NEWS

ಮಳವಳ್ಳಿ: KSRTC-BMTC ಬಸ್‌ಗಳ ನಡುವೆ ಭೀಕರ ಅಪಘಾತ- ನಾಲ್ವರು ಮೃತ, ಚಾಲಕರು ಸೇರಿ 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ವಿಜಯಪಥ ಸಮಗ್ರ ಸುದ್ದಿ

ಮಳವಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSSRTC) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ಎರಡು ಬಸ್‌ಗಳು ಸೇರಿದಂತೆ ಮೂರು ಬಸ್‌ಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿ, ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು, ಇಬ್ಬರೂ ಚಾಲಕರು ಸೇರಿದಂತೆ ಹಲವಾರು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಸಮೀಪ ಇಂದು ಸಂಜೆ ಕೊಳ್ಳೇಗಾಲ ಘಟಕದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಘಟಕ-21ರ ವಾಹನಗಳ ಹಾಗೂ ಈ ಬಸ್‌ ಹಿಂದೆ ಬರುತ್ತಿದ್ದ ಮತ್ತೊಂದು ಘಟಕ- 36ರ ಬಿಎಂಟಿಸಿ ಬಸ್‌ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಬಿಎಂಟಿಸಿ ಘಟಕ-21ರ ಬಸ್‌ ಚಾಲಕ ಜಾನ್‌ರಾಜ್‌ ಅವರ ಎರಡು ಕಾಲುಗಳು ಮುರಿದಿವೆ. ಅಲ್ಲದೆ ಕೆಎಸ್‌ಆರ್‌ಟಿಸಿ ಚಾಲಕ ಸಂತೋಷ್‌ ಸಂಗಂ ಅವರು ಗಂಭೀರಗಾಯಗೊಂಡಿದ್ದಾರೆ. ಈ ಚಾಲಕರು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲ ಗಾಯಾಳುಗಳನ್ನು ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ KSRTC- BMTC ಚಾಲಕರು.

ಅದರಲ್ಲಿ ತೀವ್ರಗಾಯಗೊಂಡಿರುವ ಬಿಎಂಟಿಸಿ ಘಟಕ-21ರ ಬಸ್‌ ಚಾಲಕ ಜಾನ್‌ರಾಜ್‌, ಅಲ್ಲದೆ ಕೆಎಸ್‌ಆರ್‌ಟಿಸಿ ಚಾಲಕ ಸಂತೋಷ್‌ ಸಂಗಂ ಸೇರಿದಂತೆ ಇತರರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಿದ್ದು. ಅಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತ ವಿಷಯ ತಿಳಿಯುತ್ತಿದ್ದಂತೆ ಬಿಎಂಟಿಸಿ ಘಟಕ-21ರ ಡಿಎಂ ಪ್ರದೀಪ್‌ ಕುಮಾರ್‌ ಅವರು ಕೊಳ್ಳೇಗಾಲಕ್ಕೆ ಹೊರಟಿದ್ದು ಅಲ್ಲಿಂದ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕ ಹಾಗೂ ಪ್ರಯಾಣಿಕರ ಭೇಟಿಯಾಗಲಿದ್ದಾರೆ.

ಅಪಘಾತಕ್ಕೆ ಕಾರಣ: ಬೆಂಗಳೂರಿನಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಿಎಂಟಿಸಿ ಬಸ್‌ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿತ್ತು. ಇನ್ನು ಕೊಳ್ಳೇಗಾಲದಿಂದ ಬೆಂಗಳೂರಿಗೆ ಹೊರಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ ಬಾಚನಹಳ್ಳಿ ಸಮೀಪ ಬರುತ್ತಿದಂತೆ ಈ KSRTC ಬಸ್‌ನ ಮುಂದಿನ ಚಕ್ರ ಬಸ್ಟ್‌ (Burst) ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ.

ಈ ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳ ಮುಂದಿನ ಭಾಗ ಸಂಪೂರ್ಣ ಛಿದ್ರಗೊಂಡಿವೆ. ಇದೇ ವೇಳೆ ಬಿಎಂಟಿಸಿ ಬಸ್‌ ಹಿಂದೆ ಮತ್ತೊಂದು ಬಿಎಂಟಿಸಿ ಬಸ್‌ ಬರುತ್ತಿದ್ದು, ಈ ಬಸ್‌ ಹಿಂದಿನಿಂದ ಬಿಎಂಟಿಸಿ ಬಸ್‌ಗೆ ಡಿಕ್ಕಿಹೊಡೆದಿದೆ. ಪರಿಣಾಮ ಇದರಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ.

Megha
the authorMegha

Leave a Reply

error: Content is protected !!