Search By Date & Category

CrimeNEWSನಮ್ಮಜಿಲ್ಲೆ

ಒಂದು ರೂ. ಚಿಲ್ಲರೆ ಇಲ್ಲ ಎಂದ ನಿರ್ವಾಹಕಿ: ನ್ಯಾಯಾಲಯದ ಮೆಟ್ಟಿಲೇರಿದ ಪ್ರಯಾಣಿಕ : 3001ರೂ. ದಂಡ ಹಾಕಿದ ಕೋರ್ಟ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಒಂದು ರೂಪಾಯಿ ಸಿಲ್ಲರೆ ಇಲ್ಲ ಎಂದು ಹೇಳಿ ಚಿಲ್ಲರೆ ಕೊಡದ ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆ ಮತ್ತು ನಿರ್ವಾಹಕಿ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ಪ್ರಯಾಣಿಕರಿಗೆ 3 ಸಾವಿರ ರೂಪಾಯಿ ಪರಿಹಾರ ಕೊಡುವಂತೆ ಗ್ರಾಹಕ ನ್ಯಾಯಾಲಯ ಬಿಎಂಟಿಸಿಗೆ ಆದೇಶ ಹೊರಡಿಸಿದೆ.

ಹೌದು! ಲಕ್ಷಾಂತರ, ಕೋಟ್ಯಂತರ ರೂಪಾಯಿ ಮೋಸ ಮಾಡಿದವರ ವಿರುದ್ಧ ನ್ಯಾಯಲಯದ ಮೆಟ್ಟಿಲು ಏರಿ ನ್ಯಾಯಲಯಗಳು ನೀಡಿದ್ದ ತೀರ್ಪನ್ನು ಕೇಳಿದ್ದೇವೆ ಓದಿದ್ದೇವೆ. ಆದರೆ ಇಲ್ಲೊಬ್ಬ ಪ್ರಯಾಣಿಕ 1 ರೂ. ಚಿಲ್ಲರೆ ಕೊಡಲಿಲ್ಲ ಎಂದು ಬಿಎಂಟಿಸಿ ವಿರುದ್ಧ ಗ್ರಾಹಕರ ನ್ಯಾಯಲಯದ ಮೆಟ್ಟಿಲೇರುವ ಮೂಲಕ ಇಲಾಖೆ ಮತ್ತು ಸಿಬ್ಬಂದಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ.

2019ರ ಸೆ.11ರಂದು ವಕೀಲ ರಮೇಶ್ ನಾಯಕ್ ಎಂಬುವವರು ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಶಾಂತಿನಗರದಿಂದ ಮೆಜೆಸ್ಟಿಕ್‍ಗೆ ತೆರಳುತ್ತಿದ್ದರು. ಬಸ್‍ನಲ್ಲಿದ್ದಂತಹ ಲೇಡಿ ಕಂಡಕ್ಟರ್ 29 ರೂ.ಗಳ ಟಿಕೆಟ್ ನೀಡಿದ್ದಾರೆ. ಈ ವೇಳೆ ಪ್ರಯಾಣಿಕ 30 ರೂ. ನೀಡಿದ್ದರು. ಕೆಳಗೆ ಇಳಿಯುವ ಸಂದರ್ಭದಲ್ಲಿ 1 ರೂ. ಚಿಲ್ಲರೆ ಕೇಳಿದಾಗ ಕಂಡಕ್ಟರ್ ಚಿಲ್ಲರೆ ಇಲ್ಲ ಎಂದು ಹೇಳಿ ಉಳಿದ ಒಂದು ರೂ. ನೀಡಿಲ್ಲ.

ಈ ವೇಳೆ ಚಿಲ್ಲರೆ ನೀಡದ ಕಂಡಕ್ಟರ್ ವಿರುದ್ಧ ರಮೇಶ್ ನಾಯಕ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೂಲಕ, ತಮಗೆ 1 ರೂ. ಚಿಲ್ಲರೇ ಕೊಡದ ಬಿಎಂಟಿಸಿ ಕಂಡಕ್ಟರ್‌ನಿಂದ 15,000 ರೂ. ಪರಿಹಾರ ಕೊಡಿಸುವಂತೆ ಮನವಿ ಮಾಡಿದರು.

ಈ ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ನ್ಯಾಯಾಲಯ ಅರ್ಜಿದಾರರಿಗೆ 1 ರೂ. ಮರುಪಾವತಿಸುವಂತೆ, ಅಲ್ಲದೇ ಸೇವಾ ನ್ಯೂನ್ಯತೆಗಾಗಿ 2 ಸಾವಿರ ರೂ. ಪರಿಹಾರ, ಅಲ್ಲದೇ ದಾವೆಯ ವೆಚ್ಚಕ್ಕಾಗಿ 1 ಸಾವಿರ ರೂ.ಗಳನ್ನು 45 ದಿನಗಳ ಒಳಗಾಗಿ ಪಾವತಿಸುವಂತೆ ನಿಗಮಕ್ಕೆ ನಿರ್ದೇಶನ ನೀಡಿದೆ.

ನಾವು ಸ್ವಂತ ಹಣ ತರುವಂತಿಲ್ಲ: ಆದರೆ, ಪ್ರಮುಖವಾಗಿ ಬಸ್‌ನಲ್ಲಿ ಡ್ಯೂಟಿ ಮಾಡುವ ನಿರ್ವಾಹಕರು ಯಾರು ಕೂಡ ತಮ್ಮ ಸ್ವಂತ ಹಣವನ್ನು ಇಟ್ಟುಕೊಳ್ಳಬಾರದು ಎಂಬ ನಿಯಮವಿದೆ. ಒಂದು ವೇಳೆ ಹಣ ಇದ್ದರೆ ಆ ಹಣದ ಬಗ್ಗೆ ಸಂಸ್ಥೆಯ ಡಿಎಂ, ಎಟಿಎಸ್‌ ಅವರಿಂದ ಸಹಿ ಪಡೆದುಕೊಳ್ಳಬೇಕು.

ಇದರಿಂದ ಎಷ್ಟೋ ಜನ ನಿರ್ವಾಹಕರು ಹಣವನ್ನೇ ತರದೆ ಬರಿಗೈಯಲ್ಲಿ ಬರುತ್ತಾರೆ. ಇನ್ನು ಬಸ್‌ ಘಟಕದಿಂದ ಹೊರಟ ಕೂಡಲೇ ನಿರ್ವಾಹಕರ ಬಳಿ ಯಾವುದೆ ಹಣ ಇರುವುದಿಲ್ಲ ಹೀಗಾಗಿ ಮೊದಲನೆಯ ಟ್ರಿಪ್‌ನಲ್ಲಿ ಚಿಲ್ಲರೆ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕು ಎಂದು ಹೆಸರೇಳಲಿಚ್ಚಿಸದ ನಿರ್ವಾಹಕರೊಬ್ಬರು ವಿಜಯಪಥಕ್ಕೆ ತಿಳಿಸಿದ್ದಾರೆ.

ನಿಜವಾಗಲು ಅವರ ಬಳಿ ಚಿಲ್ಲರೆ ಇದ್ದರು ಕೊಡದಿದ್ದರೆ ಅದು ನಿರ್ವಾಹಕರ ತಪ್ಪಾಗಲಿದೆ. ಆದರೆ, ಚಿಲ್ಲರೆ ಇದ್ದುಕೊಂಡು ಪ್ರಯಾಣಿಕರು ಕೊಡದಿದ್ದರೆ ಆ ಬಗ್ಗೆ ಯಾರಿಗೆ ನಾವು ಹೇಳಿಕೊಳ್ಳೋದು ಎಂದು ನಿರ್ವಾಹಕರು ಸಮಸ್ಯೆಯನ್ನು ತೋಡಿಕೊಂಡಿದ್ದಾರೆ.

Leave a Reply

error: Content is protected !!