
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಕಾರು ನಡುವೆ ಆಕಸ್ಮಿಕವಾಗಿ ಸಂಭವಿಸಿದ ಅಪಘಾತದಿಂದ ಕಾರು ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅದಕ್ಕೆ ಹೆದರಿ KSRTC ಬಸ್ ಚಾಲಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಅಂದರೆ ಮೂರು ದಿನದ ಬಳಿಕ ಗೊತ್ತಾಗಿದೆ.
ಸಂಸ್ಥೆಯ ಮೈಸೂರು ನಗರ ವಿಭಾಗದ ಸಾತಗಳ್ಳಿ ಘಟಕದ ಚಾಲಕ ರಾಜೇಂದ್ರ (43) ಬಿಲ್ಲೆ ಸಂಖ್ಯೆ 156 ಆತ್ಮಹತ್ಯೆ ಮಾಡಿಕೊಂಡವರು. ಅಪಘಾತವಾಗಿರುವುದಕ್ಕೆ ಸಂಸ್ಥೆಯ ಕಾನೂನು ವಿಭಾಗದ ಅಧಿಕಾರಿಗಳು ಸ್ಪಂದಿಸದಿರುವುದಕ್ಕೆ ಹೆದರಿ ಈ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹೋದ್ಯೋಗಿಗಳು ಆರೋಪಿಸಿದ್ದಾರೆ.
ಮಾ.1ರಂದು ಶಿವರಾತ್ರಿ ಜಾತ್ರಾ ವಿಶೇಷ ವಾಹನ (ಸಂಖ್ಯೆ ಕೆಎ.09, ಎಫ್-5544) ವನ್ನು ಚಾಲಕ ರಾಜೇಂದ್ರ ಮಲೆ ಮಹದೇಶ್ವರ ಬೆಟ್ಟದಿಂದ ಬೆಂಗಳೂರಿಗೆ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಕೆ.ಎಂ.ದೊಡ್ಡಿಯ ಬೋರಾಪುರ ಗೇಟ್ ಹತ್ತಿರ ಎದುರಿನಿಂದ ಬಂದ ಕಾರಿಗೆ ಡಿಕ್ಕಿಯಾಗಿತ್ತು. ಕಾರ್ ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟರು.
ಇದರಿಂದ ಹೆದರಿ ರಾಜೇಂದ್ರ ಅವರು ಮನೆಗೆ ಹೋಗದೆ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದರು. ಅವರು ಎಲ್ಲೋ ಇರಬಹುದು ಅಂತ ಕುಟುಂಬದವರು ಹಾಗೂ ಸಹೋದ್ಯೋಗಿಗಳು ಅಂದುಕೊಂಡಿದ್ದರು. ಆದರೆ ಈ ದಿನ ಮೈಸೂರು ಬಳಿ ಇರುವ ವರುಣ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮೃತ ರಾಜೇಂದ್ರ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ವಯಸ್ಸಾದ ತಂದೆಯನ್ನು ಅಗಲಿರುತ್ತಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೈಸೂರು ನಗರ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಕ್ರಮ ವಹಿಸಿದ್ದಾರೆ.
ಈ ನಡುವೆ ಕರ್ನಾಟಕ ಸರ್ಕಾರದ ಸಾರಿಗೆ ನೌಕರರು ಈ ರೀತಿ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಪ್ರಮುಖ ಕಾರಣ, ಆಕಸ್ಮಿಕವಾಗಿ ರಸ್ತೆ ಅಪಘಾತವಾದರೆ ಸಂಬಂಧಪಟ್ಟ ಸಂಸ್ಥೆ ಕಾನೂನು ವಿಭಾಗದ ಅಧಿಕಾರಿಗಳು ಕೂಡಲೇ ಚಾಲಕನಿಗೆ ಬೇಲ್ ರೆಡಿ ಮಾಡಿಕೊಂಡು ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ನೀಡಿ ಬಿಡಿಸಬೇಕು.
ಆದರೆ, ಸಂಸ್ಥೆಯ ಕಾನೂನು ವಿಭಾಗದ ಅಧಿಕಾರಿಗಳು ಅಥವಾ ಸಂಸ್ಥೆಯ ವಕೀಲರು ಈ ಕೆಲಸವನ್ನು ಮಾಡುತ್ತಿಲ್ಲ. ಬದಲಿಗೆ ಚಾಲಕರ ವಿರುದ್ಧವೇ ಪ್ರಕರಣ ದಾಖಲಿಸುವ ಪ್ರವೃತ್ತಿ ಇದೆ. ಹೀಗಾಗಿ ಅಪಘಾತವಾದ ಮೇಲೆ ಚಾಲಕರ ಕುಟುಂಬದವರು ಖಾಸಗಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಹೋಗಿ ಚಾಲಕರನ್ನು ಬಿಡಿಸಿಕೊಂಡು ಬರಬೇಕು.
ಡ್ಯೂಟಿ ಮೇಲೆ ಆದ ಅಪಘಾತಕ್ಕೆ ಚಾಲಕರನ್ನು ಸಂಸ್ಥೆಯ ವಕೀಲರು ಬಲಿಪಶುಮಾಡುತ್ತಿರುವುದರಿಂದ ಕೆಲ ಚಾಲನಾ ಸಿಬ್ಬಂದಿಗಳು ಆರ್ಥಿಕವಾಗಿ ಸಬಲರಲ್ಲದ ಕಾರಣ ಖಾಸಗಿ ವಕೀಲರ ಮೂಲಕ ಕಾನೂನು ಹೋರಾಟ ಮಾಡುವುದು ಕಷ್ಟಕರವಾಗುತ್ತಿದೆ. ಈ ಕಾರಣಕ್ಕೆ ಕೆಲ ಚಾಲಕರು ಈ ರೀತಿ ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಇದು ಬದಲಾಗಬೇಕು. ಆಕಸ್ಮಿಕವಾಗಿ ಸಂಭವಿಸುವ ಅಪಘಾತಕ್ಕೆ ಸಂಸ್ಥೆಯ ವಕೀಲರು ನೌಕರರಿಗೆ ರಕ್ಷೆಯಾಗಿ ನಿಂತು ಅವರನ್ನು ಬಿಡಿಸಿಕೊಂಡು ಬರಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ ಸಂಸ್ಥೆಯ ನೌಕರರು ಒತ್ತಡ ರಹಿತವಾಗಿ ಡ್ಯೂಟಿ ಮಾಡಲು ಸಾಧ್ಯವಾಗದೆ ರಾಜೇಂದ್ರ ಅವರ ರೀತಿ ಪ್ರಾಣ ಕಳೆದುಕೊಳ್ಳುತ್ತಾರೆ.