KSRTC: ಕೂಲಿಕಾರ ಮಹಿಳೆ ಹೆಸರಲ್ಲಿ ಬ್ಯಾಂಕ್ ಖಾತೆ ಓಪನ್ ಮಾಡಿಸಿದ ಟಿಐ ರೂಪಶ್ರೀ- ಚಾಲನಾ ಸಿಬ್ಬಂದಿಗಳ ಸುಲಿಗೆ: ಲಂಚದ ಹಣದಲ್ಲಿ ಖರೀದಿಸಿದ್ದು 5 ಎಕರೆ ಕೃಷಿ ಭೂಮಿ!?
KSRTC ತಿಪಟೂರು ಘಟಕದ ಟಿಐ ರೂಪಶ್ರೀ- ಕೋಟಿ ರೂ.ಗೂ ಹೆಚ್ಚು ಲಂಚದ ಹಣ ತನ್ನ ಬ್ಯಾಂಕ್ ಖಾತೆಗೆ ಬಂದಿದ್ದರೂ ಆ ಬಗ್ಗೆ ಮಹಿಳೆಗೆ ಕಿಂಚಿತ್ತು ಗೊತ್ತಿಲ್ಲ
- ಟಿಐ ಲಂಚದ ಹಣದಲ್ಲಿ 5 ಎಕರೆ ಕೃಷಿ ಭೂಮಿ ಖರೀದಿಸಿರುವ ಆರೋಪ
ತಿಪಟೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ತಿಪಟೂರು ಘಟಕದಲ್ಲಿ ಸಂಚಾರ ನಿರೀಕ್ಷಕಿಯಾಗಿರುವ ಜಿ.ಎಲ್. ರೂಪಶ್ರೀ ಎಂಬುವರು ತಿಪಟೂರು ತಾಲೂಕಿನ ಗೆದ್ದಲಹಳ್ಳಿ ಗ್ರಾಮದ ನಿವಾಸಿ ನೇತ್ರಾವತಿ ಎಂಬುವರ ಹೆಸರನಲ್ಲಿ ಕರ್ನಾಟಕ ಬ್ಯಾಂಕ್ನಲ್ಲಿ ಖಾತೆ ತೆರೆಸಿ ಚಾಲನಾ ಸಿಬ್ಬಂದಿಗಳಿಂದ ಫೋನ್ ಪೇ ಮಾಡಿಕೊಂಡಿದ್ದಾರೆ.

ತಿಪಟೂರು ಡಿಪೋ ಪಕ್ಕದಲ್ಲಿ ಈ ನೇತ್ರಾವತಿ ಎಂಬುವವರು ಒಂದು ಟೀ ಸ್ಟಾಲ್ ಇಟ್ಟುಕೊಂಡಿದ್ದು, ಇವರನ್ನು ಈ ರೂಪಶ್ರೀ ಪರಿಚಯ ಮಾಡಿಕೊಂಡಿದ್ದಾರೆ. ಅಲ್ಲದೆ ನೇತ್ರಾವತಿ ಹಾಗೂ ರೂಪಶ್ರೀ ಇಬ್ಬರೂ ಕೂಡ ಗೆದ್ದಲಹಳ್ಳಿ ಗ್ರಾಮದವರೆ ಆಗಿದ್ದರಿಂದ ನೇತ್ರಾವತಿ ಅವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡ ರೂಪಶ್ರೀ ಬ್ಯಾಂಕ್ನಲ್ಲಿ ಖಾತೆ ತೆರೆಸಿದ್ದಾರೆ. ಬಳಿಕ ಅವರಿಂದ ಎಟಿಎಂ ಕಾರ್ಡ್ ತೆಗೆಸಿಕೊಂಡು ಅದನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಬಳಿಕ ನೇತ್ರಾವತಿ ಅವರು ಟೀ ಅಂಗಡಿ ಮುಚ್ಚಿ ಈಗ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಯ ನಡುವೆ ನೇತ್ರಾವತಿಯವರಿಗೆ ತಾವು ಕರ್ನಾಟಕ ಬ್ಯಾಂಕ್ನಲ್ಲಿ ಖಾತೆ ತೆರೆದಿರುವುದನ್ನೆ ಮರೆತು ಬಿಟ್ಟಿದ್ದಾರೆ. ಹೀಗಾಗಿ ಈ ಖಾತೆ ಮೂಲಕ ನಡೆಯುತ್ತಿದ್ದ ಯಾವುದೇ ವಿಷಯ ಈಕೆಗೆ ತಿಳಿದಿಲ್ಲ.
ಆದರೆ ಫೋನ್ ಪೇ 9740826*** ಮೂಲಕ ಚಾಲನಾ ಸಿಬ್ಬಂದಿಗಳಿಂದ ಲಂಚವಾಗಿ ಪಡೆಯುತ್ತಿದ್ದ ಹಣವನ್ನು ಈ ಬ್ಯಾಂಕ್ ಖಾತೆಗೆ ಹೋಗುವಂತೆ ಮಾಡಿಕೊಂಡಿರುವ ರೂಪಶ್ರೀ ಹೀಗೆ ನಿತ್ಯ ಚಾಲನಾ ಸಿಬ್ಬಂದಿಗಳನ್ನು ಸುಲಿಗೆ ಮಾಡಿ ಬಂದ ಲಕ್ಷಾಂತ ರೂಪಾಯಿಯಿಂದ ಈಗ ಸುಮಾರು 5 ಎಕರೆ ಕೃಷಿ ಭೂಮಿಯನ್ನು ಇದೇ ಗೆದ್ದಲಹಳ್ಳಿ ಗ್ರಾಮದಲ್ಲಿ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.
ಇನ್ನು ನನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಸಿ ನನ್ನ ಎಟಿಎಂ ಕಾರ್ಡ್ಕೂಡ ಈಕೆ ಪಡೆದುಕೊಂಡು ನೌಕರರಿಂದ ಲಂಚ ವಸೂಲಿ ಮಾಡಿ ಆ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿರುವ ಬಗ್ಗೆ ತಿಳಿದ ನೇತ್ರಾವತಿ ಈಗ ಲೋಕಾಯುಕ್ತಕ್ಕೆ ದೂರು ಕೊಡಲು ಮುಂದಾಗಿದ್ದಾರೆ.
ಈಕೆ ಲೋಕಾಯುಕ್ತಕ್ಕೆ ದೂರು ಕೊಡಲು ಮುಂದಾಗಿರುವ ವಿಷಯ ತಿಳಿದ ರೂಪಶ್ರೀ ಹಾಗೂ ಕುಟುಂಬದವರು ಇಂದು (ಡಿ.9) ಬೆಳಗ್ಗೆ ನೇತ್ರಾವತಿ ಅವರ ಮನೆಗೆ ಹೋಗಿ ಆಕೆಯನ್ನು ಹೆದರಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಚಾಲನಾ ಸಿಬ್ಬಂದಿಗಳಿಂದ ಪಡೆದಿರುವ ಲಂಚದ ಹಣ ಕೋಟಿ ಮೀರಿದ್ದು ಅದನ್ನು ಈ ಎಟಿಎಂ ಕಾರ್ಡ್ ಮೂಲಕವೇ ತಮಗೆ ಬೇಕಾದಾಗ ಹಣ ಡ್ರಾ ಮಾಡಿಕೊಳ್ಳುತ್ತಿದ್ದಾರೆ ಈ ರೂಪಶ್ರೀ.
ಈ ಎಲ್ಲ ವಿಷಯ ತಿಳಿದ ಸಾರಿಗೆ ಅಧಿಕಾರಿಗಳು ಈ ಲಂಚದ ಹಣ ಪಡೆದಿರುವ ಬಗ್ಗೆ ತನಿಖೆ ಕೈಗೊಂಡ ಕಾರಣ ಈಗ ಭ್ರಷ್ಟಾಚಾರ ಬೆಳಕಿಗೆ ಬರುತ್ತಿದೆ. ಅಲ್ಲದೆ ಲಂಚ ಪಡೆದಿರುವುದು ಮೇಲ್ನೋಟಕ್ಕೆ ದೃಢಪಟ್ಟಿದ್ದರಿಂದ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ಬಹುಶಃ ಇಂದು ಅಮಾನತು ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಈ ಎಲ್ಲದರ ನಡುವೆ ತನ್ನ ಭ್ರಷ್ಟಾಚಾರವನ್ನು ಮುಚ್ಚಿಹಾಕುವುದಕ್ಕೆ ಮುಂದಾಗಿರುವ ರೂಪಶ್ರೀ ಕುಟುಂಬದವರೊಂದಿಗೆ ನೇತ್ರಾವತಿ ಅವರ ಮನೆಗೆ ಹೋಗಿ ಹೆದರಿಸಿ ಬೆದರಿಸಿ ಮರು ಹೇಳಿಕೆ ಪಡೆಯಲು ಪ್ರಯತ್ನ ಕೂಡ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಎಲ್ಲವನ್ನು ಗಮನಿಸಿ ಈ ಕೂಡಲೇ ಈಕೆಯನ್ನು ಅಮಾನತು ಮಾಡಬೇಕು ಎಂದು ಕೆಆರ್ಎಸ್ ಪಕ್ಷ ಹಾಗೂ ಡಿಎಸ್ಎಸ್ ಪದಾಧಿಕಾರಿಗಳು ಸಾರಿಗೆ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ ಅಲ್ಲದೆ ತುಮಕೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಹುಳಿಯಾರ್ ಲೋಕೇಶ್ ತಿಳಿಸಿದ್ದಾರೆ.
ಇನ್ನು ಈ ರೀತಿ ನೌಕರರ ಸುಲಿಗೆ ಮಾಡುವವರನ್ನು ಯಾವುದೇ ಕಾರಣಕ್ಕೂ ಸಂಸ್ಥೆಯ ಮೇಲಧಿಕಾರಿಗಳು ರಕ್ಷಿಸಬಾರದು. ಕೂಡಲೇ ಈಕೆಯನ್ನು ಅಮಾನತು ಮಾಡಬೇಕು ಎಂದು ಆರಾಧನಾ ಸಮಿತಿ ಮಾಜಿ ಸದಸ್ಯ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಗೂಳೂರಿನ ಸಿ. ನಾಗರಾಜು ಆಗ್ರಹಿಸಿದ್ದಾರೆ.
Related









