ಪಬ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ
ಎಲ್ಲ ವ್ಯವಹಾರಿಕ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದಾರಾ ಎಂದು ಪರಿಶೀಲನೆ ನಡೆಸಲು ಹೇಳಿದ್ದೇನೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಸಿಎಂ ಗಮನಕ್ಕೆ ತರಲಾಗಿದೆ

ಮೈಸೂರು: ನಿನ್ನೆ ಸೋಮವಾರ ಪಬ್ನಲ್ಲಿ ಸಂಭವಿಸಿದ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು ನಗರ ಕೆ.ಆರ್ ಆಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಬ್ ಮಾಲೀಕನ ವಿರುದ್ಧ ದೂರು ದಾಖಲು ಮಾಡಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಲೈಸನ್ಸ್ ಇಲ್ಲದೆ ಪಬ್ ನಡೆಯುತ್ತಿತ್ತು. ನಗರದಲ್ಲಿ ಅನೇಕ ಪಬ್ ಬಾರ್ ಅಂಡ್ ರೆಸ್ಟೋರೆಂಟ್ಗಳು ಪರವಾನಗಿ ಪಡೆಯದೆ ನಡೆಸುತ್ತಿರುವುದು ಗೊತ್ತಾಗಿದೆ. ಹೀಗಾಗಿ ಅಕ್ರಮವಾಗಿ ಲೈಸನ್ಸ್ ಇಲ್ಲದೆ ಬಾರ್ ರೆಸ್ಟೋರೆಂಟ್ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದೇನೆ ಎಂದರು.
ಎಲ್ಲ ವ್ಯವಹಾರಿಕ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದಾರಾ ಎಂದು ಪರಿಶೀಲನೆ ನಡೆಸಲು ಹೇಳಿದ್ದೇನೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಸಿಎಂ ಗಮನಕ್ಕೆ ತರಲಾಗಿದೆ ಎಂದರು.
ನಿನ್ನೆ ನಡೆದಿದ್ದೇನು?: ಮೈಸೂರಿನ ದಟ್ಟಗಳ್ಳಿ 4ನೇ ಹಂತದಲ್ಲಿರುವ ಫಾಕ್ಸ್ ಜೆನ್ ರೆಸ್ಟೋ ಪಬ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಏಳು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವಘಡದಲ್ಲಿ ಡಾರ್ಜಿಲಿಂಗ್ ಮೂಲದ 26 ವರ್ಷದ ಸಾಹಿನ್ ಹಾಗೂ ನೇಪಾಳ ಮೂಲದ 24 ವರ್ಷದ ಪ್ರಕಾಶ್ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಸೋನು, ರಮೇಶ್, ಮಹದೇವ ಪ್ರಸಾದ್, ಪ್ರಜ್ವಲ್, ಅವಿನಾಶ್ ಹಾಗೂ ಪಬ್ ಮಾಲೀಕ ಪ್ರೀತಂ ಗಾಯಗೊಂಡಿದ್ದಾರೆ. ಇನ್ನು ಬೆಂಕಿ ಕಾಣಿಸಿಕೊಂಡ ವೇಳೆ ಪಬ್ನಲ್ಲಿದ್ದ ಸುಮಾರು 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪಬ್ನ ಒಳಾಂಗಣ ವಿನ್ಯಾಸಕ್ಕಾಗಿ ಬಳಸಲಾಗಿದ್ದ ಒಣ ಹುಲ್ಲು, ಬಿದಿರಿನ ಪೀಠೋಪಕರಣಗಳು ಹಾಗೂ ಮರದ ವಸ್ತುಗಳಿಂದ ಬೆಂಕಿ ವೇಗವಾಗಿ ವ್ಯಾಪಿಸಿದೆ ಎನ್ನಲಾಗಿದೆ.
ಈ ರೆಸ್ಟೋ ಪಬ್ ನಟ ಪ್ರೀತಂ ಅವರ ಮಾಲಿಕತ್ವದಲ್ಲಿದೆ. ‘ಬ್ರಹ್ಮ ವಿಷ್ಣು ಮಹೇಶ್ವರ’ ಚಿತ್ರದ ನಾಯಕನಾಗಿದ್ದ ಪ್ರೀತಂ, ಶ್ರೀರಂಗಪಟ್ಟಣದ ಬಳಿ ರಿವರ್ ರಾಂಚ್ ರೆಸಾರ್ಟ್ ಕೂಡ ನಡೆಸುತ್ತಿದ್ದಾರೆ. ಘಟನೆ ಸಂಭವಿಸಿದ ವೇಳೆ ಪ್ರೀತಂ ಹಾಗೂ ಅವರ ಸ್ನೇಹಿತ ಅವಿನಾಶ್ ಸ್ಥಳದಲ್ಲೇ ಇದ್ದರು. ಅವಿನಾಶ್ ಅವರಿಗೆ ತಲೆಗೆ ಸುಟ್ಟ ಗಾಯಗಳಾಗಿದ್ದು, ಪ್ರೀತಂ ಅವರ ಕೈ ಹಾಗೂ ಮುಖಕ್ಕೆ ಗಾಯಗಳಾಗಿವೆ.
ದಕ್ಷಿಣ ಆಫ್ರಿಕಾದ ಮಾರಾ ಜನಾಂಗದ ಥೀಮ್ ಆಧಾರಿತ ಈ ರೆಸ್ಟೋ ಪಬ್ನಲ್ಲಿ ಸೋಮವಾರ ವಿಶೇಷ ಆಫರ್ ಘೋಷಿಸಲಾಗಿತ್ತು. ಯಾವುದೇ ಆಹಾರ ಪದಾರ್ಥ ಖರೀದಿಸಿದರೂ 175 ರೂಪಾಯಿ ದರ ನಿಗದಿಪಡಿಸಲಾಗಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿದ್ದರು ಎಂದು ತಿಳಿದುಬಂದಿದೆ.
Related









