NEWSನಮ್ಮಜಿಲ್ಲೆಬೆಂಗಳೂರು

ನಾಗರಿಕರ ಕ್ರಿಯಾಶೀಲತೆ, ಸ್ವಯಂ ಸೇವಾ ಚಟುವಟಿಕೆ, ಪರ್ಯಾಯ ಶಿಕ್ಷಣದ ಕೇಂದ್ರವೇ ಬೆಂಗಳೂರು: ಉಮಾ ಮಹದೇವನ್ ಅಭಿಮತ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರವು ನಾಗರಿಕರ ಕ್ರಿಯಾಶೀಲತೆ, ಸ್ವಯಂ ಸೇವಾ ಚಟುವಟಿಕೆ ಹಾಗೂ ಪರ್ಯಾಯ ಶಿಕ್ಷಣದ ಕೇಂದ್ರವಾಗಿದೆ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ತಿಳಿಸಿದರು.

ಪಾಲಿಕೆಯ ಹವಾಮಾನ ಕ್ರಿಯಾ ಕೋಶದ ವತಿಯಿಂದ ಐಎಎಸ್ ಅಧಿಕಾರಿಗಳ ಸಂಘದಲ್ಲಿ ಇಂದು ಏರ್ಪಡಿಸಿದ್ದ ಲೇಖನಾ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಸೃಜನಾತ್ಮಕ ಶಕ್ತಿಯನ್ನು ಬಳಸಿಕೊಂಡು ಹವಾಮಾನ ಬದಲಾವಣೆಗೆ ಸಂಬಂಧಿತ ವಿಶ್ಲೇಷಿತ ವಿವರಗಳನ್ನೊಳಗೊಂಡ ಕ್ರಿಯಾ ಯೋಜನೆಯನ್ನು ರಚಿಸುವುದು ಅಗತ್ಯವಿದೆ ಎಂದು ತಿಳಿಸಿದರು.

ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಡಳಿತಗಾರರದ ತುಷಾರ್ ಗಿರಿನಾಥ್ ಮಾತನಾಡಿ, ಬೆಂಗಳೂರು ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ಹವಾಮಾನ ಕ್ರಿಯಾ ಯೋಜನೆಯನ್ನು ಪ್ರಕಟಿಸಲಾಗಿದ್ದು, ಅನೇಕ ಇಲಾಖೆಗಳು ಈ ಕ್ರಮಗಳನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂದು ಹೇಳಿದರು.

ನಾಗರೀಕರೆ ನಗರದ ಶಕ್ತಿಯಾಗಿದ್ದು, ನಾವೆಲ್ಲಾ ಒಟ್ಟಾಗಿ ಸೇರಿ ನಗರದಲ್ಲಿ ಹವಾಮಾನ‌ ಬದಲಾವಣೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದು ತಿಳಿಸಿದರು.

ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ಅಧ್ಯಕ್ಷೆಯಾದ ಪ್ರೀತಿ ಗೆಹ್ಲೋಟ್ ಮಾತನಾಡಿ, ಹವಾಮಾನ ವೈಪರಿತ್ಯ ನಿರ್ವಹಣೆ ಸಂಬಂಧಿಸಿದ ಚಟುವಟಿಕೆಗಳಿಗೆ ಸರ್ಕಾರಿ ಇಲಾಖೆಗಳು, ಹಿರಿಯ ಅಧಿಕಾರಿಗಳ ಜತೆಗೆ ಸರ್ಕಾರೇತರರಿಂದಲೂ ಸಹಕಾರ ಅಗತ್ಯವಿದೆ. ಹವಾಮಾನ‌ ಕ್ರಿಯಾ ಕೋಶದೊಂದಿಗೆ ಜವಾಬ್ದಾರಿ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಹಕಾರಯುತ ವಾತಾವರಣವನ್ನು ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಸರ್ಕಾರದ ಜತೆ ನಾಗರಿಕರು ಕೈ ಜೋಡಿಸಿ ಏಕಮತವಾಗಿ ಕಾರ್ಯನಿರ್ವಹಿಸಿದರೆ, ನಮ್ಮ ಪ್ರಯತ್ನಗಳು ಪರಿಣಾಮಕಾರಿ ಕೊಡುಗೆಗಳನ್ನು ನೀಡಲು ಸಾಧ್ಯವಾಗುತ್ತದೆ. ಒಂದೇ ದೃಷ್ಟಿಕೋನದ ಮೇಲೆ, ಇರುವ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಕಾರ್ಯಗತ ಮಾಡಿದಾಗ ಫಲಿತಾಂಶಗಳು ಹೆಚ್ಚು ಪರಿಣಾಮಕಾರಿ ಆಗಿರುತ್ತವೆಂದು ತಿಳಿಸಿದರು.

ಈ ಕಾರ್ಯಾಗಾರದಲ್ಲಿ 40ಕ್ಕೂ ಹೆಚ್ಚು ಸಲಹೆಗಾರರು ಭಾಗವಹಿಸಿ, ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು. ಈ ವೇಳೆ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಪ್ರಭಾಶ್ ಚಂದ್ರ ರೇ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಯೋಜನೆ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Megha
the authorMegha

Leave a Reply

error: Content is protected !!