NEWSನಮ್ಮಜಿಲ್ಲೆನಮ್ಮರಾಜ್ಯ

KKRTC ನೌಕರನ ಪುತ್ರನ IFS ಸಾಧನೆ: ₹1 ಲಕ್ಷ ಪ್ರೋತ್ಸಾಹ ಧನ-ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಭಾರತ ಸರ್ಕಾರದ ಕೇಂದ್ರ ಲೋಕಸೇವಾ ಆಯೋಗದ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಪರೀಕ್ಷೆಯಲ್ಲಿ 41ನೇ ರ‍್ಯಾಂಕ್ ಪಡೆದು ಭಾರತದ ಅರಣ್ಯ ಸೇವೆಗೆ ಆಯ್ಕೆಯಾಗಿರುವ ಲಿಂಗಸುಗೂರು ಘಟಕದ ಚಾಲಕ ಕಂ ನಿರ್ವಾಹಕ ಬಸಪ್ಪ ಅವರ ಪುತ್ರ ಆನಂದಕುಮಾರ ಅವರಿಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಒಂದು ಲಕ್ಷ ರೂ. ಪ್ರೋತ್ಸಾಹ ಧನದೊಂದಿಗೆ ಅಭಿನಂದನಾ ಪತ್ರ ನೀಡಿ ಇಂದು ಸನ್ಮಾನಿಸಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿ ಕಲಬುರಗಿಯಲ್ಲಿ ಆನಂದಕುಮಾರ ಅವರನ್ನು ಸನ್ಮಾನಿಸಿ ಮಾತನಾಡಿದ ಸಚಿವರು, ನಮ್ಮ ಸಾರಿಗೆ ಸಿಬ್ಬಂದಿಗಳ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್, ವಿದೇಶದಲ್ಲಿ ವ್ಯಾಸಂಗ ‌ಮಾಡುತ್ತಿದ್ದಾರೆ. ನೌಕರರ ಮಕ್ಕಳಿಗಾಗಿ ಸಾರಿಗೆ ವಿದ್ಯಾ ಚೇತನ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು ಐದರಿಂದ ಹತ್ತು ಪಟ್ಟು ಹೆಚ್ಚಳ ಮಾಡಿ‌ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.

ಇನ್ನು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ಸು ಸಾಧಿಸುವಂತಾಗಲಿ ಎಂದ ಸಚಿವರು, ಆನಂದ ಕುಮಾರ ಅವರು ಭಾರತೀಯ ಆಡಳಿತ ಸೇವೆ(IAS) ಅಥವಾ ಭಾರತೀಯ ವಿದೇಶಾಂಗ ಸೇವೆ ( IFS)ಗೆ ತಯಾರಿ ನಡೆಸಲು ಸಲಹೆ ನೀಡಿದರು. ಜತೆಗೆ ನಿಮ್ಮ ಈ ಸಾಧನೆಯಿಂದ ದೇಶಕ್ಕಾಗಿ ಒಳ್ಳೆಯ ಕೆಲಸವನ್ನು ಮಾಡಿ ರಾಜ್ಯಕ್ಕೆ ಇನ್ನಷ್ಟು ಕೀರ್ತಿ ತನ್ನಿ ಎಂದು ಆಶಿಸಿದರು.

ಇನ್ನು ರಾಯಚೂರು ವಿಭಾಗದ ಲಿಂಗಸುಗೂರು ಘಟಕದ ಚಾಲಕ ಕಂ ನಿರ್ವಾಹಕ ಬಸಪ್ಪ ಮತ್ತು ತಾಯಿ ನಾಗರತ್ನ ಅವರ ಪುತ್ರ ಆನಂದಕುಮಾರ ಅವರು ಐಎಫ್ಎಸ್ ಪರೀಕ್ಷೆಯಲ್ಲಿ 41ನೇ ರ‍್ಯಾಂಕ್ ಪಡೆದು ಭಾರತದ ಅರಣ್ಯ ಸೇವೆಗೆ ಆಯ್ಕೆಯಾಗಿರುವುದು ನಮ್ಮ ಸಂಸ್ಥೆಗೂ ಹೆಮ್ಮೆಯ ವಿಷಯ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಹೇಳಿದರು.

ಆನಂದ ಕುಮಾರ ಅವರು ಪದವಿಯನ್ನು ಬಿ.ಎಸ್ಸಿ (ಅಗ್ರಿ) – ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿ, ಯು.ಪಿ.ಎಸ್.ಸಿ – ಐ.ಎಫ್.ಎಸ್. ನಲ್ಲಿ 41 ನೇ ರ‍್ಯಾಂಕ್ ನೊಂದಿಗೆ ತಮ್ಮ 3ನೇ ಪ್ರಯತ್ನದಲ್ಲಿ ಯಶಸ್ಸು ಪಡೆದಿದ್ದಾರೆ. ಅವರ ಐಎಫ್‌ಎಸ್‌ನ ಈ ಸಾಧನೆಯು ಕುಟುಂಬಕ್ಕೂ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೂ ಕೀರ್ತಿ ತಂದಿದೆ ಎಂದು ರಾಯಚೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚಂದ್ರಶೇಖರ ಶ್ಲಾಘಿಸಿದರು.

ಅಭಿನಂದನಾ ಸಮಾರಂಭದಲ್ಲಿ ಆನಂದ್ ಕುಮಾರ್ ಅವರ ಪರಿವಾರದವರು ಹಾಗೂ ಸಂಸ್ಥೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!