NEWSನಮ್ಮರಾಜ್ಯಲೇಖನಗಳು

ಈ ಅಧಿವೇಶನದಲ್ಲಾದರೂ ಸರ್ಕಾರ ಸಾರಿಗೆ ನೌಕರರ ಕೂಗಿಗೆ ಸ್ಪಂದಿಸಿ ಅವರ ಬೇಡಿಕೆ ಈಡೇರಿಸುವತ್ತ ಮನಸ್ಸು ಮಾಡಬೇಕಿದೆ

ವಿಜಯಪಥ ಸಮಗ್ರ ಸುದ್ದಿ

224 ವಿಧಾನಸಭಾ ಸದಸ್ಯರು, 75 ವಿಧಾನಪರಿಷತ್ ಸದಸ್ಯರು ಒಟ್ಟಾರೆ 299 ಸದಸ್ಯರು ಭಾಗವಹಿಸುವ ಬೃಹತ್ ಅಧಿವೇಶನದಲ್ಲಿ ಸಾರಿಗೆ ನೌಕರರ ಧ್ವನಿ ಮಾರ್ಧನಿಸುವುದೇ?

ಶೇಕಡ 75ರಷ್ಟು ಉತ್ತರ ಕರ್ನಾಟಕದ ಬಡ ಕುಟುಂಬಗಳಿಂದ ಬಂದ ನೌಕರರು/ ಸಿಬ್ಬಂದಿಗಳೇ ನಾಲ್ಕೂ ಸಾರಿಗೆ ಸಂಸ್ಥೆಯಲ್ಲಿ ದುಡಿಯುತ್ತಿರುವುದರಿಂದ ಆ ಭಾಗದ ವಿಧಾನಸಭಾ ಸದಸ್ಯರು, ಮುತ್ಸದ್ದಿ ವಿಧಾನ ಪರಿಷತ್ ಸದಸ್ಯರು ಸಾರಿಗೆ ನೌಕರರ ಕೂಗಿಗೆ ಧ್ವನಿಯಾಗಬೇಕಿದೆ ಇದು ಅವರ ಧರ್ಮಕೂಡ ಹೌದು.

ಹೀಗಾಗಿ ಕಳೆದ 5-6 ದಶಕಗಳಿಂದಲೂ ಸಾರಿಗೆ ನೌಕರರು ಅನುಭವಿಸುತ್ತಿರುವ ಸಮಸ್ಯೆಗೆ ಸಾಧ್ಯವಾದಷ್ಟು ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಕೂಡ ಮನಸ್ಸು ಮಾಡಬೇಕಿದೆ.

ಇದನ್ನು ಇಂದಿನಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ  ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ ಸಾರಿಗೆ ನೌಕರರ ಕೂಗಿಗೆ ಎಲ್ಲ 299 ಶಾಸಕರು ಸ್ಪಂದಿಸುವ ಕೆಲಸ ಮಾಡಬೇಕಿದೆ. ಈ ಮೂಲಕ ನಿತ್ಯ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿರುವ ನೌಕರರ ಕಣ್ಣೀರೋರೆಸುವ ಕೈಗಳಾಗಬೇಕಿದೆ.

ಇದಕ್ಕೆ ಸಂಬಂಧಪಟ್ಟಂತೆ 2025ರ ಆಗಸ್ಟ್‌ನಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಮಳೆಗಾಲದ ಅಧಿವೇಶನದಲ್ಲಿ ರಾಜ್ಯ ಸಾರಿಗೆ ಇಲಾಖೆಯಿಂದ ಕರ್ನಾಟಕ ರಾಜ್ಯ ಅತ್ಯವಶ್ಯಕ ಸೇವೆ ವಿಧೇಯಕವನ್ನು ಮಂಡಿಸುವ ಸಂದರ್ಭದಲ್ಲಿ ರಾಜ್ಯದ ಸಾರಿಗೆ ನೌಕರರ ಮೇಲೆ ಎಸ್ಮಾ ಕಾಯಿದೆಯನ್ನು ಜಾರಿ ಮಾಡುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿ ವಿಧೇಯಕವನ್ನು ಪುನರ್ ಪರಿಶೀಲಿಸುವಂತೆ ಸಾರಿಗೆ ಸಚಿವರಿಗೆ ಶಾಸಕರು ಒತ್ತಾಯಿಸಿದ್ದರು.

ಈ ವೇಳೆ ಎಸ್ಮಾ ಕಾಯ್ದೆ ಹೇರಿ ಸಾರಿಗೆ ನೌಕರರನ್ನು ಬೆದರಿಸುವುದು ಸರಿಯಲ್ಲ. ಗ್ಯಾರಂಟಿ ಬಗ್ಗೆ ಪ್ರಚಾರ ಪಡೆಯುವ ರಾಜ್ಯ ಸರ್ಕಾರ ಸಾರಿಗೆ ನೌಕರರ ಹಿಂಬಾಕಿ, ವೇತನ ಪರಿಷ್ಕರಣೆ ಮಾಡಬೇಕು ಎಂದು ವಿಧಾನ ಪರಿಷತ್‌ನಲ್ಲಿ ಶಾಸಕರಾದ ಎಸ್.ವಿ. ಸಂಕನೂರ್, ಗೋವಿಂದರಾಜು, ಟಿ.ಎ.ಶರವಣ ಆಗ್ರಹಿಸಿದ್ದರು.

ಅಂದು ವಿಧಾನಸಭೆಯ ಮೇಲ್ಮನೆಯಲ್ಲಿ ನಡೆದ ಚರ್ಚೆವೇಳೆ ಬಡ ಸಾರಿಗೆ ನೌಕರರ ಮೇಲೆ ಈ ರೀತಿ ಗದಾಪ್ರಹಾರ ಮಾಡುವುದು ಸರಿಯಲ್ಲ. ಅವರು ಪ್ರತಿಭಟನೆಯನ್ನು ಏಕೆ ಮಾಡುತ್ತಾರೆ? ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಸಿಗದಿದ್ದಾಗ ಮಾಡುತ್ತಾರೆ. ನೀವು ಅವರಿಗೆ ಕೊಡಬೇಕಿರುವುದನ್ನು ಕೊಟ್ಟರೆ ಅವರೇಕೆ ಮುಷ್ಕರಕ್ಕೆ ಮುಂದಾಗುತ್ತಾರೆ ಎಂದು ಸಾರಿಗೆ ಸಚಿವರನ್ನು ಪ್ರಶ್ನಿಸಿದ್ದರು.

ಇನ್ನು ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡಿ ಅವರಿಗೆ ಕೊಡಬೇಕಿರುವುದನ್ನು ಕೊಟ್ಟಿದ್ದೀರಿ. ಆದರೆ ಸಾರಿಗೆ ನೌಕರರಿಗೆ ಕೊಡಬೇಕಿರುವುದನ್ನು ಏಕೆ ಕೊಟ್ಟಿಲ್ಲ? ಅವರು ತಮ್ಮ ಕುಟುಂಬದವರನ್ನು ಬಿಟ್ಟು ದಿನದ 24 ಗಂಟೆಯೂ ಹಗಲಿರುಳೆನ್ನದೇ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದ್ದಾರೆ ಅವರೆಗೆ ಮಾತ್ರ ಈ ತಾರತಮ್ಯತೆ ಏಕೆ ಎಂದು ಅಧಿವೇಶದಲ್ಲಿ ಕೇಳಿದ್ದರು.

ಕರ್ನಾಟಕ ರಾಜ್ಯ ಅತ್ಯವಶ್ಯಕ ಸೇವೆ ಬರಿ ಸಾರಿಗೆ ನಿಗಮಗಳಿಗೆ ಮಾತ್ರನಾ? ಆಸ್ಪತ್ರೆಗಳು, ಪೊಲೀಸ್‌ ಠಾಣೆ, ಜಲಮಂಡಳಿ, ಬೆಸ್ಕಾಂ, ಚೆಸ್ಕಾಂ ಸೇರಿದಂತೆ ಹಲವು ಇಲಾಖೆಗಳು ಬರುತ್ತವೆ. ಆದರೆ, ಬರಿ ಸಾರಿಗೆ ನೌಕರರ ಮೇಲೆ ಅದು ನೀವು ಸಾರಿಗೆ ಸಚಿವರಾಗಿದ್ದುಕೊಂಡು ಈ ರೀತಿ ಪ್ರಯೋಗ ಮಾಡುವುದು ಸರಿಯಲ್ಲ ಇದನ್ನು ಪರಿಶೀಲನೆ ಮಾಡಿ ಎಂದು ಒತ್ತಾಯಿಸಿದ್ದರು.

ಇನ್ನು ಸರ್ಕಾರದ ಖಜಾನೆ ತುಂಬಿ ತುಳುಕುತ್ತಿದೆ ಅಂತ ಹೇಳಿಕೊಂಡು ಬರುವವರಿಗೆ ಸಾರಿಗೆ ನೌಕರರ ಸಮಸ್ಯೆ ಪರಿಹಾರ ಮಾಡೋಕೆ ಏಕೆ ಆಗ್ತಿಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಕಿಡಿಕಾರಿದ್ದರು.

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಮಾಡುತ್ತಿರುವ ಬಗ್ಗೆ 2025ರ ಆಗಸ್ಟ್‌ 4ರಂದು ಮಾತನಾಡಿದ ಅವರು, ಸಾರಿಗೆ ನೌಕರರ ಜತೆ ಸರ್ಕಾರ ಮಾತುಕತೆ ನಡೆಸುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದ್ದು ಇದೆ.

ಹಿಂದೆ ಯಡಿಯೂರಪ್ಪ ಇದ್ದಾಗ ಇದೇ ಸಿದ್ದರಾಮಯ್ಯ ನಮಗೆ ಪ್ರಶ್ನೆ ಮಾಡಿದ್ರು. ಸಾರಿಗೆ ನೌಕರರ ಮೇಲೆ ಎಸ್ಮಾ ಹಾಕಿ ಹೆದರಿಸಿದ್ರು. ನಿನ್ನ ಕುರ್ಚಿ ಎಷ್ಟು ಶಾಶ್ವತ ಎಂದು ತಿಳಿದುಕೊಂಡಿದ್ದೀಯಾ ಅಂತಾ ಪ್ರಶ್ನೆ ಮಾಡಿದ್ದರು. ಈಗ ನಾನು ಸಿದ್ದರಾಮಯ್ಯಗೆ ಪ್ರಶ್ನೆ ಮಾಡ್ತೀನಿ. ನೀವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೀರಾ ಎಂದುಕೊಂಡಿದ್ದೀರಾ ಎಂದು ಅದೇ ಪ್ರಶ್ನೆಯನ್ನು ತಿರುಗಿಸಿದ್ದರು.

ಇನ್ನು ನೀವು ಫ್ರೀ ಅಂತಾ ನೌಕರರಿಗೆ ಸಂಬಳವನ್ನೇ ಕೊಡುತ್ತಿಲ್ಲ. ನೌಕರರನ್ನು ಕರೆದು ಮಾತಾಡಿ ಸಮಸ್ಯೆ ಬಗೆಹರಿಸಬೇಕಿತ್ತು. ನೀವು ಮಾಡಿರುವ ಮೂರ್ಖತನಕ್ಕೆ ಜನರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಖಾಸಗಿ ಬಸ್‌ನವರು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಜನಸಾಮಾನ್ಯರ ಹಣ ವ್ಯರ್ಥ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ತಕ್ಷಣವೇ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲದಕ್ಕೂ ನಮ್ಮ ಮೇಲೆ ಬೆರಳು ತೋರಿಸ್ತಾರೆ. ಅವರು ಮಾಡಿದನ್ನು ನಾವು ತೀರಿಸಿದ್ದೇವೆ ಎನ್ನುತ್ತಾರೆ.

ಹೌದಪ್ಪ ನಾವು ಕೆಟ್ಟದನ್ನು ಮಾಡಿದ್ದೇವೆ. ಜನ ನಮ್ಮನ್ನು ಸೋಲಿಸಿದ್ದಾರೆ. ನಿಮ್ಮನ್ನು ಗೆಲ್ಲಿಸಿದ್ದಾರಲ್ಲ ನೀವು ಅವರಿಗೆ ಒಳ್ಳೆಯದು ಮಾಡಬೇಕಿತ್ತಲ್ಲ. ಖಜಾನೆ ತುಂಬಿ ತುಳುಕುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ರಿ. ಈಗ ಹಣ ಇಲ್ಲ ಅಂತೀರಲ್ಲ. ನುಡಿದಂತೆ ನಡೆದಿದ್ದೇವೆ ಅಂತೀರಲ್ಲ ಇದೇನಾ ನಿಮ್ಮ ಮಾತು ಎಂದು ಛೇಡಿಸಿದ್ದರು.

ಅಲ್ಲದೆ ಈಗ ಗ್ರಾಮೀಣ ಭಾಗದಲ್ಲಿ ತುಂಬಾ ಸಮಸ್ಯೆ ಆಗಿದೆ. ಕೂಡಲೇ ನೌಕರರ ಬೇಡಿಕೆ ಈಡೇರಿಸುವ ಮೂಲಕ ಸಮಸ್ಯೆ ಪರಿಹಾರ ಮಾಡಿ ಎಂದು ಆಗ್ರಹಿಸಿದ್ದರು. ಇದೇ ಕೂಗು ಮತ್ತೆ ಸಾರಿಗೆ ನೌಕರರಿಂದ ಬರುತ್ತಿದೆ. ಹೀಗಾಗಿ ಈಗಲಾದರೂ ಸರ್ಕಾರ ನೌಕರರಿಗೆ ಕೂಗಿಗೆ ಸ್ಪಂದಿಸಿ ಅವರ ಬೇಡಿಕೆಯನ್ನು ಈಡೇರಿಸುವತ್ತ ಮನಸ್ಸು ಮಾಡಬೇಕಿದೆ.

Megha
the authorMegha

Leave a Reply

error: Content is protected !!