ಬೆಂಗಳೂರು: ಗಂಡನನ್ನು ಬಿಟ್ಟು ಬಾಳು ಕಟ್ಟಿಕೊಂಡಿದ್ದ ಮಹಿಳೆಗೆ ಕಾರು ಚಾಲಕನೊಬ್ಬ ಬಾಳು ಕೊಡುತ್ತೀನಿ ಎಂದು ನಂಬಿಸಿ ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆಸಿದ್ದು, ಈ ಸಂಬಂಧ ಮಹಿಳೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದಿದ್ದಾಳೆ.
ಕ್ಯಾಬ್ ಚಾಲಕ ಪ್ರಜ್ವಲ್ ಎಂಬಾತನೆ ಕೃತ್ಯ ಎಸಗಿ ಈಗ ಬಿಟ್ಟುಹೋದವನು. ಈ ವಿವಾಹಿತ ಮಹಿಳೆಗೆ ಬಾಳು ಕೊಡ್ತೀನಿ ಎಂದು ನಂಬಿಸಿ ಆತ ಈಕೆ ಜತೆ ಕೆಲ ದಿನಗಳು ಒಟ್ಟಿಗೆ ಕಳೆದು, ಆಕೆಯನ್ನು ಬಳಸಿಕೊಂಡು ಬಳಿಕ ಬೋರಾಗುತ್ತಿದ್ದಾಳೆ ಎಂದು ಈಗ ಬಿಟ್ಟು ಹೋಗಿದ್ದಾನೆ.
ಪರಿಚಯ ಹೇಗಾಯಿತು?: ನೊಂದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಾಕುತ್ತಿದ್ದಳು. ಇದನ್ನು ಕಂಡ ಕ್ಯಾಬ್ ಚಾಲಕ ಪ್ರಜ್ವಲ್ ಆ ರೀಲ್ಸ್ಗಳಿಗೆ ಲೈಕ್, ಕಮೆಂಟ್ ಮಾಡುತ್ತಿದ್ದ. ಮಹಿಳೆ ಕೂಡ ಆ ಕಮೆಂಟ್ಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಳು. ಹೀಗೆ ಇವರಿಬ್ಬರ ನಡುವೆ ಪರಿಚಯ ಬೆಳೆದು ಇಬ್ಬರೂ ಹತ್ತಿರವಾದರು.
ಇನ್ನು ಮೆಸೇಜ್ ಮಾಡ್ತಾ, ಮಾಡ್ತಾ ಪ್ರಜ್ವಲ್ ಮನೆವರೆಗೂ ಬಂದಿದ್ದ. ನಿನ್ನನ್ನೇ ಮದುವೆ ಆಗ್ತೀನೆಂದು ನಂಬಿಸಿ ಒಟ್ಟಿಗೆ ವಾಸವಾಗಿದ್ದ. ಆದರೆ ಈಗ ಬೋರಾದಳು ಎಂದು ಮೋಸ ಮಾಡಿ ಬಿಟ್ಟು ಹೋಗಿದ್ದಾನೆ. ಹೀಗಾಗಿ ಅವನೇ ಬೇಕು ಎಂದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಗಂಡ ಕುಡಿದು ಬಂದು ಕಿರುಕುಳ ನೀಡುತ್ತಿದ್ದ: ಇನ್ನು 13 ವರ್ಷದ ಹಿಂದೆ ವ್ಯಕ್ತಿಯೊಬ್ಬನನ್ನ ವಿವಾಹವಾಗಿದ್ದ ಮಹಿಳೆ. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ, ಗಂಡ ಕುಡಿದು ಬಂದು ಪ್ರತಿದಿನ ಕಿರುಕುಳ ಕೊಡ್ತಿದ್ದಾನೆಂದು ಬಿಟ್ಟು ತವರು ಮನೆಗೆ ಬಂದಿದ್ದಳು. ಬಳಿಕ ಇತ್ತೀಚೆಗೆ ಒಂದು ವರ್ಷದಿಂದ ಪ್ರತ್ಯೇಕವಾಗಿ ಬೆಂಗಳೂರಲ್ಲಿ ವಾಸವಾಗಿದ್ದಾಳೆ. ಇನ್ನು ಸ್ನೇಹಿತರ ಜತೆಗೆ ರೂಂನಲ್ಲಿ ವಾಸ್ತವ್ಯ ಹೂಡಿದ್ದು, ಬೇಜಾರು ಕಳಿಯಲು ಆಗಾಗ ರೀಲ್ಸ್ ಮಾಡುತ್ತಿದ್ದಳು.
ಆಕೆಯ ರೀಲ್ಸ್ ಗೆ ‘ಬ್ಯೂಟಿಫುಲ್’ ಎಂದು ಪ್ರಜ್ವಲ್ ಕಮೆಂಟ್ ಹಾಕಿದ್ದ. ಅದೇ ಕಮೆಂಟ್, ಮೆಸೇಜ್ ವರೆಗೂ ಬಂದಿತ್ತು. ನಂತರ ಫೋನ್ ನಂಬರ್ ಎಕ್ಸ್ ಚೇಂಜ್ ಆಗಿ ಚಾಟಿಂಗ್ ಶುರು ಮಾಡಿದ್ರು. ಇಬ್ಬರು ಪರಸ್ಪರ ವೈಯಕ್ತಿಕ ವಿಚಾರ ಶೇರ್ ಮಾಡಿಕೊಳ್ಳುತ್ತಿದ್ದರು. ತನ್ನ ಜೀವನದ ಕಥೆಯನ್ನೆಲ್ಲ ಮಹಿಳೆ ಹೇಳಿಕೊಂಡಿದ್ದಳು.
ನನಗೆ 13 ಹಾಗೂ 10 ವರ್ಷದ ಮಕ್ಕಳಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಳು. ಹೀಗಿದ್ದರೂ ಮದುವೆ ಆಗೋದಾಗಿ ಪ್ರಜ್ವಲ್ ನಂಬಿಕೆಯ ಮಾತುಗಳನ್ನಾಡಿದ್ದ. ಹೊಸ ಜೀವನ ಕಟ್ಟಿಕೊಳ್ಳೋಣ ಎಂದು ಹೇಳಿದ್ದ. ಅಷ್ಟರಲ್ಲಾಗಲೇ ಮಹಿಳೆ ಉಳಿದುಕೊಂಡಿದ್ದ ಮನೆಯಲ್ಲಿ ಸ್ನೇಹಿತರು ಮನೆ ಖಾಲಿ ಮಾಡಿದ್ದರು.
ಕೆಂಗೇರಿ ಸಮೀಪದ ಮನೆಯಲ್ಲಿ ವಾಸವಿದ್ದ ಮಹಿಳೆಯ ಜತೆಗೆ ಅದೇ ಮನೆಯಲ್ಲಿ ಪ್ರಜ್ವಲ್ ಉಳಿದುಕೊಂಡಿದ್ದ. ಮಗನನ್ನು ಹಾಸ್ಟೆಲ್ನಲ್ಲಿ ಸೇರಿಸಿದ್ದರೆ ಮಗಳನ್ನು ತನ್ನ ತಾಯಿ ಮನೆಯಲ್ಲಿ ಬಿಟ್ಟು ಇವರಿಬ್ಬರು ಒಟ್ಟಿಗೆ ಇದ್ದರು. ಕಳೆದ ಕೆಲ ದಿನಗಳಿಂದ ಮನೆಗೆ ಬರದೇ ಪ್ರಜ್ವಲ್ ಕಥೆ ಕಟ್ಟುತ್ತಿದ್ದ, ವಿಚಾರಿಸಿದಾಗ ಮದುವೆ ಆಗಲ್ಲ ಎಂದು ಹೇಳಿದ್ದ. ಇದರಿಂದ ನೊಂದ ಮಹಿಳೆ ಸದ್ಯಕ್ಕೆ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಬೇಡುತ್ತಿದ್ದಾಳೆ.