ಲಿರುವ ತಮ್ಮ ಕೇಂದ್ರ ಕಚೇರಿಗೆ ಇಂದು ಕರೆಸಿಕೊಂಡು ಸಂಜೆ 4ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೂ ಅಂದರೆ 4 ಗಂಟೆಗಳ ಕಾಲ ಗೌಪ್ಯ ಸಭೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.
ಸಭೆ ಬಳಿಕ ಇದೇ 21ರಂದು ಕರೆನೀಡಿರುವ ಮುಷ್ಕರವನ್ನು ಕೈ ಬಿಡುವ ಬಗ್ಗೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ತೀರ್ಮಾನಿಸಲಿದ್ದಾರೆ ಎಂದು ಕೂಡ ಬಲ್ಲ ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
ಆದರೆ, ಸುಮಾರು 4 ಗಂಟೆಗಳು ನಡೆದ ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದನ್ನು ಇನ್ನೂ ಗೌಪ್ಯವಾಗಿಡಲಾಗಿದ್ದು, ಜಂಟಿ ಕ್ರಿಯಾ ಸಮಿತಿಯ ನಡೆ ಏನು ಎಂಬುವುದು ಇಂದು ಅಥವಾ ನಾಳೆ ಬೆಳಗ್ಗೆಯಷ್ಟರಲ್ಲೇ ಬಹಿರಂಗವಾಗುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.