ಕೆ.ಆರ್.ಪೇಟೆ: ಪ್ರತಿದಿನವೂ ಯೋಗಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಂಡು ಸಮೃದ್ಧ ಆರೋಗ್ಯವಂತ ಜೀವನ ನಡೆಸಿ. ಇದಕ್ಕೆ ಯೋಗವೊಂದೆ ಸಂಜೀವಿನಿ ಎಂದು ಯೋಗ ತರಬೇತಿ ಮಾರ್ಗದರ್ಶಕಿ ಡಾ. ದಿವ್ಯಾ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಯುಷ್ ಇಲಾಖೆ ವತಿಯಿಂದ ಕೃಷ್ಣರಾಜಪೇಟೆ ತಾಲೂಕಿನ ಶೆಟ್ಟನಾಯಕನ ಕೊಪ್ಪಲು ಗ್ರಾಮದಲ್ಲಿರುವ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಸಾಮೂಹಿಕ ಯೋಗ ಮಾರ್ಗದರ್ಶನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದೇ ತಿಂಗಳು ಜೂನ್ 21ರ ಶುಕ್ರವಾರ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ಯೋಗ ಪ್ರದರ್ಶನ ಕಾರ್ಯಕ್ರಮ ನಡೆಯುತ್ತಿದ್ದು, ವಿದ್ಯಾರ್ಥಿಗಳು ಯುವಜನರು ಸೇರಿದಂತೆ ಕೋಟ್ಯಂತರ ಜನರು ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಅಂದು ಬೆಳಗ್ಗೆ 6 ಗಂಟೆಯಿಂದ 7ಗಂಟೆವರೆಗೆ ನಡೆಯುವ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರು ತಪ್ಪದೇ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಯೋಗ ತರಬೇತಿ ಮಾರ್ಗದರ್ಶಕಿ ಡಾ.ದಿವ್ಯಾ ವಿವಿಧ ಯೋಗಾಸನ ಭಂಗಿಗಳನ್ನು ಪ್ರದರ್ಶಿಸಿ, ಇದು ಆರೋಗ್ಯವಂತ ಜೀವನಕ್ಕೆ ಸಂಜೀವಿನಿಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಯುವಜನರು ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡು ಪ್ರತಿದಿನವೂ ಯೋಗ ಮಾಡಿ ತಮ್ಮ ಆರೋಗ್ಯ ಸಂವರ್ಧನೆ ಮಾಡಿಕೊಂಡು ನೂರ್ಕಾಲ ಸಂತೋಷದಿಂದ ಶಿಸ್ತು ಬದ್ಧ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಂಶುಪಾಲೆ ಪವಿತ್ರ, ನಿಲಯಪಾಲಕಿ ನಗಿನಾಬಾನು ಸೇರಿದಂತೆ ಶಿಕ್ಷಕರು ಹಾಗೂ ಯೋಗ ಮಾರ್ಗದರ್ಶಕರು ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ