KSRTC: ಮೆಜೆಸ್ಟಿಕ್ನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್ ಭಸ್ಮ- ಅದೃಷ್ವಶಾತ್ ಕೂದಲೆಳೆ ಅಂತರದಲ್ಲೇ ಪ್ರಯಾಣಿಕರು ಪಾರು

ಬೆಂಗಳೂರು: ಮೆಜೆಸ್ಟಿಕ್ನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ನಗರದ ಪ್ರಸಿದ್ಧ ಲುಲು ಮಾಲ್ ಮುಂಭಾಗ ಗುರುವಾರ ರಾತ್ರಿ ಸಂಭವಿಸಿದೆ.

ಬಸ್ ಚಾಲಕನ ಸಮಯಪ್ರಜ್ಞೆ ಹಾಗೂ ಸಾರ್ವಜನಿಕರ ಜಾಗರೂಕತೆಯಿಂದಾಗಿ ಬಸ್ಸಿನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು ಅದೃಷ್ಟವಶಾತ್ ಯಾವಯದೇ ಇತರೆ ಸಣ್ಣಪುಟ್ಟ ನೋವುಗಳು ಆಗದೆ ಎಲ್ಲರೂ ಬಚಾವ್ ಆಗಿದ್ದಾರೆ.
ಗುರುವಾರ ರಾತ್ರಿ ಸುಮಾರು 10:15ಕ್ಕೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಶಿವಮೊಗ್ಗದತ್ತ ಬಸ್ ಹೊರಟಿತ್ತು. ಈ ಬಸ್ ಹೊರಟ ಕೇವಲ ಐದೇ ನಿಮಿಷಗಳಲ್ಲೇ ಅಂದರೆ 10:20ರ ಸುಮಾರಿಗೆ ಸುಜಾತಾ ಚಿತ್ರಮಂದಿರದ ಬಳಿಯ ಲುಲು ಮಾಲ್ ತಲುಪಿತ್ತು. ಈ ವೇಳೆ ಬಸ್ಸಿನ ಇಂಜಿನ್ ಹಾಗೂ ಕೆಳಭಾಗದಿಂದ ದಟ್ಟವಾದ ಹೊಗೆಯೊಂದಿಗೆ ಬೆಂಕಿ ಕಾಣಿಸಿಕೊಂಡಿತ್ತು. ಬಸ್ಸಿನ ಹಿಂಭಾಗದಲ್ಲಿ ಬೆಂಕಿ ಇರುವುದನ್ನು ಗಮನಿಸಿದ ಹಾದಿಹೋಕರು, ಕೂಡಲೇ ಚಾಲಕನಿಗೆ ಕೂಗಿ ಎಚ್ಚರಿಸಿದರು.
ಆ ಕೂಡಲೇ ಅಪಾಯದ ಮುನ್ಸೂಚನೆ ಅರಿತ ಚಾಲಕ, ತಕ್ಷಣವೇ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ ಪ್ರಯಾಣಿಕರಿಗೆ ಇಳಿಯುವಂತೆ ಸೂಚಿಸಿದರು. ಪ್ರಯಾಣಿಕರು ಲಗೇಜ್ಗಳ ಸಮೇತ ಕೆಳಗಿಳಿದ ಕೇವಲ ಎರಡು ನಿಮಿಷಗಳಲ್ಲೇ ಬೆಂಕಿಯ ಕೆನ್ನಾಲಿಗೆ ಇಡೀ ಬಸ್ಸನ್ನು ಆವರಿಸಿತು. ಬೆಂಕಿಯ ತೀವ್ರತೆಗೆ ಬಸ್ಸಿನ ಕಿಟಕಿ ಗಾಜುಗಳು ಸಿಡಿದು ಜ್ವಾಲೆ ಅತೀ ಎತ್ತರಕ್ಕೆ ಚಿಮ್ಮುತ್ತಿದ್ದುದು ಕಂಡುಬಂದಿತು. ಇದರಿಂದ ಸ್ಥಳೀಯರಲ್ಲಿ ಹಾಗೂ ವಾಹನ ಸವಾರರಲ್ಲಿ ತೀವ್ರ ಆತಂಕ ಮನೆಮಾಡಿತ್ತು.
ಘಟನೆ ಹಿನ್ನೆಲೆಯಲ್ಲಿ ರಾಜಾಜಿನಗರ ಮತ್ತು ಮೆಜೆಸ್ಟಿಕ್ ಸಂಪರ್ಕಿಸುವ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಎರಡು ವಾಹನಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದವು.
ಇತ್ತ ವಿಷಯ ತಿಳಿಯುತ್ತಿದ್ದಂತೆ ಮಲ್ಲೇಶ್ವರಂ ಮತ್ತು ರಾಜಾಜಿನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಸುಟ್ಟು ಕರಕಲಾದ ಬಸ್ಸನ್ನು ಕ್ರೇನ್ ಮೂಲಕ ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಇಂಜಿನ್ನಲ್ಲಿನ ಶಾರ್ಟ್ ಸರ್ಕ್ಯೂಟ್ ಅಥವಾ ಮೆಕ್ಯಾನಿಕಲ್ ವೈಫಲ್ಯವೇ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಅದೃಷ್ಟವಶಾತ್ ದೊಡ್ಡ ದುರಂತ ತಪ್ಪಿದೆ, ತಾಂತ್ರಿಕ ತಂಡದಿಂದ ತನಿಖೆ ನಡೆಸಿ ನಿಖರ ಕಾರಣ ತಿಳಿಯಲಾಗುವುದು ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
Related









