ಕೆ.ಆರ್.ಪೇಟೆ: ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ- ವಿಜೇತ ಮೂವರಿಗೆ ಬೈಕ್ ನಗದು ಬಹುಮಾನ

- 50 ಜೋಡಿ ಹಳ್ಳಿಕಾರ್ ಎತ್ತು- ಹೋರಿಗಳು ಸ್ಪರ್ಧೆಯಲ್ಲಿ ಭಾಗಿ
ಕೆ.ಆರ್.ಪೇಟೆ: ಗ್ರಾಮೀಣ ಭಾಗದ ಕ್ರೀಡೆಗಳು ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಅಘಲಯ ಗ್ರಾಮದ ಯುವ ಮುಖಂಡ ಅಜಯ್ ರಾಮೇಗೌಡ ಬಳಗ ಗ್ರಾಮದಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಸ್ಪರ್ಧೆ ಏರ್ಪಡಿಸಿರುವುದು ಸಂತೋಷದ ವಿಚಾರವಾಗಿದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.
ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ಶ್ರೀ ಹೊನ್ನಾಲದಮ್ಮದೇವಿ ಹಾಗೂ ಶ್ರೀ ಕಾಲಭೈರವೇಶ್ವರ ಸ್ವಾಮಿಯ ಆಶೀರ್ವಾದದಿಂದ ಇದೇ ಪ್ರಥಮ ಬಾರಿಗೆ ಅಜಯ್ ರಾಮೇಗೌಡ, ಹಳ್ಳಿಕಾರ್ ಸಂರಕ್ಷಕ ಸಂದೀಪ್ ಅವರ ನೇತೃತ್ವದಲ್ಲಿ ನಡೆದ ಮೊದಲ ವರ್ಷದ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ತಾಲೂಕಿನ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಅಘಲಯ ಗ್ರಾಮದ ಹಿರಿಯರ ಸಹಕಾರದಿಂದ ನಮ್ಮ ಪಕ್ಷದ ಕ್ರಿಯಾಶೀಲ ಯುವ ಮುಖಂಡರಾದ ಅಜಯ್ ರಾಮೇಗೌಡರ ಯುವ ಬಳಗದ ಸಾರಥ್ಯದಲ್ಲಿ ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.
ಎತ್ತಿನ ಗಾಡಿ ಓಟವು ನಮ್ಮ ನೆಲದ ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ತಾತ, ಮುತ್ತಾತರ ಕಾಲದಿಂದಲೂ ಹಳ್ಳಿಕಾರ್ ತಳಿಯ ಉತ್ತಮ ರಾಸುಗಳನ್ನು ರೈತರು ಪ್ರೀತಿಯಿಂದ ಸಾಕುತ್ತಿದ್ದಾರೆ. ನಿಜವಾದ ಪ್ರಾಣಿ ಪ್ರಿಯರಿಗೆ ಇಂತಹ ಸ್ಪರ್ಧೆಗಳು ಪ್ರೇರಣೆ ಹಾಗೂ ಸ್ಫೂರ್ತಿಯನ್ನು ನೀಡುತ್ತವೆ.
ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಸೋಲು-ಗೆಲುವು ಎರಡನ್ನೂ ಸಮನಾಗಿ ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಬೇಕು. ಸ್ಪರ್ಧೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮೀಣ ಕ್ರೀಡೆಗಳ ಬಗ್ಗೆ ಇಂದಿನ ಯುವಕರು ಹೆಚ್ಚಿನ ಆಸಕ್ತಿ ತೋರಿಸಿ, ದನ ಕರುಗಳನ್ನು ಪ್ರೀತಿಸಬೇಕು ಎಂದು ಶಾಸಕ ಮಂಜು ತಿಳಿಸಿದರು.
ಕಾರ್ಯಕ್ರಮ ಕುರಿತು ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, TAPCMS ಮಾಜಿ ಅಧ್ಯಕ್ಷ ಎ.ಎಸ್. ಶ್ರೀಧರ್, PLD ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್ ಮಾತನಾಡಿದರು. ಹೋಯ್, ಹೋಯ್ ಎಂದು ಕೂಗುತ್ತ, ಎತ್ತುಗಳ ಮೈ ತಟ್ಟುತ್ತ ಚುರುಕು ಮುಟ್ಟಿಸುತ್ತಿದ್ದರು. ನಾಗಾಲೋಟದಲ್ಲಿ ಓಡುತ್ತಿದ್ದ ಎತ್ತುಗಳು. ಇನ್ನು ಕೆಲವು ಸ್ಪರ್ಧಿಗಳು ಎತ್ತುಗಳಿಗೆ ಕಟ್ಟಿರುವ ಹಗ್ಗದ ಸನ್ನೆಯ ಮೂಲಕವೇ ಗೆಲುವಿನ ದಡ ಸೇರುತ್ತಿದ್ದರು. ನೆರೆದ ಪ್ರೇಕ್ಷ ಕರು ಶಿಳ್ಳೆ, ಚಪ್ಪಾಳೆಗಳ ಮೂಲಕ ಹುರಿದುಂಬಿಸಿದರು.

ಸ್ಪರ್ಧೆಗಾಗಿ ರಾಜ್ಯದ ವಿವಿಧ ಭಾಗಗಳಿಂದ ಹಳ್ಳಿಕಾರ್, ಗಿಡ್ಡಗಾಡು ಹೋರಿ ಸೇರಿದಂತೆ ವಿವಿಧ ಹಳ್ಳಿಕಾರ್ ಜಾತಿಯ 50ಕ್ಕೂ ಹೆಚ್ಚು ಜೋಡಿ ಎತ್ತುಗಳು ಸ್ಪರ್ಧಯಲ್ಲಿ ಭಾಗವಹಿಸಿ ಗೆಲುವಿಗಾಗಿ ಸೆಣಸಾಡಿದರು. ಜೋಡಿ ಎತ್ತುಗಳ ಗಾಡಿ ಓಡಿಸುವ ಸವಾರರು ಗೆಲುವಿಗಾಗಿ ಹರಸಾಹಸಪಟ್ಟರು.
ಸ್ಪರ್ಧೆಯಲ್ಲಿ ವಿಜೇತರಾದ ಜೋಡಿ ಎತ್ತುಗಳ ಮಾಲೀಕರಿಗೆ ಪ್ರಥಮ ಬಹುಮಾನ ಒಂದು ಹೀರೋ ದ್ವಿಚಕ್ರ ವಾಹನ ಜೊತೆಗೆ ₹30.000, ದ್ವಿತೀಯ ಬಹುಮಾನ ಒಂದು ಹೀರೋ ದ್ವಿಚಕ್ರ ವಾಹನ ಜೊತೆ 20ಸಾವಿರ ರೂ.ನಗದು ತೃತೀಯ ಬಹುಮಾನ 10ಸಾವಿರ ರೂ ನಗದು ಮತ್ತು ಹೀರೋ ದ್ವಿಚಕ್ರ ವಾಹನ, 4ನೇ ಬಹುಮಾನ 30ಸಾವಿರ ರೂ. ನಗದು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಾರ್ಥಿಗಳಿಗೆ ಸಮಾಧಾನಕರ ಬಹುಮಾನವಾಗಿ ಸುಂದರವಾದ ಟ್ರೋಫಿಯನ್ನು ನೀಡಲಾಗುವುದು ಎಂದು ಆಯೋಜಕರಾದ ನಂದೀಶ್ ತಿಳಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಘಲಯ ರಮೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎ.ಎಸ್.ಶ್ರೀಧರ್, ಮುಖಂಡರಾದ ನಾಗೇಂದ್ರ, ರಾಜೇಗೌಡ, ರಾಜೇಶ್, ವೆಂಕಟೇಶ್, ಮುನಿರಾಜು, ನವೀನ್, ನಿಂಗರಾಜು, ನಿಶ್ಚಿತ, ವೆಂಕಟೇಶ್, ಯೋಗಣ್ಣ, ರಾಮಣ್ಣ, ಗಣೇಶ, ಬಲರಾಮ್, ಸತೀಶ್, ಸ್ಪರ್ಧೆಯ ಆಯೋಜಕರಾದ ಅಜಯ್ ರಾಮೇಗೌಡ, ನಂದೀಶ್, ಸಂದೀಪ್, ವಿಷ್ಣುಗೌಡ, ಹರ್ಷ ಸಚಿನ್ ಗ್ರಾಮಸ್ಥರು ಉಪಸ್ಥಿತರಿದ್ದರು.
Related
