KKRTC ಯಾದಗಿರಿ: ಇಬ್ಬರು ವಿಭಾಗಮಟ್ಟದ ಅಧಿಕಾರಗಳ ವಿರುದ್ಧ ಜಾತಿ ನಿಂದನೆ, ಲೈಂಗಿಕ ಕಿರುಕುಳ-2ಪ್ರತ್ಯೇಕ ಪ್ರಕಣಗಳು ದಾಖಲು

ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಇಬ್ಬರು ಪ್ರಮುಖ ಅಧಿಕಾರಿಗಳ ವಿರುದ್ಧ ವಿಭಾಗದ ಸಿಬ್ಬಂದಿಗಳೇ ಪ್ರತ್ಯೇಕವಾಗಿ ದೂರು ನೀಡಿದ್ದು, ವಾರದೊಳಗೆ ಅಧಿಕಾರಿಗಳ ಮೇಲೆ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.
ಕೆಕೆಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲ ಕುಮಾರ ಚಂದರಗಿ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದರೆ, ಯಾದಗಿರಿ ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಕಾರ್ಯಾಗಾರದ ಕಾರ್ಯ ವ್ಯವಸ್ಥಾಪಕ ಪರಶುರಾಮ ಗಡೇದ ವಿರುದ್ಧ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಹೀಗಾಗಿ ಯಾದಗಿರಿ ಸಾರಿಗೆ ವಿಭಾಗದಲ್ಲಿ ಏನು ನಡೆಯುತ್ತಿದೆ ಎನ್ನುವ ಪ್ರಶ್ನೆ ಇದೀಗ ಹುಟ್ಟಿಕೊಂಡಿದ್ದು, ಮೇಲೆಧಿಕಾರಿಗಳೇ ಹೀಗೆ ನೌಕರರಿಗೆ ಸಮಸ್ಯೆಯಾದರೆ ಸಿಬ್ಬಂದಿಗಳು ಯಾರ ಬಳಿ ದೂರು ನೀಡಬೇಕು. ಎಲ್ಲವನ್ನು ನೋಡಿಕೊಂಡು ಸರಿಪಡಿಸಬೇಕಾದ ಅಧಿಕಾರಿಗಳೇ ಈ ರೀತಿ ಆದರೆ ನೌಕರರ ಸ್ಥಿತಿ ಏನು ಎಂಬ ಪ್ರಶ್ನೆ ಕಾಡುತ್ತಿದೆ.
ಇನ್ನು ವಿಭಾಗೀಯ ನಿಯಂತ್ರಣಾಧಿಕಾರಿ ವಿರುದ್ಧ ದಾಖಲಾಗಿರುವ ಪ್ರಕರಣವೇನು?:
ಸುರಪುರ ಘಟಕದಲ್ಲಿ ಚಾಲಕ ಕಂ ನಿರ್ವಾಹಕರಾಗಿರುವ ರಾಮಪ್ಪ ಎಂಬುವರು ನನಗೆ ಡಿಸಿ ಅವರು ಜಾತಿನಿಂದನೆ ಮಾಡಿದ್ದು ಜತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಂದರಗಿ ವಿರುದ್ಧ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲ ಕುಮಾರ ಚಂದರಗಿ ಅವರು ಚಾಲಕ ಕಂ ನಿರ್ವಾಹಕ ರಾಮಪ್ಪ ಅವರನ್ನು ಅಮಾನತು ಮಾಡಿದ್ದರು. ಈ ಸಂಬಂಧ ಏ.7 ರಂದು ಅವರು ಯಾದಗಿರಿ ಹಳೆ ಬಸ್ ನಿಲ್ದಾಣದಲ್ಲಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ಹೋಗಿ ನನಗೆ ನಿಯಮಬಾಹಿರವಾಗಿ ಅಮಾನತು ಮಾಡಲಾಗಿದ್ದು, ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದು ಕೋರಿದ್ದರು. ಆದರೆ, ಚಂದರಗಿ, ಇದಕ್ಕೆ ಮನ್ನಣೆ ನೀಡಲಿಲ್ಲ. ಬದಲಿಗೆ ಜಾತಿ ನಿಂದಿಸಿ ಹತ್ತು ರೌಡಿಗಳನ್ನು ಕರೆಸಿ ಖಲಾಸ್ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಮಪ್ಪ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.
ಯಾದಗಿರಿ ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಕಾರ್ಯಾಗಾರದ ಕಾರ್ಯ ವ್ಯವಸ್ಥಾಪಕ ಪರಶುರಾಮ ಗಡೇದ ಲೈಂಗಿಕ ಕಿರುಕುಳ ನೀಡಿದ್ದು, ಇವರ ವಿರುದ್ಧ ಕಾನೂನು ರೀತಿ ಕ್ರಮತೆಗೆದುಕೊಂಡು ನಮಗೆ ರಕ್ಷಣೆ ನೀಡಬೇಕು ಎಂದು ಮಹಿಳಾ ಸಿಬ್ಬಂದಿಯೊಬ್ಬರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಈ ಸಂಬಂಧ ಪರಶುರಾಮ ಗಡೇದ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Related








