ಹೊಸಕೋಟೆ: ದಲಿತ ಬಾಲಕಿ ಕೊಲೆಯಾಯೊಬ್ಬಳ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದ್ದು, ಆಕೆಯಿಂದ ಅವಮಾನವಾಯಿತು ಎಂದು ಸವರ್ಣಿಯ ಯುವಕ ಆ ಬಾಲಕಿಯನ್ನು ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯ ಮೃತದೇಹ ಸಿಕ್ಕಿದೆ. ಬಾಲಕಿ 20 ದಿನಗಳ ಹಿಂದೆ ಶಾಲೆಗೆ ಹೋಗುತ್ತಿದ್ದಾಗ ನಿತಿನ್ ಎಂಬಾತ ಚುಡಾಯಿಸಿದ್ದನು. ಅದನ್ನು ಪ್ರಶ್ನಿಸಿದ್ದಕ್ಕೆ ನಿತಿನ್ ಬಾಲಕಿ ಮೇಲೆ ಹಲ್ಲೆ ನಡೆಸಿದ್ದ.
ಇನ್ನು ಈ ವಿಚಾರವನ್ನು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಳು. ಬಳಿಕ ಪಾಲಕರು ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಎರಡು ಗ್ರಾಮದ ಹಿರಿಯರು ಸೇರಿ ಇಬ್ಬರ ನಡುವೆ ರಾಜಿ ಪಂಚಾಯಿತಿ ಮಾಡಿ ಕಳುಹಿಸಿದ್ದರು.
ರಾಜಿ ಪಂಚಾಯತಿ ಮಾಡಿದ ಮೂರು ದಿನಗಳ ಬಳಿಕ ಬಾಲಕಿ ನಾಪತ್ತೆಯಾಗಿದ್ದಳು. ನಿನ್ನೆ ಕುರಿಹಾಗಿಗಳು ಕುರಿ ಕಾಯಲು ಹೋಗಿದ್ದಾಗ ಬಾಲಕಿಯ ಶವಕಂಡು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇತ್ತ ವಿಷಯ ತಿಳಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈಟ್ ಫಿಲ್ಡ್ನ ವೈದೇಹಿ ಆಸ್ವತ್ರೆಗೆ ರವಾನಿಸಿದರು.
ಅವಮಾನಕ್ಕೆ ಬಾಲಕಿಯ ಕೊಲೆ: ದಲಿತ ಬಾಲಕಿಯಿಂದ ಅವಮಾನವಾಯಿತು ಎಂದು ಸವರ್ಣಿಯ ಯುವಕ ನಿತಿನ್ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಕೊಲೆ ನಂತರ ಆರೋಪಿ ಗ್ರಾಮದಲ್ಲೇ ಓಡಾಡಿಕೊಂಡಿದ್ದನು. ಕೊಲೆ ವಿಚಾರ ಬಯಲಿಗೆ ಬರುತ್ತಿದ್ದಂತೆ ನಿತಿನ್ ಕತ್ತುಕೊಯ್ದುಕೊಂಡಿದ್ದಾನೆ.
ಕೊಲೆ ಮಾಡಿ ಕತ್ತು ಕೊಯ್ದುಕೊಂಡು ಡ್ರಾಮ ಮಾಡುತ್ತಿದ್ದಾನೆ ಎಂದು ಮೃತ ಬಾಲಕಿ ಕುಟುಂಬಸ್ಥರು ಆರೋಪಿಸಿದ್ದು, ಆರೋಪಿ ವಿರುದ್ಧ ಪೊಲೀಸರು ನಾವು ದೂರು ನೀಡಲು ಹೋಗಿದ್ದಾಗಲೇ ಕ್ರಮ ಕೈಗೊಂಡಿದ್ದರೆ ನಮ್ಮ ಮಗಳು ಶವವಾಗಿ ಸಿಗುತ್ತಿರಲಿಲ್ಲ ಎಂದು. ಪೊಲೀಸರ ಬೇಜವಾಬ್ದಾರಿ ಕಾರಣ ಬಾಲಕಿ ಕೊಲೆಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರಕರಣ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)