ಬೆಂಗಳೂರು: ಹಸಿದವರಿಗೆ ಅನ್ನಹಾಕಬೇಕು ಎಂಬ ಧ್ಯೇಯದೊಂದಿಗೆ ಆರಂಭವಾದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ ಹಳ್ಳಹಿಡಿಯುತ್ತಿದೆ. ಈಗ ಬಿಲ್ ಪಾವತಿಸಿಲ್ಲ ಎಂದು ಜಲಮಂಡಳಿ ನೀರಿನ ಸಂಪರ್ಕ ಕಡಿತಗೊಳಿಸಿದೆ. ಹೀಗಾಗಿ ಕ್ಯಾಂಟೀನ್ನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಅದನ್ನು ಸರಿಪಡಿಸಬೇಕಾದ ಬಿಬಿಎಂಪಿ ನಿದ್ದೆಗೆ ಜಾರಿದೆ. ಇದರಿಂದ ಗ್ರಾಹಕರು ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಬಡವರ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಈ ಕ್ಯಾಂಟೀನ್ನಲ್ಲಿ ಬಡವರು, ಕೂಲಿ ಕಾರ್ಮಿಕರು ಊಟ ಮಾಡಿ ಹಸಿವು ನೀಗಿಸಿಕೊಳ್ಳುತ್ತಿದ್ದರು. ಆದರೆ ಈಗ ಈ ಯೋಜನೆ ನಿರ್ವಹಣೆಯಲ್ಲಿ ಬಿಬಿಎಂಪಿ ಹಿಂದೆ ಬಿದ್ದಿದೆ. ಇದರಿಂದ ಈಗ ಇಂದಿರಾ ಕ್ಯಾಂಟೀನ್ಗಳು ಬಂದ್ ಆಗುವ ಆತಂಕ ಎದುರಾಗಿದೆ.
ಏಕೆಂದರೆ ಮೆಜೆಸ್ಟಿಕ್ನ ಸೇರಿದಂತೆ ನಗರದ ಹಲವು ಇಂದಿರಾ ಕ್ಯಾಂಟೀನ್ಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಜಲಮಂಡಳಿಯವರು ನೀರಿನ ಪೈಪ್ ಲೈನ್ ಕಟ್ ಮಾಡಿದ್ದು ನೀರಿಲ್ಲದೆ ಹೊರಗಡೆಯಿಂದ ಹಣಕೊಟ್ಟು ನೀರು ತಂದು ಕ್ಯಾಂಟೀನ್ಗಳನ್ನು ನಡೆಸುತ್ತಿದ್ದಾರೆ.
ನಗರದ 8 ವಲಯಗಳಲ್ಲಿರುವ ಇಂದಿರಾ ಕ್ಯಾಂಟೀನ್ಗಳಲ್ಲಿ ನೀರಿನ ಬಿಲ್ ಬಾಕಿ ಇದೆ. 40 ಲಕ್ಷಕ್ಕೂ ಹೆಚ್ಚು ನೀರಿನ ಬಿಲ್ ಇದೆ ಎನ್ನಲಾಗಿದೆ. ಈ ಬಗ್ಗೆ ಹಲವು ಬಾರಿ ಬಿಬಿಎಂಪಿ ಗಮನಕ್ಕೆ ತಂದರೂ ಬಿಬಿಎಂಪಿ ಬಿಲ್ ಪಾವತಿಸಿ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ. ಸುಮಾರು ಏಳೆಂಟು ತಿಂಗಳ ಬಿಲ್ಗಳು ಬಾಕಿ ಉಳಿದಿವೆ ಎಂದು ಹೇಳಲಾಗುತ್ತಿದೆ.
ಇಂದಿರಾ ಕ್ಯಾಂಟೀನ್ಗೆ ಬರುವ ಗ್ರಾಹಕರೂ ಕೂಡ ಇಲ್ಲಿ ಉಂಟಾಗಿರುವ ಸಮಸ್ಯೆ ಹೇಳಿಕೊಳ್ಳುತ್ತದ್ದಾಋೆ. ಊಟ ಚೆನ್ನಾಗಿದೆ, ಇಲ್ಲಿ ಮೂರು ಹೊತ್ತು ಊಟ ಮಾಡುತ್ತೇವೆ. ಆದರೆ ನೀರಿನ ಸಮಸ್ಯೆ ಇದ್ದು, ತೆರವುಗೊಳಿಸಿ ಎಂದು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಸೂಕ್ತ ನಿರ್ವಹಣೆ ಇಲ್ಲದೇ ಮುಚ್ಚುವ ಭೀತಿ ಎದುರಾಗಿದ್ದು, ಸರಕಾರ ಹಾಗೂ ಬಿಬಿಎಂಪಿ ನೀರಿನ ಶುಲ್ಕವನ್ನು ಪೂರ್ಣಗೊಳಿಸಿ ಬಡವರ ಹೊಟ್ಟೆ ತುಂಬಿಸುತ್ತಿರುವ ಇಂದಿರಾ ಕ್ಯಾಂಟೀನ್ ಉಳಿಸಿಕೊಳ್ಳುವುದಕ್ಕೆ ಮುಂದಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.