NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನೌಕರರ ವೇತನ ಹೆಚ್ಚಳ ಸಂಬಂಧ ಸಿಎಂ-ಸಾರಿಗೆ ಸಚಿವರ ನಡುವೆ ಏನೋ ಸರಿ ಇಲ್ಲ..!

ವಿಜಯಪಥ ಸಮಗ್ರ ಸುದ್ದಿ
  • ಇಂದು ನಡೆಯಬೇಕಿದ್ದ ಸಭೆ ಮಾಹಿತಿಯೇ ಇಲ್ಲದೆ ರದ್ದು
  • ಇದಕ್ಕೆ ಸಿಎಂ ಸಾರಿಗೆ ಸಚಿವರ ನಡುವೆ ಹೊಂದಾಣಿಕೆ ಕೊರತೆ ಕಾರಣವೆ?

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಸಂಬಂಧ ಇಂದು (14ರಂದು) ನಡೆಬೇಕಿದ್ದ ನೌಕರರ ಸಂಘಟನೆಗಳ ಜತೆಗೆ ಸಿಎಂ ಸಭೆಯನ್ನು ಕೆಲ ಕಾರಣಗಳಿಂದ ಮಾಡಲಾಗಲಿಲ್ಲ. ಆದರೆ ಶೀಘ್ರದಲ್ಲೇ ಸಭೆ ಕರೆಯಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಅತೀ ಶೀಘ್ರದಲ್ಲೇ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗುವುದು ಹೀಗಾಗಿ ಸಭೆಗೆ ಎಲ್ಲ ಸಂಘಟನೆಗಳ ಪದಾಧಿಕಾರಿಗಳನ್ನು ಕರೆಯಲಾಗುವುದು. ಯಾವುದೇ ನೌಕರರು ಗಾಬರಿ ಪಡುವುದು ಬೇಡ ಎಂದು ತಮ್ಮನ್ನು ಭೇಟಿ ಮಾಡಿದ ಒಕ್ಕೂಟದ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.

ಆದರೆ, ಈ ಎಲ್ಲವನ್ನು ಗಮನಿಸಿದರೆ ಸಿಎಂ ಪದೇಪದೆ ಸಾರಿಗೆ ನೌಕರರ ವೇತನ ಸಂಬಂಧ ಸಭೆ ಕರೆಯುವುದಾಗಿ ಹೇಳಿ ಮತ್ತೆ ಅದನ್ನು ಯಾವುದೇ ಸಕಾರಣವಿಲ್ಲದೆ ಕೈಬಿಡುವ ಕೆಲಸ ಮಾಡುತ್ತಿದ್ದಾರೆ. ಇದು ಒಂದು ರೀತಿ ಮಕ್ಕಳಾಟದಂತೆ ಸಿಎಂ ಸಾರಿಗೆ ನೌಕರರ ವಿಷಯದಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಸಾರಿಗೆ ಸಚಿವರು ಸಭೆ ಕರೆಯುತ್ತೇವೆ ಎಂದು ನಮ್ಮ ಬಳಿ ಹೇಳುತ್ತಾರೆ. ಆದರೆ ಸಿಎಂ ಸಭೆಯನ್ನು ಹೇಳದೆ ಕೇಳದೆ ಕೈಬಿಡುತ್ತಾರೆ. ಅಂದರೆ ಸಿಎಂ ಮತ್ತು ಸಾರಿಗೆ ಸಚಿವರ ನಡುವೆ ಹೊಂದಾಳಿಕೆ ಕೊರತೆ ಇದೆಯೇ ಎಂದು ಅನಿಸುತ್ತಿದೆ. ಕಾರಣ ಸಚಿವರು ಸಿಎಂ ಸಭೆ ನಡೆಸುತ್ತಾರೆ ಎಂದು ದಿನಾಂಕವನ್ನು ಹೇಳಿರುತ್ತಾರೆ. ಆದರೆ ಅತ್ತ ಸಿಎಂ ಅದನ್ನು ಡಸ್ಟ್‌ಬಿನ್‌ಗೆ ಹಾಕುತ್ತಾರೆ.

ಅಂದರೆ ಇಲ್ಲಿ ನಾವು ದುಡಿಯುವ ವರ್ಗದ ಪರ ಇದ್ದೇವೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಸಿಎಂ ಈ ಜಬಾಬ್ದಾರಿಯನ್ನೇ ಮರೆಯುತ್ತಿದ್ದಾರೆ ಏಕೆ? ಇದರಿಂದ ಸಾರಿಗೆ ನೌಕರರಿಗೆ ಕಳೆದ 2020 ಜನವರಿ ಒಂದರಿಂದ ಅನ್ವಯವಾಗುವಂತೆ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿನ್ನು ಈವರೆಗೂ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1 ರಿಂದ ಆಗಬೇಕಿರುವ ವೇತನ ಹೆಚ್ಚಳದ ಬಗ್ಗೆಯೂ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ.

ಇದನ್ನು ನೋಡಿದರೆ ಸಿಎಂ ಸಾರಿಗೆಯ ನಾಲ್ಕೂ ನಿಗಮಗಳ ಬಗ್ಗೆ ತಾರತಮ್ಯತೆ ಅನುಸರಿಸುತ್ತಿದ್ದಾರೆ ಎಂಬುವುದು ಮೇಲ್ನೋಟಕ್ಕೆ ಅನಿಸುತ್ತಿದೆ. ಅಲ್ಲದೆ ಈ ಸಾರಿಗೆ ನೌಕರರ ಒಕ್ಕೂಟ ಮತ್ತು ಜಂಟಿ ಕ್ರಿಯಾ ಸಮಿತಿಯ ನಿಲುವುಗಳು ವಿರುದ್ಧ ದಿಕ್ಕಿನಲ್ಲಿರುವುದರಿಂದ ಸಿಎಂ ಸಿದ್ದರಾಮಯ್ಯ ನೌಕರರ ವೇತನ ಸಂಬಂಧ ದೃಢ ನಿರ್ಧಾರಕ್ಕೆ ಬರದೆ ಸುಖಸುಮ್ಮನೆ ಕಾಲ ದೂಡಿಕೊಂಡೆ ಬರುತ್ತಿದ್ದಾರೆ.

ಇದು ಹೀಗೆಯೇ ಮುಂದುವರಿದರೆ ಮತ್ತೆ 2021ರ ಮುಷ್ಕರವನ್ನು ಕಾಂಗ್ರೆಸ್‌ ಸರ್ಕಾರ ಕೂಡ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಈ ಹಿಂದಿನಿಂದಲೂ ಸಾರಿಗೆ ನೌಕರರು ಕೊಡುತ್ತಲೇ ಬರುತ್ತಿದ್ದಾರೆ. ಅದು ಆಗುವಂತೆ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತಂದುಕೊಳ್ಳುತ್ತಾರೋ ಇಲ್ಲ ತಾವು ಪ್ರಣಾಳಿಕೆಯಲ್ಲಿ ನೀಡಿರುವಂತೆ ಸರಿ ಸಮಾನ ವೇತನ ಮಾಡಿ ಸಿಎಂ ತಮ್ಮ ಮತ್ತು ಸರ್ಕಾರ ಮಾನ ಉಳಿಸಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

Megha
the authorMegha

Leave a Reply

error: Content is protected !!