Please assign a menu to the primary menu location under menu

NEWSಕೃಷಿನಮ್ಮರಾಜ್ಯ

ಡಿ.23ರಂದು ಸಾಲಮನ್ನಾಕ್ಕೆ ಆಗ್ರಹಿಸಿ ರೈತರ ರಾಷ್ಟ್ರೀಯ ಮಹಾ ಅಧಿವೇಶನ: ಕುರುಬೂರು ಶಾಂತಕುಮಾರ್‌

ವಿಜಯಪಥ ಸಮಗ್ರ ಸುದ್ದಿ

ಕೆ.ಆರ್.ನಗರ: ರೈತರ ಎಲ್ಲ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗಾಗಿ, ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ರೈತರ ರಾಷ್ಟ್ರೀಯ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದ್ದು ರಾಷ್ಟ್ರೀಯ ರೈತ ಮುಖಂಡರ ಸಮ್ಮುಖದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಗಂಭೀರ ಎಚ್ಚರಿಕೆ ನೀಡಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

ಇಂದು ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಪ್ರವಾಹ ಹಾನಿ, ಮಳೆಹಾನಿ, ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಎಲ್ಲ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಕೃಷಿ ಸಾಲ ಪಡೆದ ರೈತರು ಬೆಳೆ ಬೆಳೆಯಲು ಹೂಡಿಕೆ ಮಾಡಿ ಬೆಳೆ ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕಾಗಿ ಸಾಲಮನ್ನಾ ಆಗಲೇಬೇಕು ಎಂದು ಆಗ್ರಹಿಸಿದರು.

ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಆಗಬೇಕು: ಇನ್ನು ಕೈಗಾರಿಕೆ, ಉದ್ಯಮಿಗಳಿಗೆ ಸಂಕಷ್ಟದ ನೆರವು ಎಂದು 12 ಲಕ್ಷ ಕೋಟಿ ರೂ. ಮನ್ನಾ ಮಾಡಿರುವ ರೀತಿ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಆಗಬೇಕು, ಈ ಬಗ್ಗೆ ರೈತರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಾಜ್ಯದ ರೈತರ ಒತ್ತಾಯ ಪತ್ರವನ್ನು ಇದೇ ಡಿ. 23 ರಂದು ಸಲ್ಲಿಸಲಾಗುಗುವುದು. ಹೀಗಾಗಿ ರಾಜ್ಯಾದಂತ ಸಾಲ ಮಾಡಿದ ರೈತರು ಸ್ವಯಂಪ್ರೇರಿತರಾಗಿ ಬರಬೇಕು ಎಂದು ಮನವಿ ಮಾಡಿದರು.

ರೈತರ ಸಾಲ ಮನ್ನಾ ಆಗದಂತೆ ತಡೆಯಲು ಬಲವಂತವಾಗಿ ಬ್ಯಾಂಕುಗಳು ಮುದ್ರಿತ ಪತ್ರಕ್ಕೆ ರೈತರ ಸಹಿ ಪಡೆದು ನವೀಕರಣ ಮಾಡುತ್ತಿದ್ದಾರೆ ಈ ಬಗ್ಗೆ ರೈತರು ಜಾಗೃತರಾಗಿರಬೇಕು. ಭತ್ತ ಕಬ್ಬು ಉತ್ಪಾದನೆ ಶೇ. 50ರಷ್ಟು ಕಡಿಮೆಯಾಗಿರುವ ಕಾರಣ ಭತ್ತ ಮಾರಾಟ ಮಾಡದೆ ಉಗ್ರಾಣಗಳಲ್ಲಿ ದಾಸ್ತಾನು ಮಾಡಿ ದಾಸ್ತಾನು ಚೀಟಿ ನೀಡಿದರೆ ಬ್ಯಾಂಕುಗಳು ಶೇ.75 ರಷ್ಟು ಮುಂಗಡ ಸಾಲ ಕೊಡುತ್ತವೆ ಅದರ ಉಪಯೋಗ ಪಡೆದು ಬೆಲೆ ಏರಿಕೆ ಆದಾಗ ಮಾರಾಟ ಮಾಡಬಹುದು ಎಂದು ಸಲಹೆ ನೀಡಿದರು.

ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಆಗಬೇಕು ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು ಎಂದು ದೆಹಲಿಯಲ್ಲಿ ರೈತರು ಹೋರಾಟ ಮಾಡಿದಾಗ ಪ್ರಧಾನಿಯವರು ಭರವಸೆ ನೀಡಿದಂತೆ ಕೂಡಲೇ ಈ ಕಾನೂನು ಜಾರಿ ಮಾಡಬೇಕು ಎಂದರು.

ಬರ ಸಂಕಷ್ಟದಲ್ಲೂ ರಾಜಕೀಯ ಚೆಲ್ಲಾಟ: ನಮ್ಮ ರಾಜ್ಯ ಸರ್ಕಾರ ಬರ ಬೆಳೆ ನಷ್ಟ ಪರಿಹಾರ 2 ಸಾವಿರ ಭಿಕ್ಷೆ ನೀಡಿ ಆಪಮಾನ ಮಾಡುತ್ತಿದೆ. ಜಾತ್ರೆಗಳಲ್ಲಿ ಜನರನ್ನು ಮೋಸಗೊಳಿಸಲು ಖಾಲಿ ಡಬ್ಬದ ಆಟ ಆಡಿಸುತ್ತಾರೆ, ಅದೇ ರೀತಿ ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತರನ್ನು ಮೋಸಗೂಳಿಸಲು ಬರ ಸಂಕಷ್ಟದಲ್ಲೂ ರಾಜಕೀಯ ಚೆಲ್ಲಾಟ ಆಡುತ್ತಿದ್ದಾರೆ. ಬರ ಬೆಳೆ ನಷ್ಟ ಎಕರೆಗೆ ಕನಿಷ್ಠ 25,000 ರೂ. ಕೊಡಬೇಕು. ತೆಲಂಗಾಣದ ಸರ್ಕಾರ ರೈತರಿಗೆ ಪ್ರತಿ ಎಕರೆಗೆ 10,000 ರೂ. ಗೊಬ್ಬರ ಬೀಜ ಖರೀದಿಗೆ ನೀಡುತ್ತದೆ, ಇದನ್ನಾದರೂ ನೋಡಿ ಅರಿತುಕೊಳ್ಳಲಿ ಎಂದು ಹೇಳಿದರು.

ಕಬ್ಬು ಉತ್ಪಾದನೆ ಶೇಕಡ 50ರಷ್ಟು ಕಡಿಮೆಯಾಗಿದೆ ಕಾರ್ಖಾನೆಗಳು ಪೈಪೋಟಿಯಲ್ಲಿ ಕಬ್ಬು ಖರೀದಿ ಮಾಡುತ್ತಿವೆ ರೈತರಿಗೆ ನ್ಯಾಯಯುತ ಬೆಲೆ ಕೊಡದೆ ವಂಚನೆ ಮಾಡುತ್ತಿವೆ. ಎಲ್ಲ ಕೃಷಿ ಬೆಳೆಗಳಿಗೂ ಕಡ್ಡಾಯವಾಗಿ ಬೆಳೆ ವಿಮೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಬೆಳೆ ವಿಮೆ ವಿಮಾ ಕಂಪನಿಗಳಿಗೆ ಲೂಟಿ ಮಾಡಲು ಸಹಕಾರಿ: ಬೆಳೆ ವಿಮೆ ಸರಳೀಕರಣಗೊಳಿಸಬೇಕು, ಅತಿವೃಷ್ಟಿ ಬರ ನಷ್ಟ ಪರಿಹಾರ ಬೆಳೆ ವಿಮೆ ವ್ಯಾಪ್ತಿಯಲ್ಲಿ ನಷ್ಟ ಪರಿಹಾರ ನೀಡಬೇಕು. ಈಗ ಇರುವ ಬೆಳೆ ವಿಮೆ ವಿಮಾ ಕಂಪನಿಗಳಿಗೆ ಲೂಟಿ ಮಾಡಲು ಹೆಚ್ಚು ಸಹಕಾರಿಯಾಗಿದೆ ವಿಮಾ ನೀತಿ ಬದಲಾಯಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ದೇಶದ 140 ಕೋಟಿ ಜನರಿಗೆ ಆಹಾರ ಉತ್ಪಾದಿಸಲು ತಮ್ಮ ಜೀವನವನ್ನೆ ತ್ಯಾಗ ಮಾಡುತ್ತಿರುವ 60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5000 ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕೃಷಿ ಪಂಪ್ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್ ತಪ್ಪಿಸುವಂತ ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಹಗಲು ವೇಳೆ ನಿರಂತರ 10 ಗಂಟೆಗಳ ವಿದ್ಯುತ್ ನೀಡಬೇಕು. ಕೃಷಿ ಪಂಪ್ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ನೀಡುವ ಶೇಕಡಾ 60ರಷ್ಟು ಸಹಾಯಧನ, ಕುಸುಮ ಯೋಜನೆಗೆ ರಾಜ್ಯ ಸರ್ಕಾರ ಶೇಕಡ 30ರಷ್ಟು ಸೇರಿಸಿ ಸಹಾಯಧನ ನೀಡಲಿ ಇದರಿಂದ ರೈತರಿಗೆ ಹಗಲು ವೇಳೆ ಯಾವುದೇ ಸಮಸ್ಯೆ ಇಲ್ಲದೆ ವಿದ್ಯುತ್ ಸಿಗುತ್ತದೆ ಎಂದರು.

ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇಕಡ 10 ಮೀಸಲಾತಿ ನೀಡಬೇಕು: ರೈತನ ಮಗನ ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇಕಡ 10 ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು ರೈತರ ಮಕ್ಕಳನ್ನು ಅಪಾಯದಿಂದ ಪಾರು ಮಾಡಬೇಕು. ದೆಹಲಿಯಲ್ಲಿ ವರ್ಷ ಕಾಲ ಹೋರಾಟ ಮಾಡಿದ ರೈತರ ಮೇಲೆ ಹಾಕಿರುವ ಪೊಲೀಸ್ ಮೊಕದಮೆಗಳನ್ನು ವಾಪಸ್ ಪಡೆಯಬೇಕು. ದೇಶದ ರೈತರನ್ನು ಸಂರಕ್ಷಿಸಲು ವಿಶ್ವ ವ್ಯಾಪಾರದ ಒಪ್ಪಂದದಿಂದ ಭಾರತ ಸರ್ಕಾರ ಹೊರ ಬರಬೇಕು.

ಈ ಎಲ್ಲ ಒತ್ತಾಯಗಳ ಬಗ್ಗೆ ರಾಜ್ಯದ ರೈತರ ಸಮ್ಮುಖದಲ್ಲಿ, ರಾಷ್ಟ್ರೀಯ ರೈತ ಮುಖಂಡರು ಬೆಂಗಳೂರಿನ ಅಧಿವೇಶನದಲ್ಲಿ ಚರ್ಚೆ ನಡೆಸಿ ರೈತರನ್ನು ಜಾಗೃತಿ ಮಾಡಿ ದೇಶದ ಎಲ್ಲ ರೈತರು ರಾಜಕೀಯೇತರವಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಈ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಡಿಸೆಂಬರ್ 23 ರಂದು ಬೃಹತ್ ರೈತರ ಮಹಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಇರುವ ಎಲ್ಲಾ ರೈತ ಸಂಘಟನೆಗಳ ಮುಖಂಡರು, ರೈತರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಲ ಮನ್ನಾ ಆಂದೋಲನ ಅರ್ಜಿ ಸಲ್ಲಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು
ಸುದ್ದಿಗೋಷ್ಠಿಯಲ್ಲಿ ಅತ್ತಹಳ್ಳಿ ದೇವರಾಜ್, ಹೇಮೇಶ್ ಇದ್ದರು.

Leave a Reply

error: Content is protected !!
LATEST
Kho Kho World Cup 2025: ತಿ.ನರಸೀಪುರದ ಚೈತ್ರಾ ನಾಡು, ದೇಶದ ಕೀರ್ತಿಯ ಮುಗಿಲೆತ್ತೆಕ್ಕೆ ಹಾರಿಸಿದ ಅಪ್ಪಟ ಗ್ರಾಮೀಣ ಪ... ಜಗಜಿತ್ ದಲೈವಾಲ 53 ದಿನಗಳ ಉಪವಾಸ ಕೈ ಬಿಟ್ಟು ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಕುರುಬೂರ್ ಶಾಂತಕುಮಾರ್ KSRTC ಬಸ್‌ ಬ್ರೇಕ್‌ ವೈಫಲ್ಯಗೊಂಡು ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ KSRTC: ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ-ಬೈರೇಗೌಡ KSRTC: ಗೊಂದಲದ ನಡುವೆಯೂ 1280 ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ