ಬೆಂಗಳೂರು: ಕಳೆದೊಂದು ತಿಂಗಳಿಂದ ನಿವೃತ್ತರ ಪಿಂಚಣಿಗಾಗಿ ದೆಹಲಿಯಲ್ಲಿ ನಮ್ಮ ಮುಖಂಡರು ನಡೆಸುತ್ತಿರುವ ಹೋರಾಟಕ್ಕೆ ಇದುವರೆಗೂ ಪ್ರತಿಫಲ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಹಾಗೂ ಅಧಿಕಾರಿಗಳ ಈ ನಡೆ ಬಗ್ಗೆ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ಆಕ್ರೋಶ ವ್ಯಕ್ತಪಡಿಸಿದರು.
NAC, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ವತಿಯಿಂದ ಇತ್ತೀಚೆಗೆ ನಗರದ ರಿಚ್ಮಂಡ್ ವೃತ್ತದ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿ ಬಳಿ ಆಯೋಜಿಸಿದ್ದ ನೂರಾರು ನಿವೃತ್ತರು (ಇಪಿಎಸ್ ಪಿಂಚಿಣಿದಾರರ), ಕೇಂದ್ರ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
“ನಿಧಿ ಆಪ್ಕೆನಿಕಟ್” ಕಾರ್ಯಕ್ರಮವನ್ನು ಇಪಿಎಫ್ಓ ಅಧಿಕಾರಿಗಳು ದೇಶಾದ್ಯಂತ ತಮ್ಮ ಎಲ್ಲ ಕಚೇರಿ ಆವರಣದಲ್ಲಿ ಆಯೋಜಿಸಿರುವ ಬಗ್ಗೆ ಪ್ರತ್ರಿಕಾ ಪ್ರಕಟಣೆ ಹೊರಡಿಸಿ ನಿವೃತ್ತರು ತಮ್ಮ ಎಲ್ಲ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದ್ದರು ಆದರೆ. ಈವರೆಗೂ ಅದು ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಡೋಲಪ್ಪ ಮಾತನಾಡಿ, ಕಳೆದೊಂದು ವರ್ಷದಿಂದ ನಾವು ಪ್ರತಿಭಟನೆ ಮೂಲಕ ಸಲ್ಲಿಸಿದ ಮನವಿಗಳಿಗೆ ಈ ಅಧಿಕಾರಿಗಳು ಸ್ಪಂದಿಸದೆ ಇದ್ದು, ನಮ್ಮ ಹೋರಾಟವನ್ನು ಇನ್ನೂ ತೀವ್ರಗೊಳಿಸಬೇಕೆಂದು ಕರೆ ನೀಡಿದರು.
ರಾಷ್ಟ್ರೀಯ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಮಾತನಾಡಿ, ಅಧಿಕಾರಿಗಳು ನಿವೃತ್ತರನ್ನು ಶೋಷಣೆ ಮಾಡುತ್ತಿದ್ದು, ನಮ್ಮಿಂದ ಸಂಗ್ರಹಿಸಿರುವ ದೇಣಿಗೆ, ಅದಕ್ಕೆ ಪ್ರತಿಫಲವಾಗಿ ಅವರು ನೀಡುತ್ತಿರುವ ಕನಿಷ್ಠ ಪಿಂಚಣಿ ಅನ್ಯಾಯದಿಂದ ಕೂಡಿದ್ದು, ಮುಂದಿನ ದಿನಗಳಲ್ಲಿ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅನಿಲ್ ಇನಾಮ್ ದಾರ್ ಎನ್ಎಸಿ ಕೋ-ಆರ್ಡಿನೇಟರ್ ಮಾತನಾಡಿ, ನಿವೃತ್ತರು ಇನ್ನು ಹೆಚ್ಚು ದಿನ ಕಾಯಲು ಸಿದ್ದರಿಲ್ಲ, ಸರ್ಕಾರ ಕೂಡಲೇ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.
ಅಧ್ಯಕ್ಷ ಶಂಕರ್ ಕುಮಾರ್ ಮಾತನಾಡಿ, ನಿವೃತ್ತರಿಂದ ಅಧಿಕಾರಿಗಳು ಸಂಗ್ರಹಿಸಿದ ಹಣ ಇಪಿಎಫ್ಒ ಖಜನೆ ತುಂಬಿದೆ. ಬರುವ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ತಪ್ಪಿದಲ್ಲಿ ಮತದಾನದ ಅಸ್ತ್ರ ನಮ್ಮಲ್ಲಿದ್ದು, ಈ ಸರ್ಕಾರವನ್ನು ಬಗ್ಗು ಬಡಿವ ಶಕ್ತಿ ನಮಗಿದೆ ಎಂದು ಎಚ್ಚರಿಕೆ ನೀಡಿದರು.
ಉಪಾಧ್ಯಕ್ಷ ಆರ್.ಸುಬ್ಬಣ್ಣ ಮಾತನಾಡಿ, ಪಿಂಚಣಿದಾರರ ಹೋರಾಟ ನಿರ್ಣಯ ಹಂತಕ್ಕೆ ಬಂದಿದ್ದು, ಮೊನ್ನೆ ಸೋಲ್ಲಾಪುರದ ಪ್ರಧಾನ ಮಂತ್ರಿಗಳ ಕಾರ್ಯಕ್ರಮದಲ್ಲಿ ನಮ್ಮ ಮುಖಂಡರಾದ ನರಸಯ್ಯ ಆದಮ್ ಜಿ ಅವರು ನಿವೃತ್ತರ ಪರ ಮಂಡಿಸಿದ ಆಹವಾಲು ಅತ್ಯಂತ ಪರಿಣಾಮಕಾರಿಯಾಗಿದ್ದು, ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳದೆ ಹೋದಲ್ಲಿ ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚಿಕ್ಕಬಳ್ಳಾಪುರದಿಂದ ಆಗಮಿಸಿದ್ದ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಸಹ ಮಾತನಾಡಿದರು. ಅಂತಿಮವಾಗಿ ಎನ್ಎಸಿ ಹಾಗೂ ಬಿಎಂಟಿಸಿ, & ಕೆಎಸ್ಆರ್ಟಿಸಿ ವತಿಯಿಂದ ಮನವಿ ಪತ್ರಗಳನ್ನು ಇಪಿಎಫ್ಒ ಅಧಿಕಾರಿಗೆ ನೀಡಲಾಯಿತು.
ಮನವಿ ಪತ್ರಕ್ಕೆ ಪ್ರತಿಕ್ರಿಯಿಸಿದ ಅವರು ಇಂದಿನ ನಿಮ್ಮ ಎಲ್ಲ ಮಾಹಿತಿಗಳನ್ನು ತಮ್ಮ ಶಿಫಾರಸ್ಸಿನೊಂದಿಗೆ ಕೇಂದ್ರ ಕಚೇರಿಗೆ ಕಳುಹಿಸಿ ಕೊಡುವುದಾಗಿ ತಿಳಿಸಿದರು.
ಪದಾಧಿಕಾರಿಗಳಾದ ನಾಗರಾಜು ಹಾಗೂ ರೂಕ್ಮೇಶ್ ಯಾವುದೆ ಸಮಸ್ಯೆ ಆಗದಂತೆ ನೋಡಿಕೊಂಡರು. ಪ್ರತಿಭಟನಾ ಸಭೆ ಅತ್ಯಂತ ಆವೇಶಭರಿತವಾಗಿದ್ದು, ಕೇಂದ್ರ ಸರ್ಕಾರಕ್ಕೆ ಇದೊಂದು ಎಚ್ಚರಿಕೆಯ ಗಂಟೆ ಆಗಿದೆ.