NEWSಕೃಷಿನಮ್ಮರಾಜ್ಯ

ಭಾರತ -ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ರೈತರ ಪ್ರತಿಭಟನೆ- ಕರಡು ಪ್ರತಿ ಸುಟ್ಟು ಆಕ್ರೋಶ

ವಿಜಯಪಥ ಸಮಗ್ರ ಸುದ್ದಿ

ಮೈಸೂರು/ಬನ್ನೂರು: ಸಂಯುಕ್ತ ಕಿಸಾನ್ ಮೋರ್ಚಾ NP ರಾಷ್ಟ್ರೀಯ ಕರೆ ಮೇರೆಗೆ ರೈತರು ತೋಳಿಗೆ ಕಪ್ಪುಪಟ್ಟಿ ಧರಿಸಿ ಭಾರತ-ಅಮೆರಿಕ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ವಿರೋಧಿಸಿದ ರೈತರು ಕರಡು ಪ್ರತಿ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮೈಸೂರಿನ ಕುವೆಂಪು ಪಾರ್ಕ್‌ನಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರಕ್ಕೆ ಧಿಕ್ಕಾರ, ದೇಶದ ರೈತರ ಮರಣ ಶಾಸನ ಬರೆದಿರುವ ಒಪ್ಪಂದಕ್ಕೆ ಧಿಕ್ಕಾರ ಎಂದು ಕೂಗುತ್ತ ಆಕ್ರೋಹೊರಹಾಕಿದರು.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್, ಕೇಂದ್ರ ಸರ್ಕಾರ ಇತ್ತೀಚೆಗೆ ಅಮೆರಿಕ ಜತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ಭಾರತ ದೇಶದ ರೈತರ ಮರಣ ಶಾಸನ ಬರೆದಿದ್ದಾರೆ. ಕೃಷಿ ಉತ್ಪನ್ನಗಳು ಹೈನುಗಾರಿಕೆ ಉತ್ಪನ್ನಗಳು ಅಮೆರಿಕದಿಂದ ಭಾರತದ ದೇಶಕ್ಕೆ ಆಮದಾಗಲು ಯಾವುದೇ ಸುಂಕವಿಲ್ಲದೆ ವಿನಾಯಿತಿ ನೀಡಿರುವುದು ದೇಶದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಂತಾಗಿ ಉತ್ಪನ್ನಗಳಿಗೆ ಬೆಲೆ ಇಲ್ಲದಂತಾಗುತ್ತದೆ ಎಂದು ಕಿಡಿಕಾರಿದರು.

ಅಲ್ಲದೆ ಈ ಒಪ್ಪಂದಿಂದ ರೈತರು ಸಾಲಗಾರರಾಗುತ್ತಾರೆ, ಇದರಿಂದ ರೈತರ ಆತ್ಮಹತ್ಯೆಗಳು ಹೆಚ್ಚುತ್ತವೆ ಎಂದು ತಿಳಿಸಿದ ಅವರು, ಅಮೆರಿಕ ದೇಶದ ರೈತರು ದೊಡ್ಡ ದೊಡ್ಡ ರೈತರು ಇವರಿಗೆ ಶೇ.200ರಷ್ಟು ಸಹಾಯಧನ ದೊರೆಯುತ್ತದೆ. ಭಾರತ ದೇಶದ ರೈತರು ಸಣ್ಣ ಸಣ್ಣ ರೈತರು ಕೇವಲ ಶೇ.3 ನಷ್ಟು ಸಹಾಯಧನ ಸಿಗುತ್ತದೆ. ಇಂಥ ಸಂದರ್ಭದಲ್ಲಿ ಪೈಪೋಟಿ ನಡೆಸಿ ಕೃಷಿಕರು ಬೆಳೆದ ಬೆಳೆ ಮಾರಲು ಕಷ್ಟವಾಗುತ್ತದೆ ಬೀದಿಗೆ ಸುರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಅದೇ ರೀತಿ ದೇಶದ ಎಲ್ಲ ವರ್ಗದ ವ್ಯಾಪಾರಸ್ಥರು ಹಾಗೂ ಜನರ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಬ್ರಿಟಿಷರು ವ್ಯಾಪಾರ ಮಾಡಲು ಭಾರತಕ್ಕೆ ಬಂದು ದೇಶವನ್ನು ಆಕ್ರಮಿಸಿಕೊಂಡು ಆಳಿದರು. ಆದರೆ ಈಗ ನಮ್ಮ ಪ್ರತಿನಿಧಿಗಳೇ ಅಮೆರಿಕ ದೇಶಕ್ಕೆ ದಾಸರಾಗಿ ರೈತರನ್ನು ಮಾರಾಟ ಮಾಡಲು ಹೊರಟಿದ್ದಾರೆ. ಇದು ದುರ್ದೈವದ ಸಂಗತಿ. ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಒಪ್ಪಂದದಿಂದ ಹೊರಗೆ ಬರಬೇಕು ಇಲ್ಲದಿದ್ದರೆ ದೇಶದ ರೈತರ ತೀವ್ರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ಅಲ್ಲದೆ ಸಂಸದರು ಕೇಂದ್ರ ಮಂತ್ರಿಗಳಿಗೆ ಘೇರಾವ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಭಾರತ- ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ರೈತರ ಧಿಕ್ಕಾರ. ರೈತರ ಮರಣ ಶಾಸನ ಬರೆದಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ. ಅಮೆರಿಕ ದೇಶದ ಕೃಷಿ ಉತ್ಪನ್ನಗಳಿಗೆ ಆಮದು ಸುಂಕ ವಿನಾಯಿತಿ ದೇಶದ ರೈತರ ಸರ್ವನಾಶ ತಪ್ಪಿಸಲಿ ಎಂದು ಘೋಷಣೆ ಕೂಗಿದರು. ತೋಳಿಗೆ ಕಪ್ಪು ಪಟ್ಟಿ ಧರಿಸಿ ಒಪ್ಪಂದ ಪತ್ರ ಸುಡುವ ಚಳುವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ತಾಲೂಕ ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಜಿಲ್ಲಾ ಸಂಘಟನೆ ಕಾರ್ಯದರ್ಶಿ ವರಕೂಡು ನಾಗೇಶ್, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ದೊಡ್ಡಕಾಟೂರು ಮಹದೇವಸ್ವಾಮಿ, ಕಾಟೂರು ಶಿವಣ್ಣ, ವಾಜಮಂಗಳ ಮಹಾದೇವು, ಗಿರೀಶ್, ಮಹೇಶ್, ಪಿ.ನಾಗೇಂದ್ರ, ಪ್ರಭಾಕರ್, ಶಿವಣ್ಣ, ಚಿಕ್ಕಳ್ಳಿ ನಾಗರಾಜು, ಪಾಳ್ಯಸ್ವಾಮಿ, ಚಿನ್ನನಾಯಕ, ಕಮಲಮ್ಮ ಸೇರಿದಂತೆ 50 ಕ್ಕೂ ಹೆಚ್ಚು ರೈತರು ಇದ್ದರು.

ಬನ್ನೂರಿನಲ್ಲೂ ಪ್ರತಿಭಟನೆ: ರಾಜ್ಯ ಕಬ್ಬು ಬೆಳೆಗಾರರ ಸಂಘದ ಬನ್ನೂರು ಗ್ರಾಮಾಂತರ ಘಟಕದ ವತಿಯಿಂದ ಸಂತೇಮಾಳದ ಬಸವೇಶ್ವರ ವೃತ್ತದಲ್ಲಿ, ಕೇಂದ್ರ ಸರ್ಕಾರದ ಭಾರತ- ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ ಒಪ್ಪಂದ ಪತ್ರ ಸುಡಲಾಯಿತು.

ಬನ್ನೂರು ಗ್ರಾಮಾಂತರ ಘಟಕದ ಮುಖಂಡರಾದ ಆತ್ತಹಳ್ಳಿ ಅರುಣ್ ಕುಮಾರ್, ಹೆಗ್ಗೂರು ರಂಗರಾಜು, ಬನ್ನೂರು ಸೂರಿ, ಚೇತನ್, ರಾಮ, ನಟರಾಜ್, ಕೃಷ, ಬನ್ನೂರು ರವಿ, ವೈ.ನಟೇಶ್ ಇನ್ನು ಮುಂತಾದವರು ಇದ್ದರು.

Megha
the authorMegha

Leave a Reply

error: Content is protected !!