
ಬೆಂಗಳೂರು: ಏಳು ಬಾರಿ ಸಂಸದನಾಗಿ ಆಯ್ಕೆ ಯಾದ ಕೀರ್ತಿ ನನ್ನದಾಗಿದ್ದರೂ ಕೂಡ ನಮ್ಮವರಿಂದಾನೆ ನನಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಾಯಿತು, ಇಲ್ಲವಾಗಿದ್ದರೆ ನಾನು ಬಾಬು ಜಗಜೀವನ್ ರಾಂ ಅವರ ಸಾಲಿಗೆ ಸೇರುತ್ತಿದ್ದೆ ಎಂದು ಆಹಾರ ಸಚಿವ ಕೆ.ಎಹಚ್. ಮುನಿಯಪ್ಪ ತಮಗಾದ ನೋವು ತೋಡಿಕೊಂಡಿದ್ದಾರೆ..
ವಿಧಾನಸೌಧದಲ್ಲಿ ಆಯೋಜಿಸಿದ್ದ ಹಸಿರುಕ್ರಾಂತಿ ಹರಿಕಾರ, ರಾಷ್ಟ್ರ ನಾಯಕ, ಮಾಜಿ ಉಪ ಪ್ರಧಾನಿ ಸಮರ್ಥ ಸಂಸದೀಯ ಪಟು, ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿರಿಯ ದಲಿತ ಚೇತನ ಡಾ. ಬಾಬು ಜಗಜೀವನ್ ರಾಮ್ ಅವರ 118ನೇ ಜನ್ಮ ದಿನೋತ್ಸವದಲ್ಲಿ ಮಾತನಾಡಿದರು.
ಡಾ. ಬಾಬು ಜಗಜೀವನ್ ರಾಮ್ ಭಾರತದ ಪುಟವಿಟ್ಟ ಬಂಗಾರ ಎಂದು ಅವರನ್ನು ಮಹಾತ್ಮಗಾಂಧೀಜಿ ಸಂಭೋದಿಸಿದ್ದರು. ಜಗಜೀವನ್ ರಾಮ್ ಬಿಹಾರದ ಚಾಂದ್ವಾದ ದಲಿತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಬ್ರಿಟಿಷ್ ಸೈನ್ಯದಲ್ಲಿದ್ದರು ಎಂದು ಹೇಳಿದರು.
ಶಾಲಾ ಶಿಕ್ಷಣವನ್ನು ಅರ್ರಾ ಪಟ್ಟಣದಲ್ಲಿ ಕಲಿತರು, ಅಲ್ಲಿ ಅವರು ಮೊದಲ ಬಾರಿಗೆ ತಾರತಮ್ಯವನ್ನು ಎದುರಿಸಿದರು. ಅವರನ್ನು “ಅಸ್ಪೃಶ್ಯ” ಎಂದು ಪರಿಗಣಿಸಲಾಯಿತು ಮತ್ತು ಬೇರೆ ಮಡಕೆಯಿಂದ ನೀರು ಕುಡಿಯಬೇಕಾಯಿತು. ಜಗಜೀವನ್ ರಾಮ್ ಇದನ್ನು ವಿರೋಧಿಸಿ ಮಡಕೆಯನ್ನು ಒಡೆದರು ಎಂದು ತಿಳಿಸಿದರು.
ಇನ್ನು ಬಾಬೂಜಿಯವರು ವಿದ್ಯಾರ್ಥಿಯಾಗಿದ್ದಾಗಲೇ ತಮ್ಮನ್ನು ತಾವು ಹಲವಾರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದರು. ಹರಿಜನರ ಮಕ್ಕಳನ್ನು ಶಾಲೆಗೆ ಸೇರಿಸುವುದು, ಅವರ ಪುಸ್ತಕ ಬಟ್ಟೆ ಕೊಳ್ಳಲು ಮತ್ತು ಫೀಸು ಕಟ್ಟಲು ಕೈಲಾದ ಧನ ಸಹಾಯ ಮಾಡುವುದು ಮತ್ತು ದಲಿತರನ್ನು ಜೀತ ವಿಮುಕ್ತರಾಗಿ ಮಾಡುವುದು.
ಅವರು ರಾಜಕೀಯ ರಂಗ ಪ್ರವೇಶಿಸಿದ ಮೇಲೆ ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಭಾಗವಹಿಸುವುದರ ಜತೆಗೆ ಹರಿಜನ ಸೇವ ಸಂಘ, ರವಿದಾಸ್ ಮಹಾಸಭಾ, ಡಿಪ್ರೆಸ್ಡ್ ಕ್ಲಾಸ್ ಲೀಗ್ ಮುಂತಾದ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದರು ಹಾಗೂ ಭಾರತದಾದ್ಯಂತ ಸಂಚಾರ ಮಾಡಿ ಹರಿಜನರ ಸಂಘಟನೆ ಮಾಡಿದರು ಎಂದು ಸ್ಮರಿಸಿದರು.
ಇನ್ನು “ಕೃಷಿ ಕಾರ್ಮಿಕರ ಕನಿಷ್ಠ ವೇತನ, ಉಳುವವನಿಗೆ ಭೂಮಿ, ಮದ್ಯಪಾನ ನಿಷೇಧ ಮತ್ತು ಅಸ್ಪೃಶ್ಯತಾ ನಿವಾರಣೆ” ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಹೋರಾಟ ಮಾಡಿದರು. 1935ರಲ್ಲಿ, ಅವರು ಹಿಂದೂ ಮಹಾಸಭಾದ ಅಧಿವೇಶನದಲ್ಲಿ ಕುಡಿಯುವ ನೀರಿನ ಬಾವಿಗಳು ಮತ್ತು ದೇವಾಲಯಗಳು ಅಸ್ಪೃಶ್ಯರಿಗೆ ಮುಕ್ತವಾಗಿರಬೇಕು ಎಂದು ಪ್ರಸ್ತಾಪಿಸಿದರು.
ಬಾಬೂಜಿಯವರು ಇತರ ರಂಗಗಳಲ್ಲಿ ಸೇವೆ ಸಲ್ಲಿಸಿರುವಂತೆ “ಭಾರತ ಸಂವಿಧಾನ ರಚನೆ ಸಂಬಂಧವಾಗಿಯೂ ಅಷ್ಟೇ ಸಮರ್ಥವಾಗಿ ಸೇವೆ ಸಲ್ಲಿಸಿ, ಸಂವಿಧಾನ ಶಿಲ್ಪಿಗಳಲ್ಲಿ ಒಬ್ಬರಾಗಿದ್ದರು, ಸಂವಿಧಾನ ರಚನಾ ಸಮಿತಿಗಳಲ್ಲಿ ಬಾಬೂಜಿಯವರು ಕೆಲಸ ನಿರ್ವಹಿಸಿದ್ದಾರೆ.
ಜಗಜೀವನ್ ರಾಮ್ 1936 ರಿಂದ 1986 ರವರೆಗೆ ನಿರಂತರವಾಗಿ ಸಂಸತ್ತಿನ ಸದಸ್ಯರಾಗಿದ್ದರು ಮತ್ತು ಇದು ವಿಶ್ವ ದಾಖಲೆಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಕಾಲ (30 ವರ್ಷಗಳು) ಕ್ಯಾಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮತ್ತೊಂದು ದಾಖಲೆಯನ್ನೂ ಅವರು ಹೊಂದಿದ್ದಾರೆ.
ಬಾಬೂಜಿ ಕಾರ್ಮಿಕ ಮಂತ್ರಿಯಾಗಿದ್ದಾಗ ಕನಿಷ್ಠ ಕೂಲಿ ಮತ್ತು ಗೊತ್ತುವಳಿ ಕಾಯ್ದೆಯನ್ನು ಜಾರಿಗೆ ಕೊಟ್ಟರು ಮತ್ತು ಕಾರ್ಮಿಕ ಭವಿಷ್ಯನಿಧಿ, ಇ.ಎಸ್.ಐ. ಆಸ್ಪತ್ರೆ ಸೌಲಭ್ಯ, ಕಾರ್ಮಿಕರ ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಧನಸಹಾಯ ಮುಂತಾದ ಅನುಕೂಲಗಳನ್ನು ಕಲ್ಪಿಸಿದರು.
ಬಾಬೂಜಿ ಅವರು ಆಹಾರ ಮತ್ತು ಕೃಷಿ ಮಂತ್ರಿಯಾಗಿದ್ದಾಗ ದೇಶದಲ್ಲಿ ಆಹಾರ ಕೊರತೆಯನ್ನು ಮನಗಂಡು ವ್ಯವಸಾಯ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ತಂದರು. ಕಡಿಮೆ ಬೆಲೆ ಮತ್ತು ಉಚಿತವಾಗಿ ಹೆಚ್ಚು ಇಳುವರಿ ತರುವಂಥ ಬೀಜದ ಕಾಳುಗಳು, ರಸಗೊಬ್ಬರ, ಕೀಟನಾಶಕಗಳು ಮತ್ತು ಆಧುನಿಕ ಉಪಕರಣಗಳನ್ನು ರೈತರಿಗೆ ವಿತರಿಸಿ, ರಾಷ್ಟ್ರದ ಆಹಾರ ಉತ್ಪತ್ತಿಯಲ್ಲಿ ಮುನ್ನಡೆ ಕಾಣುವಂತೆ ಮಾಡಿದ್ದರಿಂದ ಬಾಬೂಜಿಯವರನ್ನು “ಹಸಿರು ಕ್ರಾಂತಿಯ ಹರಿಕಾರ” ನೆಂದು ರಾಷ್ಟ್ರದ ಮಹಾಜನತೆ ಗೌರವದಿಂದ ಕರೆಯಿತು.
ಬಾಬೂಜಿ ರಕ್ಷಣಾ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಸೈನ್ಯದಲ್ಲಿ ಜಾತಿ ಮತ್ತು ಪ್ರಾದೇಶಿಕ ಪ್ರಜ್ಞೆ ಮಾಯವಾಗಿ, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಭಾವನೆ ಬೆಳೆಯುವಂತಾಯಿತು. ದೇಶದ ಬಡವರ ಹಸಿವು ನೀಗಿಸುವ ಉದ್ದೇಶದಿಂದ FCI (Food Corporation of India) ಸ್ಥಾಪಿಸಿ ದೇಶದ ಅಸಂಖ್ಯಾತ ಹಸಿದವರಿಗೆ “ಅನ್ನದಾತ” ಆದರು.
1935 ನೇ ಇಸವಿಯಲ್ಲಿ “ಬ್ರಿಟನ್” ನಿಂದ ಬಂದಿದ್ದ “HAMMOND’S COMMISSION” ಮುಂದೆ ಹಾಜರಾಗಿ 1936 – 1937 ರ ಸಾರ್ವತ್ರಿಕ ಚುನಾವಣೆಯಲ್ಲಿ “ದಲಿತರಿಗೂ ಮತದಾನದ ಹಕ್ಕು” ಕೊಡಿ ಎಂದು ಪ್ರತಿಪಾದಿಸಿದರು. ಮುಂದೆ ದಲಿತರಿಗೆ ಮತದಾನದ ಹಕ್ಕು ಲಭಿಸಿತು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಒಬ್ಬ ಸಮಾಜ ಸುಧಾಕರಾಗಿ, ಸಮ ಸಮಾಜ ನಿರ್ಮಾಣ ಮಾಡಬೇಕೆನ್ನುವ ಅವರ ಹೋರಾಟ ಹಾಗೂ ಸಂವಿಧಾನದಲ್ಲಿ ನೀಡಿದ ಚಿಂತನೆಗಳನ್ನು ಡಾ. ಬಾಬು ಜೀವನರಾಮ್ ಅವರು ಅವರ ಅಧಿಕಾರ ಅವಧಿಯಲ್ಲಿ ಜಾರಿಗೆ ತರಲು ಅಹರ್ನಹಿಸಿ ಶ್ರಮಿಸಿದರು. ಈ ಎರಡು ಚೇತನಗಳು ದಲಿತ ಸಮುದಾಯದ ಎರಡು ಕಣ್ಣುಗಳು ಇದ್ದಹಾಗೇ, ಇವರ ಚಿಂತನೆ, ಹೋರಾಟದ ಫಲವಾಗಿ, ತಳ ಸಮುದಾಯಗಳು ತಲೆ ಎತ್ತಿ ನಿಲ್ಲುವಂತಾಗಿ ಸಮಾಜದಲ್ಲಿ ಸಂವಿಧಾನತ್ಮಕ ಗೌರವ ಸ್ಥಾನ ಮಾನಗಳು ಲಭಿಸುವಂತಾಗಿದೆ.
ಡಾ. ಬಾಬು ಜಗಜೀವನರಾಮ್ ರವರು ವಿದ್ವತ್, ತಳ ಸಮುದಾಯಗಳ ಬಗ್ಗೆ ಇದ್ದ ಅವರ ಕಾಳಜಿ ಹಾಗೂ ಆಡಳಿತದ ದಕ್ಷತೆಯನ್ನು ಕಂಡು ಮಹಾತ್ಮ ಗಾಂಧಿಜಿಯವರು ಡಾ. ಬಾಬು ಜಗಜೀವನರಾಮ್ ಅವರನ್ನು “ಭಾರತದ ಪುಟವಿಟ್ಟ ಬಂಗಾರ” ಎಂದು ಸಂಭೋದಿಸಿದರು.
ಬಾಬೂಜಿಯವರ ಆಶಯದಂತೆ ಕರ್ನಾಟಕ ಸರ್ಕಾರದ ದೀನದಲಿತರ ಬಡವರ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ಮೀಸಲಾತಿ ವಿಷಯದಲ್ಲಿಯೂ ಯಾವುದೇ ತಡ ವಿಲ್ಲದೆ ಮುಂದಿನ 30ರಿಂದ 40 ದಿನಗಳ ಹೊಳಗಾಗಿ ಒಳ ಮೀಸಲಾತಿ ಅನುಷ್ಠಾನವಾಗಲಿದೆ ಎಂದು ಹೇಳಿದರು.
ನಮ್ಮ ಸೋದರ ಸಚಿವರಾದ ಪರಮೇಶ್ವರ್, ಮಹದೇವಪ್ಪ, ಶಿವರಾಜ್ ತಂಗಡಗಿ, ಪ್ರಿಯಾಂಕ್ ಖರ್ಗೆ ಎಲ್ಲ ಸಚಿವರು ಒಗ್ಗಟ್ಟಾಗಿದ್ದು ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಅನುಷ್ಠಾನಗೊಳಿಸಲು ಬದ್ದರಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಉಪ ಮುಖ್ಯ ಮುಖ್ಯಮಂತ್ರಿ ಡಿಕೆ.ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಪರಮೇಶ್ವರ್, ಮಹದೇವಪ್ಪ, ಶಾಸಕ ಬಸವಂತಪ್ಪ, ಮುಖ್ಯ ಕಾರ್ಯದರ್ಶಿ ಶಾಲನಿ ರಜನೀಶ್,ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್, ಆಯುಕ್ತರಾದ ರಾಕೇಶ್ ಕುಮಾರ್ ಉಪಸ್ಥಿತರಿದ್ದರು.
