ಬೆಂಗಳೂರು: ರಾಜ್ಯದ ರಾಜಧಾನಿ ಹೊರವಲಯ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ವಸ್ತು ಸ್ಫೋಟಗೊಂಡಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಇಂದು ಮಧ್ಯಾಹ್ನ ಕೆಫೆಯಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆಗೆ ಕೆಫೆಯೂ ಹಾನಿಯಾಗಿದ್ದು, ಐವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳಲ್ಲಿ ಮಹಿಳೆಯೊಬ್ಬರು ಇದ್ದಾರೆ. ಇನ್ನು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಕೆಫೆಯಲ್ಲಿ ಸ್ಪೋಟವಾಗುತ್ತಿದ್ದಂತೆಯೇ ಜನರು ಭಯಭೀತರಾಗಿ ಅಡ್ಡಾದಿಡ್ಡಿ ಓಡಿಡಾಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹೌದು! ನಿಗೂಢ ಸ್ಫೋಟದ ವೇಳೆ ಭಾರೀ ಶಬ್ಧವಾಗಿದ್ದು, ಇದರಿಂದ ಜನರು ಒಂದು ಕ್ಷಣ ಭಯಭೀತರಾಗಿದ್ದರು.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇದು ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟ ಕೂಡ ಆಗಿರಬಹುದೆಂದು ಎಂದು ಶಂಕಿಸಲಾಗಿತ್ತು. ಆದರೆ, ಸ್ಫೋಟಗೊಂಡ ಸ್ಥಳದಲ್ಲಿ ಕೆಲ ಐಡಿ ಕಾರ್ಡ್ಗಳು ಸಿಕ್ಕಿವೆ.
ಇನ್ನು ಬ್ಲಾಸ್ಟ್ ಆದ ಸ್ಥಳದ ಸಮೀಪದಲ್ಲೇ ಒಂದು ಬ್ಯಾಟರಿ ಕೂಡ ಪತ್ತೆಯಾಗಿದೆ. ಅಲ್ಲದೇ ಹೋಟೆಲ್ಗೆ ಬಂದಿದ್ದ ಗ್ರಾಹಕರೊಬ್ಬರ ಬ್ಯಾಗ್ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ಮೂಡುತ್ತಿವೆ. ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಎಸಿಪಿ ರೀನಾ ಸುವರ್ಣ ಮತ್ತು ಮಾರತ್ತಹಳ್ಳಿ ಪೊಲೀಸರು ಸಹ ಸ್ಳಳಕ್ಕೆ ಬಂದಿದ್ದು, ಸುಟ್ಟ ಸ್ಥಿತಿಯಲ್ಲಿರುವ ಬ್ಯಾಗ್ ಹಾಗೂ ಸ್ಥಳದಲ್ಲಿ ಸಿಕ್ಕ ಐಡಿ ಕಾರ್ಡ್ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಇನ್ನು ಹೋಟೆಲ್ನ ಸಿಸಿಟಿವಿಗಳನ್ನು ಸಹ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಯೋಗಾಲಯ ತಜ್ಞರು ಭೇಟಿ: ಸ್ಫೋಟದ ಹಿಂದೆ ಕಿಡಿಗೇಡಿಗಳ ಕೃತ್ಯ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿದ್ದಾರೆ. ಅಗತ್ಯ ಉಪಕರಣಗಳ ಜತೆ ರಾಮೇಶ್ವರಂ ಕೆಫೆಗೆ ಬಂದಿರುವ FSL ತಂಡ ಪರಿಶೀಲನೆ ನಡೆಸಿದೆ.
ಹೋಟೆಲ್ನಲ್ಲಿದ್ದ ಯಾವುದೇ ವಸ್ತು ಸ್ಫೋಟವಾಗಿಲ್ಲ. ಬದಲಾಗಿ ಹೊರಗಡೆಯಿಂದ ಹೋಟೆಲ್ಗೆ ತಂದ ವಸ್ತುವಿನಿಂದ ಸ್ಫೋಟವಾಗಿದೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಸ್ಥಳಕ್ಕೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳ ಕೂಡ ಬಂದಿದ್ದು, ತಪಾಸಣೆ ನಡೆಸಿವೆ. ಆದರೂ ಸ್ಫೋಟ ಹೇಗಾಯಿತು ಎಂದು ಸ್ಪಷ್ವವಾಗಿ ಹೇಳಲಾಗುತ್ತಿಲ್ಲ.
![](https://vijayapatha.in/wp-content/uploads/2024/02/QR-Code-VP-1-1-300x62.png)