ಬಾಗಲಕೋಟೆ: ಬೀಳಗಿ ಮೂಲದ ಭಾರತೀಯ ಸೇನಾ ಯೋಧ ನಗರದ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಮತ್ತು ವಿಭಿನ್ನವಾಗಿ ವಿವಾಹವಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಹೊಂದಿರುವ ಭಾರತೀಯ ಸೇಸೆಯ ಸೈನಿಕ ಸಂತೋಷ ಬಾವಿಕಟ್ಟಿ ವಿಶೇಷ ರೀತಿಯಲ್ಲಿ ವಿವಾಹವಾಗಿರುವವರು.
ಗಡಿ ಕಾಯುವ ಜತೆ ಜತೆಗೆ ದೇಶಭಕ್ತಿ, ವಿವಿಧ ವಿಷಯದ ಬಗ್ಗೆ ರೀಲ್ಸ್ ಮಾಡುವ ಮೂಲಕ ಈ ಯೋಧ ಹೆಸರುವಾಸಿ. ಇನ್ನು ಇವರು ತನ್ನ ಮದುವೆಯಲ್ಲಿ ಹುತಾತ್ಮ ಯೋಧರ ಪತ್ನಿಯರಿಗೆ ಹಾಗೂ ಗಾಯಾಳು ಯೋಧರಿಗೆ ಸನ್ಮಾನ ಮಾಡೋ ಮೂಲಕ ವಿಶೇಷವಾಗಿ ಆಚರಿಸಿಕೊಳ್ಳಬೇಕು ಎಂದು ತೀರ್ಮಾನಿಸಿ, ತನ್ನ ಆಸೆಯಂತೆ ಮದುವೆಯಾಗಿದ್ದಾರೆ.
ಪುಲ್ವಾಮ, ಸಿಯಾಚಿನ್ ಹುತಾತ್ಮ ಯೋಧರ ಪತ್ನಿಯರಿಗೆ ತನ್ನ ವಿವಾಹ ಮಹೋತ್ಸವ ಸಂದರ್ಭದಲ್ಲಿ ಸನ್ಮಾನ ಮಾಡಿದ್ದಾರೆ. ಇನ್ನು ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ 8 ವೀರನಾರಿಯರನ್ನು ಸನ್ಮಾನಿಸಿದ್ದು ಒಂದು ವಿಶೇಷವಾಗಿಯೇ ಕಾಣಿಸಿದೆ.
ವರ ಸಂತೋಷ ಬಾವಿಕಟ್ಟಿ ಮಾತನಾಡಿ, ನನ್ನ ವಿವಾಹವನ್ನು ವಿಶೇಷವಾಗಿ ಮಾಡಿಕೊಳ್ಳಬೇಕು ಎಂಬ ಆಸೆ ಇತ್ತು. ಎಲ್ಲ ಮದುವೆಗಳಲ್ಲಿ ವಿಐಪಿಗಳು, ರಾಜಕಾರಣಿಗಳು, ಸಿನಿಮಾ ಸ್ಟಾರ್ಗಳನು ಆಹ್ವಾನ ಮಾಡಿ ಆಡಂಬರ ತೋರಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ.
ಆದರೆ, ಯೋಧರನ್ನು ಕೇವಲ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂದು ಮಾತ್ರ ನೆನಪು ಮಾಡಿಕೊಳ್ಳುತ್ತಾರೆ. ಖುಷಿ ಸಮಯದಲ್ಲಿ ಅವರನ್ನು ನಾವು ಮರೆಯುತ್ತೇವೆ. ಅದಕ್ಕೆ ನನಗೆ ಈ ರೀತಿಯ ಯೋಚನೆ ಬಂದಿತ್ತು. ಹೀಗಾಗಿ ಶುಭ ಸಂದರ್ಭದಲ್ಲಿ ಅವರನ್ನು ನೆನೆಯಬೇಕು ಎನ್ನುವ ಉದ್ದೇಶದಿಂದ ಹಾಗೂ ನಾನು ಕೂಡ ಸೈನಿಕ ಆಗಿರುವುದರಿಂದ ನನ್ನ ಕುಟುಂಬಕ್ಕೆ ಮೊದಲ ಆದ್ಯತೆ ಜತೆಗೆ ಮೊದಲು ಪ್ರೀತಿಸಬೇಕು ಎಂಬುವುದು ನನ್ನಾಸೆಯಾಗಿತ್ತು.
ಹೀಗಾಗಿ ನನ್ನ ಭಾಗದಲ್ಲಿರುವ ವೀರ ಮರಣ ಹೊಂದಿರುವ ಯೋಧರ ಪತ್ನಿಯರನ್ನು ಕರೆಯಿಸಿ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳಬೇಕು ಎಂದು ಸನ್ಮಾನಿಸಲಾಗಿದೆ. ಇದರ ಜತೆಗೆ ನಿವೃತ್ತ ಸೈನಿಕರನ್ನು ಗೌರವಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)