ಬೆಂಗಳೂರು: ಕ್ವೀನ್ಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಕಟ್ಟಡದಲ್ಲಿ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಹೋಮ ಹವನ ನೆರವೇರಿತು.
ಎರಡು ವರ್ಷಗಳಿಂದ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದ್ದು, ಈ ಕಟ್ಟಡದಲ್ಲೇ ಡಿಕೆಶಿ ಜುಲೈ 2ರಂದು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದೇ ಕಾರಣದಿಂದ ಪೂಜಾ ಕಾರ್ಯಕ್ರಮವನ್ನು ನೂತನ ಕಟ್ಟಡದಲ್ಲಿ ಆಯೋಜಿಸಿದರು ಎಂದು ಹೇಳಲಾಗಿದೆ.
ಸರ್ಕಾರ ಅನುಮತಿ ನೀಡಿದ್ದರೆ ಇಂದು ಅವರು ಅಧ್ಯಕ್ಷರಾಗಿ ಪದಗ್ರಹಣ ಮಾಡಬೇಕಿತ್ತು, ಆದರೆ ಸರ್ಕಾರ ಪದಗ್ರಹಣ ಸಮಾರಂಭಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಇಂದೇ ಒಳ್ಳೆಯ ದಿನ ಎಂದು ಹೋಮ ಹವನವನ್ನು ನೆರವೇರಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಎಸ್.ಆರ್. ಪಾಟೀಲ, ಡಾ.ಜಿ. ಪರಮೇಶ್ವರ್, ನೂತನ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಹೆಸರಿನಲ್ಲಿ ಸಂಕಲ್ಪ ಮಾಡಿದರು.
ಈ ವೇಳೆ ಮಾತನಾಡಿದ ಡಿಕೆಶಿ, ಯಾವುದೇ ವಿಘ್ನಗಳು ಬಾರದಿರಲಿ ಮತ್ತು ಎಲ್ಲಾ ವಿಘ್ನಗಳು ನಿವಾರಣೆಯಾಗಲಿ ಎಂಬ ಕಾರಣದಿಂದ ಈ ಶುಭ ಮುಹೂರ್ತದಲ್ಲಿ ಪೂಜೆ ನೆರವೇರಿಸಿದ್ದೇವೆ. ಎರಡು ವರ್ಷದಿಂದ ಈ ಕಟ್ಟಡ ಕಾಮಗಾರಿ ನಿಂತಿದ್ದು, ಎಲ್ಲರ ಒಳಿತಿಗಾಗಿ ಹೋಮ ಮಾಡಲಾಗಿದೆ. ಎಲ್ಲಾ ಒಳ್ಳೆಯ ಕೆಲಸಗಳು ಯಾವುದೇ ವಿಘ್ನಗಳಿಲ್ಲದೆ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಿ ಜತೆಗೆ ರಾಜ್ಯ ಕೊರೊನಾ ಮುಕ್ತವಾಗಲಿ ಎಂದು ಪೂಜೆ ನೆರವೇರಿಸಿರುವುದಾಗಿ ತಿಳಿಸಿದರು.
ಲಾಕ್ ಟೌನ್ ಮುಂದುವರಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನು ನಿರ್ಧಾರ ಮಾಡಲು ಆಗುವುದಿಲ್ಲ. ಸರ್ಕಾರ ಏನು ತೀರ್ಮಾನ ಮಾಡುತ್ತಿದೆಯೋ ಅದನ್ನು ಪಾಲಿಸುತ್ತೇವೆ ಸಚಿವರಲ್ಲಿ ಹಲವರು ವೈದ್ಯರಿದ್ದಾರೆ ಅವರು ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ, ನಾವು ಕೇವಲ ಪ್ರಸಾದವನ್ನು ಮಾತ್ರ ಸ್ವೀಕರಿಸುತ್ತೇವೆ ಎಂದು ವ್ಯಂಗ್ಯವಾಡಿದರು.
ಇನ್ನು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿ ಸದ್ಯದಲ್ಲೇ ಪದಗ್ರಹಣ ದಿನ ನಿಗದಿ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇವೇಳೆ ಮಂಗಳಮುಖಿಯರಿಂದ ಕಟ್ಟಡದಲ್ಲಿ ಪೂಜೆ ನೆರವೇರಿಸಿ ಶಿವಕುಮಾರ್ ಆಶೀರ್ವಾದ ಪಡೆದರು.