“ಯಾವುದೇ ಒಂದು ಕ್ರಿಮಿನಲ್ ಪ್ರಕರಣವನ್ನು ಸರ್ಕಾರ ವಾಪಸ್ ತೆಗೆದುಕೊಳ್ಳಬೇಕು ಎಂದರೆ ಅದಕ್ಕೆ ಅದರದ್ದೇ ಆದ ಕೆಲವು ನಿಯಮಗಳು ಇರುತ್ತವೆ. ಆ ನಿಯಮದ ಪ್ರಕಾರವೆ ಕೇಸ್ಗಳನ್ನು ವಾಪಸ್ ಪಡೆಯಬೇಕು. ಹಾಗಂದ ಮಾತ್ರಕ್ಕೆ ಅದು ತುಂಬ ಜಟಿಲವಾದ ಸಮಸ್ಯೆ ಎಂದು ಭಾವಿಸಬೇಕಿಲ್ಲ. ಆದರೆ ಸರ್ಕಾರ ಮನಸ್ಸು ಮಾಡಬೇಕು ಅಷ್ಟೆ.
ಇನ್ನು ಸಾರಿಗೆ ನೌಕರರ ವಿಷಯದಲ್ಲೂ ಇದೆ ನಡೆಯುತ್ತಿದೆ. ಕಳೆದ ಸುಮಾರು 3 ವರ್ಷಗಳಿಂದಲೂ ನೌಕರರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ ಅವರನ್ನು ಇನ್ನು ಅಲೆಸಲಾಗುತ್ತಿದೆ. ಈ ಬಗ್ಗೆ ವಿಜಯಪಥದೊಂದಿಗೆ ಮಾತನಾಡಿರುವ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲರಾದ ಶಿವರಾಜು ಎಚ್.ಬಿ. ಅವರು ಏನು ಹೇಳಿದ್ದಾರೆ ಎಂಬುದನ್ನು ನೋಡುವುದಾದರೆ…
ಯಾವುದೇ ಒಂದು ಕ್ರಿಮಿನಲ್ ಪ್ರಕರಣವನ್ನು ಸರ್ಕಾರ ವಾಪಸ್ ತೆಗೆದುಕೊಳ್ಳಬೇಕು ಅಂದರೆ ಅದಕ್ಕೆ ಅದರದ್ದೇ ಆದಂತಹ ಕೆಲವು ನಿಯಮಗಳಿವೆ. ಭಾರತ ದಂಡ ಸಂಹಿತೆ ಹಾಗೂ ದಂಡ ಪ್ರಕ್ರಿಯೆಯಡಿಯಲ್ಲಿ ಬರುವಂತಹ ಸೆಕ್ಷನ್ಗಳನ್ನು ಉಲ್ಲೇಖಿಸಿ ನಂತರದಲ್ಲಿ ಸರ್ಕಾರ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ದಾಖಲಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ.
ಅಂದರೆ ಮೊದಲು ಗೃಹ ಇಲಾಖೆಯ ಕಾರ್ಯದರ್ಶಿಯವರ ಜತೆ ಚರ್ಚೆಯನ್ನು ನಡೆಸಬೇಕು. ಆ ನಂತರ ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿಗಳು ಒಟ್ಟಿಗೆ ಸಭೆಯನ್ನು ಸೇರಿ ತದನಂತರದಲ್ಲಿ ಆ ರಾಜ್ಯದ ಮುಖ್ಯಮಂತ್ರಿಗಳಿಗೆ ವರದಿಯನ್ನು ಸಲ್ಲಿಸಬೇಕು.
ಇನ್ನು ಮುಖ್ಯಮಂತ್ರಿಯವರ ವಿವೇಚನಾನುಸಾರ ಮತ್ತೆ ಗೃಹ ಇಲಾಖೆಯ ಕಾರ್ಯದರ್ಶಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವರದಿಯೊಳಗೊಂಡಂತೆ ಮತ್ತೊಂದು ಸಭೆ ಸೇರಿ ಚರ್ಚಿಸಬೇಕು. ಆ ನಂತರದಲ್ಲಿ ಸರ್ಕಾರಿ ಅಭಿಯೋಜನಾಲಯದ ಮುಖ್ಯಸ್ಥರೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಬೇಕು. ಆ ಬಳಿಕ ಸರ್ಕಾರಿ ಅಭಿಯೋಜಕರಿಂದ ಯಾವ ನ್ಯಾಯಾಲಯದಲ್ಲಿ ಪ್ರಕರಣವಿದೆ. ಅದು ಯಾವ ಹಂತದಲ್ಲಿದೆ ಎಂಬುದನ್ನು ಅಭಿಯೋಜನಾಲಯದ ಮುಖ್ಯಸ್ಥರು ತಿಳಿದುಕೊಳ್ಳಲು ಸರ್ಕಾರಿ ಅಭಿಯೋಜಕರೊಂದಿಗೆ ಚರ್ಚೆ ನಡೆಸುತ್ತಾರೆ.
ಬಳಿಕ ಪ್ರಕರಣಗಳ ವಿವರ ಪಡೆದುಕೊಂಡು ಮತ್ತೆ ಗೃಹ ಕಾರ್ಯದರ್ಶಿ ಅವರೊಂದಿಗೆ ಅಭಿಯೋಜನಾಲಯದ ಮುಖ್ಯಸ್ಥರು ಸಭೆಸೇರಿ ಅದನ್ನು ನೋಟಿಫಿಕೇಷನ್ ಮಾಡಿ ತದನಂತರದಲ್ಲಿ ಆ ಪ್ರಕರಣಗಳನ್ನು ವಾಪಸ್ ಪಡೆಯಲು ಅವಕಾಶವಿರುತ್ತದೆ.
ಯಾವ ಪ್ರಕರಣವನ್ನು ವಾಪಸ್ ಪಡೆಯಬಹುದು: ಇಲ್ಲಿ ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯವೆಂದರೆ ಯಾವುದೇ ಒಂದು ಪ್ರಕರಣವನ್ನು ವಾಪಸ್ ಪಡೆಯಲು ಆ ಪ್ರಕರಣ ಪ್ರಮುಖವಾದಂತಹ ಪ್ರಕರಣವೇ ಅಥವಾ ಪ್ರಮುಖವಾದಂತಹ ಪ್ರಕರಣವಲ್ಲವೇ ಮತ್ತು 7 ವರ್ಷದೊಳಗಿನ ಶಿಕ್ಷೆಯೊಳಗೊಂಡ ಪ್ರಕರಣವೇ ಅಥವಾ 7 ವರ್ಷಕ್ಕೂ ಮೇಲ್ಪಟ್ಟ ಶಿಕ್ಷೆ ಪ್ರಮಾಣವನ್ನು ಹೊಂದಿರುವಂತಹ ಪ್ರಕರಣವೇ ಎಂಬುದನ್ನು ಗಮನಿಸಬೇಕಾಗುತ್ತದೆ.
ಅಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಪ್ರಕರಣಗಳಲ್ಲೂ ಈ ಎಲ್ಲ ದೃಷ್ಟಿ ಕೋನದಡಿ ನೋಡಬೇಕಾಗುತ್ತದೆ. ಆದರೆ ಇಲ್ಲಿ ಸಾರಿಗೆ ನೌಕರರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಎಫಿಡೆಮಿಕ್ ಆಕ್ಟ್ಗೆ ಸಂಬಂಧಪಟ್ಟಂತಹ ಪ್ರಕರಣಗಳು ಮತ್ತು ಸೆಕ್ಷನ್ 353, 504,506ಗೆ ಸಂಬಂಧಪಟ್ಟಂತಹ ಪ್ರಕರಣಗಳು. ಇಂಥ ಪ್ರಕರಣಗಳೆಲ್ಲ ಕೇವಲ 2-3 ವರ್ಷದೊಳಗಿನ ಶಿಕ್ಷೆ ವ್ಯಾಪ್ತಿಗೆ ಬರುವಂಥವುಗಳು. ಅಲ್ಲದೆ ಈ ಎಲ್ಲವುಗಳು ಈಗ ಕೆಳಹಂತದ ನ್ಯಾಯಾಲಯದಲ್ಲೇ ಇರುವುದರಿಂದ ಸರ್ಕಾರ ಮನಸ್ಸು ಮಾಡಿದರೆ ಗೃಹ ಇಲಾಖೆಯ ಕಾರ್ಯದರ್ಶಿಯವರ ಜತೆ ಚರ್ಚಿಸಿ ವಾಪಸ್ ಪಡೆಯಬಹುದಾಗಿದೆ.
ಆದರೆ ಇಂಥ ಪ್ರಕರಣಗಳನ್ನು ವಾಪಸ್ ಪಡೆಯಲು ಈ ಮೇಲೆ ತಿಳಿಸಿದಂತೆ ಎಲ್ಲ ಚರ್ಚೆಗಳನ್ನು ನಡೆಸಿ ಒಂದು ಅಂತಿಮ ನಿರ್ಧಾರಕ್ಕೆ ಬರಲು ಕನಿಷ್ಠ ಅಂದರೂ 3ರಿಂದ 4 ತಿಂಗಳುಗಳ ಕಾಲ ತೆಗೆದುಕೊಳ್ಳಲಿದೆ.
ಅಂದು ಪ್ರಕರಣಗಳು ಸಾರಿಗೆಯ ಕೆಲ ನೌಕರರ ವಿರುದ್ಧ ಉದಾ: ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ, ಹಲಸೂರು ಗೇಟ್ ಪೊಲೀಸ್ ಠಾಣೆ, ಯಶವಂತಪುರ, ಕೊತ್ತನೂರು, ಅಮೃತಹಳ್ಳಿ, ಕೆ.ಆರ್.ಪುರ ಹೀಗೆ ಹತ್ತಾರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳು ದಾಖಲಾಗುತ್ತಿದ್ದಂತೆ ಅವುಗಳಿಗೆ ಬೇಕಾದ ಎಲ್ಲ ಜಾಮೀನನ್ನು ನಗರದ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿಸಲ್ಲಿಸುವ ಮೂಲಕ ಸುಮಾರು 150 ನೌಕರರಿಗೆ ಜಾಮೀನು ಮಂಜೂರು ಮಾಡಿಸಿಕೊಟ್ಟಿದ್ದೇವೆ.
ಇನ್ನು ನಿನ್ನೆ ಶೇ.15ರಷ್ಟು ವೇತನ ಹೆಚ್ಚಳಕ್ಕೆ ಬೆಸ್ತುಬಿದ್ದಿರುವ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ನೌಕರರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದೇ ಹೇಳಬಹುದು. ಅಲ್ಲದೆ ವಕೀಲರು ಶೇ.45ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಷ್ಟು ಆದರೆ ನೌಕರರು ಎಲ್ಲಿ ಆ ಹಣವನ್ನು ಇಟ್ಟುಕೊಳ್ಳುತ್ತಾರೆ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ವಕೀಲ ಶಿವರಾಜು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.