NEWS

ಫೆ.26, 27ರಂದು ಬೀಡನಹಳ್ಳಿ ಶ್ರೀನಂದಿ ಬಸವೇಶ್ವರಸ್ವಾಮಿ 11ನೇ ಬಂಡಿ – ಕೊಂಡೋತ್ಸವ

ವಿಜಯಪಥ ಸಮಗ್ರ ಸುದ್ದಿ

ವಿಶೇಷ ವರದಿ
ಬನ್ನೂರು: ಬೀಡನಹಳ್ಳಿಯ ಶ್ರೀ ನಂದಿ ಬಸವೇಶ್ವರ ಸ್ವಾಮಿಯ 11ನೇ ಬಂಡಿ ಮತ್ತು ಕೊಂಡೋತ್ಸವ ಇದೇ ಫೆ. 26 ಮತ್ತು ಫೆ.27ರಂದು ನಡೆಯಲಿದೆ.

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ, ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮದಲ್ಲಿ ಫೆ.26 ರಂದು ಬಂಡಿ ಮಹೋತ್ಸವ ನಡೆಯಲಿದ್ದು, ಮೊಳ್ಳೆ ಕೆಂಪಣ್ಣನವರ ಕುಟುಂಬ ಮತ್ತು ದೊಡ್ಡನಿಂಗಯ್ಯನವರ ಕುಟುಂಬದವರು ಬಂಡಿಗೆ ತಮ್ಮ ಜೋಡೆತ್ತುಗಳನ್ನು ಮೊದಲು ಕಟ್ಟಿ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ ಬಂಡಿ ಉತ್ಸವಕ್ಕೆ ಚಾಲನೆ ನೀಡುವರು. ನಂತರ ಇತರರು ಬಂಡಿ ಓಡಿಸಬಹುದು. ಇನ್ನು ಫೆ.27ರಂದು ಮುಂಜಾನೆ 630ರೊಳಗೆ ಕೊಂಡೋತ್ಸವ ನೆರವೇರಲಿದೆ.

ಈಗಾಗಲೇ ಬೀಡನಹಳ್ಳಿ ಗ್ರಾಮಸ್ಥರು ಕೊಂಡೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಫೆ.26ರಂದು ಕೊಂಡೋತ್ಸವಕ್ಕೆ ಚನ್ನೇಗೌಡನವರ ಕುಟುಂಬ ಕೊಂಡ ತೆಗೆಯಲಿದ್ದು, ಶಂಭೇಗೌಡರ ಕುಟುಂಬದವರು ಸೌದೆ (ಕಟ್ಟಿಗೆ) ತರಲಿದ್ದಾರೆ. ಭಾನುವಾರ ರಾತ್ರಿ 10 ಗಂಟೆ ನಂತರ ಮಂಗಳವಾದ್ಯಗಳೊಂದಿಗೆ ನಂದಿ ಬಸವೇಶ್ವರ ಸ್ವಾಮಿಯ ಬಸವನೊಂದಿಗೆ ಗ್ರಾಮದ ಮುಖಂಡರು ಮೆರವಣಿಗೆ ಮೂಲಕ ಅರ್ಚಕ ಪುಟ್ಟಮಾದಪ್ಪ ಅವರ ಮನೆಗೆ ತೆರಳಿ ಇಲ್ಲಿಂದ ಬೆಂಕಿ ತಂದು ಕೊಂಡಕ್ಕೆ ಸ್ಪರ್ಶ ಮಾಡುವರು.

ಬಳಿಕ ರಂಗಬೆಟ್ಟಯ್ಯನವರ ಕುಟುಂಬದವರು ಕೊಂಡವನ್ನು ಹದ ಮಾಡುವರು. ಗುಳ್ಳಯ್ಯನ ನಿಂಗಪ್ಪ, ಬೆಟ್ಟೇಗೌಡರ ಕುಟುಂಬದವರು ಕೊಂಗ ಹೊಡೆಯುವರು ( ಕೆಂಡಕ್ಕೆ ಗಾಳಿ ಬೀಸುವುದು). ಮುಂಜಾನೆ 6.30 ಗಂಟೆಯೊಳಗೆ ಕಾಶಿ ವೇಷಧಾರಿ ದೇವಸ್ಥಾನದ ಅರ್ಚಕ ಮಹದೇವಸ್ವಾಮಿ ಕೊಂಡ ಹಾಯುವರು. ನಂತರ ಶ್ರೀ ಸ್ವಾಮಿಯ ಗುಡ್ಡಪ್ಪನವರಾದ ನಂಜುಂಡೇಗೌಡರು ಮತ್ತು ರಾಜೇಶ ಅವರು ಕೊಂಡ ಹಾಯಲಿದ್ದಾರೆ. ಕೊಂಡೋತ್ಸವ ಆದ ಒಂದು ವಾರದ ಬಳಿಕ ಬೆಟ್ಟೇಗೌಡನ ಮನೆಯವರು ಕೊಂಡ ಮುಚ್ಚುವರು.

ಅರ್ಚಕರು ಕೊಂಡ ಹಾಯುವ ಮುನ್ನ ದೇಸ್ಥಾನದ ಬಾಗಿಲಿಗೆ ಕೆಂಡ ಎರಚಿ ಸಾವಿರಾರು ಭಕ್ತರ ನಡುವೆ ವೇದಘೋಷಗಳು ಮೊಳಗುತ್ತವೆ. ಭಾನುವಾರ ರಾತ್ರಿ ಪೂರ ವಿವಿಧ ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮಗಳನ್ನು ಗ್ರಾಮದ ಜಾನಪದ ಕಲಾವಿದರೊಂದಿಗೆ ಇತರರು ನಡೆಸಿಕೊಡಲಿದ್ದಾರೆ.

ಗ್ರಾಮಸ್ಥರ ನಿತ್ಯ ಆರಾಧ್ಯ ದೈವ: ನಂಬಿದ ಭಕ್ತರು ಬೇಡುವ ವರವನ್ನು ದಯಪಾಲಿಸುವ ಮೂಲಕ ಲಕ್ಷಾಂತರ ಭಕ್ತರ ನಂಬಿಕೆಯ ದೈವವಾಗಿರುವ ಬೀಡನಹಳ್ಳಿ ಗ್ರಾಮದ ಶ್ರೀ ನಂದಿ ಬಸವೇಶ್ವರ ಸ್ವಾಮಿ ಸುತ್ತಮುತ್ತಲ ಗ್ರಾಮಸ್ಥರ ನಿತ್ಯ ಆರಾಧ್ಯ ದೈವ.

ಕಾವೇರಿ ನದಿ ದಂಡೆಯ ಸ್ವಚ್ಛ ಪರಿಸರಹೊಂದಿರುವ ಗ್ರಾಮದಲ್ಲಿ ಶತಶತಮಾನಗಳಷ್ಟು ಹಳೆಯದಾದ ಶ್ರೀಸ್ವಾಮಿಯ ದೇವಾಲಯದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಹಲವು ಸಮಸ್ಯೆಗಳಿಗೆ ಸಿಲುಕಿರುವ ಭಕ್ತರ ನೋವು ನೀಗಿಸುವ ತಾಲೂಕಿನ ಏಕೈಕ ದೈವ ಶ್ರೀಸ್ವಾಮಿ ಎಂಬುವುದು ಭಕ್ತರ ನಂಬಿಕೆ. ದೇವಾಲಯಕ್ಕೆ ಬೆಂಗಳೂರು, ಮೈಸೂರು, ಹಾಸನ, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರು ಹರಕೆ ಮಾಡಿಕೊಂಡು ಕಷ್ಟ ಪರಿಹಾರವಾದ ಬಳಿಕ ಹರಕೆ ತೀರಿಸುತ್ತಾರೆ.

 ಹಸಿವು ನೀಗಿಸುವ ಅನ್ನದಾತನೀತ: ಅಂದಹಾಗೆ ಹಣ ಒಡವೆ ಹೀಗೆ ಬೆಲೆಬಾಳುವ ವಸ್ತುಗಳನ್ನು ದೇವಾಲಯಕ್ಕೆ ಭಕ್ತರು ಹರಕೆ ರೂಪದಲ್ಲಿ ನೀಡಬೇಕಿಲ್ಲ. ಶ್ರೀಸ್ವಾಮಿಗೆ ಆರ್ಥಿಕ ಶಕ್ತಿಗೆ ಅನುಸಾರವಾಗಿ ಹರಕೆ ಮಾಡಿಕೊಂಡು ದೊಡ್ಡಪರ ಇಲ್ಲವೇ ಚಿಕ್ಕಪರವನ್ನು (ಚಿಕ್ಕಪರ ಎಂದರೆ ಶಿವರಾತ್ರಿ ಬಳಿಕ ಸೋಮವಾರ ಮತ್ತು ಶುಕ್ರವಾರಗಳಲ್ಲಿ ರಾತ್ರಿ ವೇಳೆ 8 ರಿಂದ 10ಸಾವಿರ ಭಕ್ತರಿಗೆ ಅನ್ನದಾಸೋಹ ಮಾಡುವುದು. ದೊಡ್ಡ ಪರ ಸೋಮವಾರ ಇಲ್ಲ ಶುಕ್ರವಾರದಂದು ಬೆಳಗ್ಗೆ 8ರಿಂದ ರಾತ್ರಿ 7 ಗಂಟೆ ವರೆಗೆ ಅನ್ನದಾಸೋಹವನ್ನು ದೇಗುಲದ ಆವರಣದಲ್ಲಿ ನೆರವೇರಿಸುವುದು). ಮಾಡಬೇಕು. ಇದಲ್ಲದೆ ಪ್ರತಿ ಸೋಮವಾರ ಮತ್ತು ಶುಕ್ರವಾರ ಸೇರಿದಂತೆ ಇತರ ಬಹುತೇಕ ಎಲ್ಲ ವಾರಗಳಲ್ಲೂ ಮೊಸರನ್ನ ಮತ್ತು ಪುಳಿಯೋಗರೆ ಮಾಡಿಸಿ ನೂರಾರು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.

ಬಂಜೆತನ ನಿವಾರಣೆ: ವೈಜ್ಞಾನಿಕವಾಗಿ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಚಿಕಿತ್ಸೆಗೆ ಒಳಪಟ್ಟರೂ ಮಕ್ಕಳಾಗದೇ ಬಂಜೆತನದಿಂದ ಬಳಲಿ ಜೀವನದಲ್ಲಿ ನಿರಾಸೆಗೊಂಡು, ಮಾನಸಿಕವಾಗಿ ಕುಗ್ಗಿರುವ ಅನೇಕ ಮಂದಿ ಶ್ರೀಸ್ವಾಮಿ ಸನ್ನಿಧಿಗೆ ಬಂದು ಮಕ್ಕಳ ವರ ಕೇಳಿ ಹರಕೆ ಮಾಡಿಕೊಂಡು ಹೋಗುತ್ತಾರೆ. ಇಷ್ಟೇ ಅಲ್ಲದೇ ದೆವ್ವ, ಭೂತ, ಪೀಡೆ, ಪಿಶಾಚಿಗಳಿಂದ ಬಳಲುವವರು ಶ್ರೀಸ್ವಾಮಿ ಸನ್ನಿಧಿಗೆ ಬರುತ್ತಾರೆ. ಇಲ್ಲಿಗೆ ಬರುವ ನೂರಾರು ಭಕ್ತರ ಕಾಯಿಲೆ ವಾಸಿಯಾಗಿದೆ. ಅಷ್ಟರ ಮಟ್ಟಿಗೆ ಈ ಸ್ಥಳದ ಮಹಿಮೆ ಇದೆ ಎಂದು ಭಕ್ತರು ಹೇಳುತ್ತಿದ್ದಾರೆ.

ಗ್ರಾಮಕ್ಕೆ ಹಂದಿಗಳ ಪ್ರವೇಶವಿಲ್ಲ: ಶ್ರೀ ನಂದಿ ಬಸವೇಶ್ವರ ಸ್ವಾಮಿ ಬೀಡನಹಳ್ಳಿ ಗ್ರಾಮ ಸೇರಿ ಸುತ್ತ ಮುತ್ತಲ ಹತ್ತಾರು ಗ್ರಾಮಗಳ ಆರಾಧ್ಯ ದೈವ. ಇಲ್ಲಿ ಪ್ರಮುಖವಾದ ಒಂದು ಪ್ರತೀತಿ ಇದೆ. ಅದೆಂದರೆ ಗ್ರಾಮಕ್ಕೆ ಹಂದಿಗಳ ಪ್ರವೇಶವಿಲ್ಲ. ಒಂದು ವೇಳೆ ಬಂದರೆ ಅವು ದೇವಸ್ಥಾನದ ಹಿಂಭಾಗವಾಗಲಿ ಅಥವಾ ಮುಂಭಾಗವಾಗಲಿ ಹೋದರೆ ಗ್ರಾಮದ ಎಲ್ಲೆಯಿಂದ ಹೊರಹೋಗುತ್ತಿದ್ದಂತೆ ಸತ್ತು ಹೋಗುತ್ತವೆ ಎಂಬ ನಂಬಿಕೆ ಈಗಲು ಇದೆ. ಆದ್ದರಿಂದಲೇ ಇಂದಿಗೂ ಕೂಡ ಗ್ರಾಮಕ್ಕೆ ಹಂದಿಗಳ ಪ್ರವೇಶವಿಲ್ಲ. ಅಲ್ಲದೇ ಗ್ರಾಮದ ನಿವಾಸಿಗಳು ಹಂದಿ ಮಾಂಸ ತಿಂದರೆ ಮುಖ, ಕೈ-ಕಾಲು ಊದಿಕೊಳ್ಳುವ ಜತೆಗೆ ವಿಚಿತ್ರ ರೋಗಕ್ಕೆ ತುತ್ತಾಗಿ ನರಳಿ ನರಳಿ ಸಾಯುತ್ತಾರೆ ಎಂದು ಗ್ರಾಮದ ಹಿರಿಯರು ವಿವರಿಸುತ್ತಾರೆ.

ದೀಪಾವಳಿಯಲ್ಲಿ ಮಾಂಸಾಹಾರ ನಿಷೇಧ: ಬೀಡನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದ ಮೊದಲ ಕಾರ್ತಿಕ ದೀಪವನ್ನು ಶ್ರೀನಂದಿ ಬಸವೇಶ್ವರ ದೇವಾಲಯದಲ್ಲಿ ಹಚ್ಚುವ ಮುನ್ನ ಮಾಂಸ ಆಹಾರವನ್ನು ಮನೆಗಳಲ್ಲಿ ಮಾಡಬಹುದು. ಶ್ರೀಸ್ವಾಮಿ ಸನ್ನಿಧಿಯಲ್ಲಿ ದೀಪ ಹಚ್ಚಿದ ನಂತರ ಕಡೆಯ ಕಾರ್ತಿಕ ಸೋಮವಾರದವರೆಗೆ ಅಂದರೆ ಒಂದು ತಿಂಗಳ ಕಾಲ ಮಾಂಸ ಆಹಾರವನ್ನು ಮನೆಯಲ್ಲಿ ಯಾರು ಮಾಡುವುದಿಲ್ಲ. ಈಗಲೂ ಇದು ಮುಂದುವರಿದುಕೊಂಡು ಬರುತ್ತಿದೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...